ರಂಗೇರಿತು ಹಾಸನ ಲೋಕಸಭೆ ಕಣ: ಎ. ಮಂಜು ಬಿಜೆಪಿ ಸೇರ್ಪಡೆ
ಹಾಸನ, ಮಾರ್ಚ್ 17: ಹಾಸನ ರಾಜಕೀಯಕ್ಕೆ ಭಾನುವಾರ ಮಹತ್ವದ ತಿರುವು ಸಿಕ್ಕಿದೆ. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಈ ಬಗ್ಗೆ ಕಳೆದ ಕೆಲ ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತು. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಹಾಸನ ಕ್ಷೇತ್ರದಿಂದ ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರೆ.
ಹಾಸನದಲ್ಲಿ ಜೆಡಿಎಸ್ ವಿರುದ್ಧ ಸೆಡ್ಡು ಹೊಡೆಯಲು ಎ ಮಂಜು ರೆಡಿ?
ದೇವೇಗೌಡರು ಸ್ಪರ್ಧೆ ಮಾಡಿದರೆ ನಮ್ಮ ಆಕ್ಷೇಪವಿಲ್ಲ. ಆದರೆ ಪ್ರಜ್ವಲ್ ಸ್ಪರ್ಧಿಸಿದರೆ ನಮ್ಮ ಬೆಂಬಲ ಇಲ್ಲ ಎಂದು ಆರಂಭದಿಂದಲೂ ಎ.ಮಂಜು ಹೇಳುತ್ತಲೇ ಬಂದಿದ್ದರು. ಜತೆಗೆ ಈಚೆಗೆ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ, ಮಾತುಕತೆ ಕೂಡ ನಡೆಸಿದ್ದರು. ಆ ನಂತರ ಎ.ಮಂಜು ಹಾಸನದಿಂದ ಬಿಜೆಪಿ ಅಭ್ಯರ್ಥಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು.
ಆದರೆ, ಮಂಜು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಅಂತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಎದುರು ಹೇಳಿದ್ದರು. ಇದೀಗ ಸಿದ್ದರಾಮಯ್ಯ ಅವರ ಭರವಸೆ, ನಂಬಿಕೆ ಸುಳ್ಳಾಗಿದೆ. ಮಂಜು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಂಜು ಸೋಲು ಕಂಡಿದ್ದರು. ಅದಕ್ಕೂ ಮುಂಚಿನ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರೂ ಆಗಿದ್ದರು.
ಬಿಜೆಪಿ ಸೇರುವ ಬಗ್ಗೆ ಮಾಜಿ ಸಚಿವ ಎ.ಮಂಜು ಹೇಳಿದ್ದೇನು?
ಬಿಜೆಪಿಯ ಹಾಗೂ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಭಾನುವಾರ ಹಾಸನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಎ.ಮಂಜು ಅವರು ಶಾಸಕ ಪ್ರೀತಮ್ ಗೌಡ ಸಮ್ಮಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.ಅ ನಂತರ ಎ.ಮಂಜು ಅವರಿಗೆ ಮಾತೃ ಪಕ್ಷ ಬಿಜೆಪಿಗೆ ಸ್ವಾಗತ ಕೋರಿ, ಸದಸ್ಯತ್ವ ನೋಂದಣಿ ಮಾಡಿಸಿ, ಪಕ್ಷದ ಬಾವುಟವನ್ನು ನೀಡಿ, ಪ್ರೀತಮ್ ಗೌಡ ಸ್ವಾಗತಿಸಿದರು.