ನಿಮ್ಮ ಸಮೀಕ್ಷೆ ನೋಡಿ ಮೋದಿ ಪಿಎಂ ಆಗಲ್ಲ ಅಂದಿದ್ದು: ರೇವಣ್ಣ ಸಮಜಾಯಿಷಿ
Recommended Video
ಹಾಸನ, ಏಪ್ರಿಲ್ 13: ನಿಮ್ಮ ಸಮೀಕ್ಷೆಗಳನ್ನು ನೋಡಿಯೇ ನಾನು ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದ್ದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಮಾಧ್ಯಮದವರು ನೀವೆ ಮೋದಿ ಅವರಿಗೆ ಸಂಕಷ್ಟ ಎಂದು ತೋರಿಸಿದ್ರಿ. ನಿಮ್ಮ ಸಮೀಕ್ಷೆಗಳನ್ನು ನೋಡಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂದಿದ್ದೆ. ಇದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ ಎಂದು ಅವರು ಹೇಳಿದರು.
ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಬಿಟ್ಟು ಹೋಗ್ತೀನಿ: ಎಚ್ ಡಿ ರೇವಣ್ಣ
ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನು ಮೋದಿ ಅವರು ನನ್ನ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ಸುಳ್ಳಿನ ಸರದಾರರು ಎಂದು ಸರ್ಕಾರದ ವಿರುದ್ಧ ಟೀಕಿಸಿದ್ದ ಮೋದಿಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸುಳ್ಳು ಹೇಳಿ ಪ್ರಧಾನಿ ಆಗಬೇಕೇ ಅಥವಾ ಸಂಸದನಾಗಬೇಕೇ ಎಂದು ಪ್ರಶ್ನಿಸಿದರು.
ರಾಮಮಂದಿರ ಇಟ್ಟಿಗೆಗಳಲ್ಲಿ ಮನೆ
ರಾಮಮಂದಿರ ಕಟ್ಟುತ್ತೇವೆ ಎಂದು ಹೇಳಿ ಸಂಗ್ರಹಿಸಿದ ಇಟ್ಟಿಗೆಗಳನ್ನು ಬಳಸಿಕೊಂಡು ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಎಚ್ ಡಿ ರೇವಣ್ಣ ಲೇವಡಿ ಮಾಡಿದರು.
ಬಿಜೆಪಿ ನಾಯಕರು ಇಷ್ಟು ದಿನ ರಾಮನ ಜಪ ಮಾಡುತ್ತಿದ್ದರು. ಈಗ ರಾಮನ ಹೆಸರಿನಲ್ಲಿ ಸಂಗ್ರಹಿಸಿದ್ದ ಇಟ್ಟಿಗೆಗಳು ಎಲ್ಲಿ ಹೋದವು ಎಂದು ಅವರು ಪ್ರಶ್ನಿಸಿದರು.
ಪರ್ಸಂಟೇಜ್ ಸರ್ಕಾರ ನಮ್ಮದಲ್ಲ
ಸಮ್ಮಿಶ್ರ ಸರ್ಕಾರ 20% ಕಮಿಷನ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಆದರೆ, 20% ಸರ್ಕಾರ ಯಡಿಯೂರಪ್ಪನವರದ್ದೇ ಹೊರತು ನಮ್ಮದಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರದ್ದು ಕಮಿಷನ್ ವ್ಯವಹಾರ. ಪರ್ಸಂಟೇಜ್ ಬಗ್ಗೆ ಏನೇ ಇದ್ದರೂ ಯಡಿಯೂರಪ್ಪ, ಈಶ್ವರಪ್ಪ ಹತ್ತಿರ ಕೇಳಿ. ದುಡ್ಡು ಎಣಿಸುವ ಮೆಷಿನ್ ಸಿಕ್ಕಿದ್ದು ಅವರ ಬಳಿಯೇ ಅಲ್ಲವೇ? ಅದನ್ನು ನೀವೇ ತೋರಿಸಿದ್ದಿರಿ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ನನ್ನದು ಸ್ವಾತಿ ನಕ್ಷತ್ರ, ನನ್ನನ್ನು ಏನೂ ಮಾಡಲು ಆಗುವುದಿಲ್ಲ; ರೇವಣ್ಣ
ಹುತಾತ್ಮ ಸೈನಿಕರಿಗೆ ಸೌಲಭ್ಯವಿಲ್ಲ
ಐದು ವರ್ಷದಿಂದ ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿದೆ. ಆದರೆ, ಹುತಾತ್ಮ ಸೈನಿಕರ ಕುಟುಂಬಗಳಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ಹುತಾತ್ಮ ಸೈನಿಕರ ಕುಟುಂಬದವರಿಗೆ 48 ಗಂಟೆಯಲ್ಲಿಯೇ ಕೆಲಸ ಮತ್ತು ಸೌಕರ್ಯ ನೀಡಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸಚಿವ ಸಂಪುಟದಲ್ಲಿ ಒತ್ತಾಯಿಸುತ್ತೇನೆ. ಮತ್ತೆ ಮೋದಿ ಸರ್ಕಾರದ ಬದಲು ಯುಪಿಎ ಸರ್ಕಾರ ಬಂದರೆ ಈ ಕಾರ್ಯಕ್ರಮವನ್ನು ಜಾರಿಗೆ ತರುತ್ತೇವೆ ಎಂದರು.
ನಾಟಕ ಕಂಪೆನಿ ಕ್ಲೋಸ್
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅವರ ನಾಟಕ ಕಂಪೆನಿ ಈ ಚುನಾವಣೆಯ ಬಳಿಕ ಕ್ಲೋಸ್ ಆಗಲಿದೆ ಎಂದು ರೇವಣ್ಣ ಭವಿಷ್ಯ ನುಡಿದರು.
ಕೆ.ಎಸ್. ಈಶ್ವರಪ್ಪ ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ತೀರಾ ಲಘುವಾಗಿ ಮಾತನಾಡುತ್ತಿದ್ದಾರೆ. ಅವರಿಗೂ ಒಂದು ಒಳ್ಳೆ ನಿಂಬೆಹಣ್ಣು ಕೊಡೋಣ ಎಂದು ಅಪಹಾಸ್ಯ ಮಾಡಿದರು. ದುಷ್ಟರ ಮಧ್ಯೆ ಓಡಾಡಲು ಶಕ್ತಿ ಬರಲಿ ಎಂದು ನಿಂಬೆಹಣ್ಣು ಇಟ್ಟುಕೊಳ್ಳುತ್ತಿರುವುದಾಗಿ ಹೇಳಿದರು.
ಮನೆ ಮೇಲೆ ಐಟಿ ದಾಳಿ: ಸಚಿವ ಎಚ್ಡಿ ರೇವಣ್ಣ ಹೇಳಿದ್ದೇನು?
ದ್ರಾಕ್ಷಿ ಗೋಡಂಬಿ ಸಿಕ್ಕಿರಬೇಕು
ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದ್ರಾಕ್ಷಿ ಗೋಡಂಬಿ ಸಿಕ್ಕಿರಬೇಕು ಎಂದು ರೇವಣ್ಣ ವ್ಯಂಗ್ಯವಾಡಿದರು.
ಐಟಿಯವರು ದಾಳಿ ಮಾಡಲಿ ಬಿಡಿ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅರ್ಚಕರ ಮೇಲಾದರೂ ಮಾಡಲಿ, ಈಶ್ವರನ ಮೇಲಾದರೂ ಮಾಡಲಿ. ಆ ಅರ್ಚಕರ ಮನೆಯಲ್ಲಿ ಅವರಿಗೆ ಏನು ಸಿಕ್ಕಿರಲು ಸಾಧ್ಯ? ಹೆಚ್ಚೆಂದರೆ ದ್ರಾಕ್ಷಿ, ಗೋಡಂಬಿ ಸಿಕ್ಕಿರಬಹುದು ಅಷ್ಟೇ ಎಂದು ಲೇವಡಿ ಮಾಡಿದರು.