ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?
ಹಾಸನ, ಮೇ 24: ಹೀಗೊಂದು ಅನುಮಾನ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಪ್ರಜ್ವಲ್ ರಾಜೀನಾಮೆ ನಿರ್ಧಾರದ ಹಿಂದೆ ದೇವೇಗೌಡರು ಮತ್ತು ಅವರ ತ್ಯಾಗ, ಹೋರಾಟಗಳು, ತುಮಕೂರಿನಲ್ಲಿ ಅವರ ಸೋಲಿನ ನೋವು ಮುಂತಾದ ಕಾರಣಗಳನ್ನು ನೀಡಿದರೂ, ರಾಜಕೀಯ ವಲಯದಲ್ಲಿ ಮುಖ್ಯವಾಗಿ ಚರ್ಚೆಗೆ ಒಳಗಾಗುತ್ತಿರುವುದು ಅನರ್ಹತೆಯ ಭೀತಿ.
ತುಮಕೂರಿನಲ್ಲಿ ದೇವೇಗೌಡ ಅವರ ಸೋಲಿನಿಂದ ಪಕ್ಷ ಮತ್ತು ರಾಜ್ಯದ ಜನತೆಗೆ ಆಘಾತವಾಗಿದೆ. ಅವರ ಗೆಲುವು ಈ ರಾಜ್ಯಕ್ಕೆ ಅಗತ್ಯವಿತ್ತು. ರಾಷ್ಟ್ರ ರಾಜಕಾರಣದಲ್ಲಿ ಅವರಿಗೆ ಅಪಾರ ಸಂಪರ್ಕ, ಜ್ಞಾನವಿದೆ. ಅವರು ಸಂಸದರಾಗಿದ್ದರೆ ರಾಜ್ಯದ ಜನತೆಗೆ ಅನುಕೂಲ. ಹೀಗಾಗಿ ಅವರು ಮತ್ತೆ ಗೆಲ್ಲಬೇಕು. ಅದಕ್ಕಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ನಾಟಕೀಯ ಬೆಳವಣಿಗೆ: ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ
ಹಾಸನದ ಜನತೆಗೆ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ಕಾರಣದಿಂದ ತಮ್ಮ ರಾಜೀನಾಮೆಯ ನಿರ್ಧಾರದ ಉದ್ದೇಶವನ್ನು ಅವರು ಅರ್ಥಮಾಡಿಕೊಂಡು ದೇವೇಗೌಡರನ್ನು ಗೆಲ್ಲಿಸುತ್ತಾರೆ. ಅವರಿಗೆ ಮತ್ತೆ ಶಕ್ತಿ ತುಂಬುವುದು ನನ್ನ ಗುರಿ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ನೀಡುವ ಕಾರಣಗಳು ಅವರ ಹಾಗೂ ಜೆಡಿಎಸ್ನ ಸಮರ್ಥನೆಯ ಬಲವಾದ ಸಂಗತಿಗಳಾಗಿದ್ದರೂ, ಗೆದ್ದಿದ್ದರೂ ಸೋಲುವ ಭಯವೇ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಅನರ್ಹತೆ ಖಚಿತ?
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅನರ್ಹಗೊಂಡು ತಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಳ್ಳು ಆಸ್ತಿ ವಿವರ ಸಲ್ಲಿಸಿರುವುದು ಪ್ರಜ್ವಲ್ಗೆ ಸಂಕಷ್ಟ ತಂದೊಡ್ಡಿದೆ. ಈ ಪ್ರಕರಣ ತನಿಖೆಯ ಹಂತದಲ್ಲಿದೆ. ಆರೋಪ ಸಾಬೀತಾದರೆ, ಪ್ರಜ್ವಲ್ ಅನರ್ಹತೆ ಖಚಿತ. ಅಲ್ಲದೆ, ಆರು ವರ್ಷ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ನಿರ್ಬಂಧಕ್ಕೆ ಒಳಗಾಗುತ್ತಾರೆ. ಈ ಭೀತಿಯ ಕಾರಣಕ್ಕಾಗಿಯೇ ಅವರು ತರಾತುರಿಯಲ್ಲಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
Array |
ಇದು ದೊಡ್ಡ ನಾಟಕ
ಪ್ರಜ್ವಲ್ ರಾಜೀನಾಮೆ ದೊಡ್ಡ ನಾಟಕ. ಆಸ್ತಿ ವಿವರದ ಬಗ್ಗೆ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿ ವರದಿ ಸಲ್ಲಿಸಿದ್ದಾರೆ. ಗೆಲುವು ಸಾಧಿಸಿದ್ದರೂ ಅನರ್ಹಗೊಳ್ಳುವುದನ್ನು ಅರಿತೇ ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕ ಆಡುತ್ತಿದ್ದಾರೆ ಎಂದು ಪ್ರಜ್ವಲ್ ವಿರುದ್ಧ ದೂರು ಸಲ್ಲಿಸಿದ್ದ ವಕೀಲ ದೇವರಾಜ್ ಗೌಡ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಗೆದ್ದರೂ ಅನರ್ಹರಾಗುತ್ತಾರಾ? ಪ್ರಜ್ವಲ್ ರೇವಣ್ಣ ತಾತ್ಕಾಲಿಕ ಎಂಪಿ?
ಏಕಾಂಗಿಯಾಗಿ ಸಂಸತ್ ಪ್ರವೇಶ
ಪ್ರಜ್ವಲ್ ರೇವಣ್ಣ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ಓಡಾಡಿದ್ದರೂ ಅವರು ಚುನಾಯಿತ ಪ್ರತಿನಿಧಿಯಾಗಿ ಯಾವುದೇ ಅನುಭವ ಹೊಂದಿಲ್ಲ. ತಮ್ಮೊಂದಿಗೆ ತಾತ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಇತರೆ ಹಿರಿಯ ಮುಖಂಡರು ಸಂಸತ್ ಪ್ರವೇಶಿಸಲಿದ್ದಾರೆ. ರಾಜಕಾರಣದ ಪಾಠ ಹೇಳಿಕೊಡಲಿದ್ದಾರೆ ಎಂಬ ಭರವಸೆ ಅವರಲ್ಲಿತ್ತು. ಆದರೆ, ಮೈತ್ರಿಕೂಟದಲ್ಲಿ ಕಾಂಗ್ರೆಸ್ನ ಡಿ.ಕೆ. ಸುರೇಶ್ ಹೊರತುಪಡಿಸಿ ದೇವೇಗೌಡರು ಸೇರಿದಂತೆ ಎಲ್ಲ ನಾಯಕರೂ ಸೋಲು ಅನುಭವಿಸಿದ್ದು, ಪ್ರಜ್ವಲ್ ಅವರನ್ನು ಏಕಾಂಗಿಯಾಗಿಸಿದೆ. ಯಾವುದೇ ರಾಜಕೀಯ ಅನುಭವ ಇಲ್ಲದೆ, ಸಂಸತ್ ಕಲಾಪಗಳಲ್ಲಿ ಭಾಗವಹಿಸುವುದು, ಅಲ್ಲಿನ ನಾಯಕರೊಂದಿಗೆ ಬೆರೆಯುವುದು ಹೇಗೆ ಎಂಬ ಕಳವಳ ಹಾಗೂ ಭೀತಿ ಅವರಲ್ಲಿದೆ. ಇದು ಕೂಡ ಅವರು ರಾಜೀನಾಮೆಗೆ ತಕ್ಷಣ ನಿರ್ಧಾರ ಕೈಗೊಳ್ಳಲು ಕಾರಣ ಎನ್ನಲಾಗಿದೆ.
ಎ. ಮಂಜು ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ಅವರ ರಾಜೀನಾಮೆ ಅವರ ವೈಯಕ್ತಿಕ ವಿಚಾರ. ತಾತ ದೇವೇಗೌಡ ಅವರ ಸೋಲಿನ ನೋವು ಅರ್ಥ ಮಾಡಿಕೊಂಡು ಅವರು ರಾಜೀನಾಮೆ ನಿರ್ಧಾರ ಕೈಗೊಂಡಿರಬಹುದು. ಹಾಸನದಲ್ಲಿ ದೇವೇಗೌಡರು ನಿಲ್ಲಲಿ ಎಂದು ಈ ಹಿಂದೆಯೇ ಹೇಳಿದ್ದೆ. ದೇವೇಗೌಡರಿಗೆ ಈಗ ಅರ್ಥ ಆಗಿದೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
|
ರಾಜೀನಾಮೆ ನಾಟಕ
ರಾಜೀನಾಮೆ ಕೊಟ್ಟರೆ, ಮತ್ತೆ ಚುನಾವಣೆ. ಅಜ್ಜನನ್ನು ನಿಲ್ಲಿಸಿ ಗೆಲ್ಲಿಸುವ ತಂತ್ರ. ರಾಜೀನಾಮೆ ಕೊಡದೆ ಇದ್ದರೆ, ಅಕ್ರಮ ಸಾಬೀತಾಗಿ, ಸಂಸದ ಪಟ್ಟ ಅಸಿಂಧುವಾಗಿ, ಪಟ್ಟ ಪಟ್ಟಿಯಲ್ಲಿ ಎರಡನೆ ಸ್ಥಾನದವರಿಗೆ ಹೋಗುತ್ತೆ. ಅದನ್ನು ತಪ್ಪಿಸಲು ಈಗ ರಾಜೀನಾಮೆ ನಾಟಕ ಎಂದು ಲೇಖಕ ರೋಹಿತ್ ಚಕ್ರತೀರ್ಥ ಲೇವಡಿ ಮಾಡಿದ್ದಾರೆ.
|
ಚುನಾವಣೆಗೆ ಸುರಿಯುವುದು ಯಾರ ದುಡ್ಡು?
ಪ್ರಜ್ವಲ್ ರಾಜೀನಾಮೆ ಸಲ್ಲಿಸಿದರೆ ಹಾಸನದಲ್ಲಿ ಉಪ ಚುನಾವಣೆ ನಡೆಯಬೇಕಾಗುತ್ತದೆ. ಅದಕ್ಕೆ ಸಿದ್ಧತೆ ನಡೆಸುವುದು, ಚುನಾವಣೆ ಘೋಷಣೆ, ನಾಮಪತ್ರ ಸಲ್ಲಿಕೆ, ಪ್ರಚಾರ, ಮತ್ತೆ ಮತದಾನ, ಫಲಿತಾಂಶ ಹೀಗೆ ಇನ್ನೊಂದು ಸಣ್ಣ ಯುದ್ಧವೇ ನಡೆಯುತ್ತದೆ. ಆದರೆ, ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಇದು ಯಾರ ಹಣ? ಸಾರ್ವಜನಿಕರ ಹಣವನ್ನು ಹೀಗೆ ಚುನಾವಣೆ ನಡೆಸುವ ಸಲುವಾಗಿ ಪೋಲು ಮಾಡುವುದು ಎಷ್ಟು ಸರಿ? ತ್ಯಾಗದ ನೆಪದಲ್ಲಿ ಕುಟುಂಬ ರಾಜಕಾರಣಕ್ಕಾಗಿ ಉಪ ಚುನಾವಣೆ ನಡೆಯುವಂತೆ ಮಾಡುವ ಇವರಿಗೆ ನೈತಿಕತೆ ಇದೆಯೇ? ಮಿಗಿಲಾಗಿ ಇಷ್ಟು ದೊಡ್ಡ ಅಂತರದಿಂದ ಗೆಲ್ಲಿಸಿಕೊಂಡ ಜನರಿಗೆ ನೀಡುವ ಗೌರವವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.