ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಬೆಂಬಲಿಸಲ್ಲ : ಎ ಮಂಜು
ಹಾಸನ, ಫೆಬ್ರವರಿ 17: ಹಾಸನ ಲೋಕಸಭೆ ಚುನಾವಣಾ ಕಣದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದಕ್ಕೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧವಿದೆ ಎಂದು ಮಾಜಿ ಸಚಿವ ಅರಕಲಗೂಡು ಮಂಜು ಹೇಳಿದ್ದಾರೆ.
ಹಾಸದಲ್ಲಿ ಮೈತ್ರಿಕೂಟದ ಅಭ್ಯರ್ತಿಯಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ಬೆಂಬಲ ನೀಡಲಾಗುವುದು ಎಂದು ಮಾಜಿ ಸಚಿವ ಎ. ಮಂಜು ಹೇಳಿದರು.
ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಖಂಡಿತಾ ನಾವು ಸಹಕಾರ ನೀಡುವುದಿಲ್ಲ ಎಂದು ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ತಿಳಿಸಿದರು. ದೇವೇಗೌಡರ ಕುಟುಂಬದ ರಾಜಕೀಯ ವಿರೋಧಿಯಾಗಿದ್ದೇನೆ. ಆದರೆ, ನಾನು ದೇವೇಗೌಡರ ವೈಯಕ್ತಿಕ ವಿರೋಧಿಯಲ್ಲ ಎಂದಿದ್ದಾರೆ.
'ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಇಲ್ಲಿಯವರೆಗೂ ಎಲ್ಲಿಯೂ ಹೇಳಿಲ್ಲ. ಆದರೆ ರಾಜಕೀಯ ನಿಂತ ನೀರಲ್ಲ' ಎಂದರು. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಲೋಕಸಭೆ ಚುನಾವಣೆಯಲ್ಲೂ ಮುಂದುವರೆಯಲಿದೆ.
ಪ್ರಜ್ವಲ್ ರೇವಣ್ಣ ರಂಗಪ್ರವೇಶಕ್ಕೆ ಎದುರಾಯಿತು ಹೊಸ ವಿಘ್ನ: ಈ ಬಾರಿ ಯಾರಿಂದ?
ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಕಳೆದ ಡಿಸೆಂಬರ್ ನಲ್ಲೇ ದೇವೇಗೌಡರು ಘೋಷಿಸಿದ್ದಾರೆ. ಹಾಸನ ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಿದೆ. ಆದರೆ, ದೇವೇಗೌಡರು ಬೆಂಗಳೂರಲ್ಲಿ ಸ್ಪರ್ಧಿಸುವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ.
ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ
ಕಳೆದ ಹತ್ತು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಪ್ರಜ್ವಲ್ ತೊಡಗಿಸಿಕೊಂಡಿದ್ದಾನೆ. ಬೇಲೂರಿನಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಗೆಲುವು ಸಾಧಿಸುತ್ತಿದ್ದ. ಈ ಬಾರಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾನೆ. ದೇವೇಗೌಡರ ನಿರ್ಣಯದಂತೆ ಎಲ್ಲವೂ ನಡೆಯಲಿದೆ. ಪ್ರಜ್ವಲ್ ಸ್ಪರ್ಧೆಗೆ ಕಾಂಗ್ರೆಸ್ಸಿಗರಿಂದ ವಿರೋಧ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಎಚ್ ಡಿ ರೇವಣ್ಣ ಈ ಹಿಂದೆ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.