ಆಸ್ತಿ ವಿವರ ಮುಚ್ಚಿಟ್ಟು ಸಂಕಷ್ಟ: ಪ್ರಜ್ವಲ್ ರೇವಣ್ಣ ಗೆದ್ದರೂ ಸೋಲುತ್ತಾರಾ?
Recommended Video
ಹಾಸನ, ಮೇ 15: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಮೊಮ್ಮಗ, ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣೆ ಫಲಿತಾಂಶ ಹೊರಬರುವ ಮುನ್ನವೇ ಸಂಕಷ್ಟ ಎದುರಾಗಿದೆ.
ಚುನಾವಣಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ವಿವರವನ್ನು ಸಂಪೂರ್ಣವಾಗಿ ಸಲ್ಲಿಸದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಹಾಸನ ಚುನಾವಣಾ ಅಧಿಕಾರಿಗೆ ಸೂಚನೆ ನೀಡಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ತಾವು 7.39 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂದು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ಸಲ್ಲಿಸಿದ್ದರು. ಅಲ್ಲದೆ ತಾವು 3.72 ಕೋಟಿ ರೂ ಸಾಲ ಹೊಂದಿರುವುದಾಗಿಯೂ ಹೇಳಿಕೊಂಡಿದ್ದರು. ಆದರೆ, ಅವರು ಸಲ್ಲಿಸಿರುವ ಆಸ್ತಿ ವಿವರಗಳನ್ನು ಅನೇಕ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಅವರ ಆಸ್ತಿ ವಿವರ ಅಪೂರ್ಣವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಆಸ್ತಿ ವಿವರ: ಪ್ರಜ್ವಲ್ ರೇವಣ್ಣ ವಿರುದ್ಧ ಆಯೋಗಕ್ಕೆ ಗಂಭೀರ ದೂರು
ಬಳಿಕ ಚುನಾವಣಾ ಆಯೋಗವು ಪ್ರಮಾಣಪತ್ರವನ್ನು ಪರಿಶೀಲಿಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು. ಪ್ರಜ್ವಲ್ ರೇವಣ್ಣ ಮತ್ತು ಅವರ ತಾಯಿ ಭವಾನಿ ರೇವಣ್ಣ ಅವರು ಬೇರೆ ಬೇರೆ ಕಂಪೆನಿಗಳೊಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಹಾಸನದಲ್ಲಿ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪವಿದೆ. ಇದೂ ಸೇರಿದಂತೆ ಅನೇಕ ವಿವರಗಳನ್ನು ಅವರು ಆಸ್ತಿ ವಿವರದಲ್ಲಿ ಬಹಿರಂಗಪಡಿಸಿಲ್ಲ ಎಂದು ದೂರು ನೀಡಲಾಗಿತ್ತು.
ತನಿಖೆಗೆ ಆದೇಶ
ಬಿಜೆಪಿ ಅಭ್ಯರ್ಥಿ ಎ. ಮಂಜು ಅವರ ದೂರನ್ನು ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗವು, ಪ್ರಜ್ವಲ್ ರೇವಣ್ಣ ಅವರು ಸಲ್ಲಿರುವ ಆಸ್ತಿ ವಿವರಗಳು ಸಮರ್ಪಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ನಡೆಸಿ ಸಮಗ್ರ ವರದಿ ನೀಡುವಂತೆ ಹಾಸನ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ.
ಪ್ರಜ್ವಲ್ ರೇವಣ್ಣ ನಾಮಪತ್ರ ಮರುಪರಿಶೀಲನೆಗೆ ಚುನಾವಣಾ ಆಯೋಗ ನೋಟಿಸ್
ಪ್ರಜ್ವಲ್ ವಿರುದ್ಧದ ಆರೋಪವೇನು?
ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ನಲ್ಲಿ ಪ್ರಜ್ವಲ್, ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹಾಗೆಯೇ ಎಚ್ ಡಿ ದೇವೇಗೌಡ ಅವರು ತಮಗೆ ನೀಡಿರುವ ಸಾಲದ ಕುರಿತು ಉಲ್ಲೇಖ ಮಾಡಿಲ್ಲ. ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎಚ್ ಡಿ ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದರು. ಇದು ಪ್ರಜ್ವಲ್ ಅವರ ಅಫಿಡವಿಟ್ನಲ್ಲಿ ಇಲ್ಲ. ಇದರ ಬಗ್ಗೆ ವಕೀಲ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.
ಎ.ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ:ಪ್ರಜ್ವಲ್ ರೇವಣ್ಣ ವಾಗ್ದಾಳಿ
ಆರೋಪ ಸಾಬೀತಾದರೆ ಏನಾಗುತ್ತದೆ?
ಹಾಸನ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತನಿಖೆ ನಡೆಸಿ ಪ್ರಜ್ವಲ್ ರೇವಣ್ಣ ಅವರ ಕುರಿತು ಯಾವ ವರದಿ ನೀಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆ 1951ರ 125 ಎ ಪ್ರಕಾರ ಹಾಸನ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬಹುದು. ಒಂದು ವೇಳೆ ಆಸ್ತಿ ವಿವರ ಬಚ್ಚಿಟ್ಟಿರುವುದು ದೃಢಪಟ್ಟರೆ ಅದು ಕ್ರಿಮಿನಲ್ ಅಪರಾಧ ಎಂದಾಗುತ್ತದೆ. ಇದರಿಂದ ಫಲಿತಾಂಶ ಪ್ರಕಟವಾದ ಬಳಿಕ ಪ್ರಮಾಣಪತ್ರ ನೀಡದೆ ಇರಲು ಅವಕಾಶವಿದೆ. ಒಂದು ವೇಳೆ ಪ್ರಜ್ವಲ್ ಚುನಾವಣೆಯಲ್ಲಿ ಗೆದ್ದರೂ ಅವರು ಅನರ್ಹರಾಗುತ್ತಾರೆ.
ಬಿಜೆಪಿಯ ಎ. ಮಂಜುಗೆ ಲಾಭ
ಬಿಜೆಪಿ ಅಭ್ಯರ್ಥಿ ಎ. ಮಂಜು ಮತ್ತು ಪ್ರಜ್ವಲ್ ರೇವಣ್ಣ ಅವರ ನಡುವೆ ನೇರ ಪೈಪೋಟಿ ಇದೆ. ಹಾಸನದಲ್ಲಿ ಪ್ರಜ್ವಲ್ ಗೆದ್ದರೂ, ಅವರು ತಪ್ಪಿತಸ್ಥ ಎಂದು ಸಾಬೀತಾದರೆ, ಎರಡನೆಯ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತದೆ. ಗೆದ್ದ ಅಭ್ಯರ್ಥಿಯ ನಾಮಪತ್ರದಲ್ಲಿನ ತಪ್ಪನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಬಹುದು. ಪ್ರಜ್ವಲ್ ಗೆಲುವನ್ನು ಅನೂರ್ಜಿತಗೊಳಿಸುವಂತೆ ಕೋರಬಹುದು. ಪ್ರಜ್ವಲ್ ಕೂಡ ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಬಹುದು. ಅವರು ತಪ್ಪೆಸಗಿರುವುದು ದೃಢಪಟ್ಟರೆ ಶಿಕ್ಷೆಗೆ ಗುರಿಯಾಗಬಹುದು.
ಪ್ರಜ್ವಲ್ ಆಸ್ತಿ ವಿವರ
ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ, ತಮ್ಮ ಬಳಿ 7,39,21,662 ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿದ್ದರು. 1,100 ಗ್ರಾಂ ಚಿನ್ನ, 23 ಕೆಜಿ ಬೆಳ್ಳಿ ಸೇರಿದಂತೆ 37,31,350 ರೂಪಾಯಿ ಮೌಲ್ಯದ ಚಿನ್ನಾಭರಣವಿದೆ. ಎರಡು ಎತ್ತು, 18 ಹಸು ಸಹಿತ 4,45,000 ಮೌಲ್ಯದ ಜಾನುವಾರುಗಳನ್ನು ಸಾಕಿದ್ದಾರೆ. ಮೈಸೂರಿನಲ್ಲಿ 1.90 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣವಿದೆ. ಹಾಸನ, ದುದ್ದ, ಕಸಬಾ, ಹೊಳೆನರಸೀಪುರದಲ್ಲಿ 4.89 ಕೋಟಿ ರೂ ಮೌಲ್ಯದ ಜಮೀನು ಹೊಂದಿದ್ದಾರೆ.
ಅಜ್ಜಿಗೆ 23 ಲಕ್ಷ ರೂ. ಸಾಲ ನೀಡಿದ ಪ್ರಜ್ವಲ್!
ಏಳು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಲೀಕರಾಗಿದ್ದರೂ ಪ್ರಜ್ವಲ್ ರೇವಣ್ಣ, ಅಷ್ಟೇ ಸಾಲವನ್ನೂ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ತಾಯಿ ಭವಾನಿ ಅವರಿಂದ 43,75,000 ರೂಪಾಯಿ, ತಂದೆ ರೇವಣ್ಣ ಅವರಿಂದ 1,26,000 ರೂ., ತಾತ ದೇವೇಗೌಡರಿಂದ 5 ಲಕ್ಷ ರೂ. ಅತ್ತೆ ಅನಸೂಯ ಮಂಜುನಾಥ್ ಅವರಿಂದ 22 ಲಕ್ಷ ಹಾಗೂ ಅತ್ತೆ ಶೈಲಾ ಅವರಿಂದ 10,50,000 ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದರು. ಅಜ್ಜಿ ಚನ್ನಮ್ಮ ಅವರಿಗೆ 23 ಲಕ್ಷ ರೂ, ಸಹೋದರ ಸೂರಜ್ಗೆ 37,29,000 ರೂ ಮತ್ತು ಸನ್ ಡ್ರೈ ಕಂಪೆನಿಗೆ 25 ಲಕ್ಷ ರೂ ಸಾಲ ನೀಡಿದ್ದಾರೆ. 26,99,848 ರೂ. ನಗದು ಇದೆ ಎಂದು ತಿಳಿಸಿದ್ದರು.