ಗೆದ್ದರೂ ಅನರ್ಹರಾಗುತ್ತಾರಾ? ಪ್ರಜ್ವಲ್ ರೇವಣ್ಣ ತಾತ್ಕಾಲಿಕ ಎಂಪಿ?
ಬೆಂಗಳೂರು, ಮೇ 24: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎ.ಮಂಜು ವಿರುದ್ಧ 1.40 ಲಕ್ಷ ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶಿಸಿದ್ದಾರೆ. ಲೋಕಸಭೆಗೆ ಪ್ರವೇಶಿಸುತ್ತಿರುವ ಅತಿ ಕಿರಿಯ ಸಂಸದರಲ್ಲಿ ಪ್ರಜ್ವಲ್ ಕೂಡ ಒಬ್ಬರು. ಮೊದಲ ಪ್ರಯತ್ನದಲ್ಲಿಯೇ ಅವರು ಈ ಸಾಧನೆ ಮಾಡಿದ್ದಾರೆ.
ತಾತ, ಮಾಜಿ ಪ್ರಧಾನಿ ದೇವೇಗೌಡ, ಚಿಕ್ಕಪ್ಪನ ಮಗ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಕ್ರಮವಾಗಿ ತುಮಕೂರು ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಸೋಲಿನ ಅಘಾತ ಅನುಭವಿಸಿರುವಾಗ, ಪ್ರಜ್ವಲ್ ರೇವಣ್ಣ ಏಕೈಕ ಆಶಾಕಿರಣವಾಗಿ ಜೆಡಿಎಸ್ಗೆ ಕಾಣಿಸಿಕೊಂಡಿದ್ದಾರೆ. ಹಾಸನ ಸಹಜವಾಗಿಯೇ ಜೆಡಿಎಸ್ ಭದ್ರ ನೆಲೆಯಾಗಿರುವುದರಿಂದ ಪ್ರಜ್ವಲ್ ಗೆಲುವನ್ನು ಸುಲಭವಾಗಿ ಊಹಿಸಲಾಗಿತ್ತು. ಮೊಮ್ಮಗನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು, ಪಟ್ಟು ಹಿಡಿದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಮಕೂರಿನಲ್ಲಿ ಸ್ಪರ್ಧಿಸಿದ್ದರು.
ಹಾಸನದಲ್ಲಿ ನಾಟಕೀಯ ಬೆಳವಣಿಗೆ: ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ
ಐದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಪ್ರಜ್ವಲ್ ರೇವಣ್ಣ, ತಮ್ಮ ಗೆಲುವಿಗೆ ಸಂಭ್ರಮಿಸುವುದೋ ಅಥವಾ ಕುಟುಂಬ ಹಾಗೂ ಪಕ್ಷದ ಹೀನಾಯ ಸೋಲಿಗೆ ದುಃಖಿಸುವುದೋ ಎಂಬ ಗೊಂದಲದಲ್ಲಿ ಇರಬಹುದು. ಆದರೆ, ಸಾಮಾಜಿಕ ಜಾಲತಾಣಗಳು, ಹಾಗೂ ಹಾಸನದ ಬಿಜೆಪಿ ವಲಯದಲ್ಲಿ ಬೇರೆಯದೇ ಲೆಕ್ಕಾಚಾರ ನಡೆಯುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆಯೂ ಆಗುತ್ತಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿತ್ತು. ಇದರಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಆದರೆ, ಈ ಗೆಲುವೂ ತಾತ್ಕಾಲಿಕವೇ? ಪ್ರಜ್ವಲ್ ರೇವಣ್ಣ ಸಂಸದರಾಗಿಯೇ ಮುಂದುವರಿಯುತ್ತಾರಾ? ಜೆಡಿಎಸ್ ಸಾಧನೆ ಶೂನ್ಯ ಆಗುತ್ತದೆಯೇ? ಈ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಸಂಸದರಾಗುತ್ತಾರೆಯೇ? ಈ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ.
|
ಪ್ರಜ್ವಲ್ಗೆ ಇದೆ ಕಂಟಕ
ಪ್ರಜ್ವಲ್ ರೇವಣ್ಣ ಗೆದ್ದರೂ ಅವರು ಸಂಸದರಾಗಿಯೇ ಇರುತ್ತಾರೆ ಎನ್ನುವಂತಿಲ್ಲ. ಅವರ ಸದಸ್ಯತ್ವ ಅನರ್ಹಗೊಂಡರೂ ಅಚ್ಚರಿಯಿಲ್ಲ. ಇದಕ್ಕೆ ಕಾರಣ ಅವರು ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ವಿವರಗಳನ್ನು ಸರಿಯಾಗಿ ಸಲ್ಲಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಕಾಂಗ್ರೆಸ್ ಕಾರ್ಯಕರ್ತ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವರದಿ ಸಲ್ಲಿಸಿದ್ದ ಜಿಲ್ಲಾಧಿಕಾರಿ
ಪ್ರಜ್ವಲ್ ರೇವಣ್ಣ ಅವರ ಆಸ್ತಿ ವಿವರಗಳಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನು ಪರಿಶೀಲಿಸಿದ್ದ ರಾಜ್ಯ ಚುನಾವಣಾ ಆಯೋಗ, ಈ ಬಗ್ಗೆ ವರದಿ ನೀಡುವಂತೆ ಹಾಸನ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಐದು ಪುಟಗಳ ವರದಿ ನೀಡಿದ್ದರು. ಈ ಎಲ್ಲ ಆರೋಪಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದರು.
ಸುಳ್ಳು ಅಫಿಡವಿಟ್ ಆರೋಪ: ಡಿಸಿ ವರದಿಯಲ್ಲಿ ಪ್ರಜ್ವಲ್ ರೇವಣ್ಣ ಭವಿಷ್ಯ
ಚುನಾವಣಾ ಆಯೋಗದಲ್ಲಿದೆ ಚೆಂಡು
ಒಂದು ವೇಳೆ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆಯ ತನಿಖೆಗೆ ಸೂಚನೆ ನೀಡಬಹುದು. ಇದರಂತೆ ಆದಾಯ ತೆರಿಗೆ ಇಲಾಖೆ ತನಿಖೆಗೆ ಮುಂದಾದರೆ, ದೇವೇಗೌಡರ ಕುಟುಂಬವನ್ನೇ ತನಿಖೆಗೆ ಒಳಪಡಿಸಬೇಕಾಗಬಹುದು. ಏಕೆಂದರೆ, ಎಚ್.ಡಿ. ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಸಾಲ ನೀಡಿರುವುದಾಗಿ ನಾಮಪತ್ರದಲ್ಲಿ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಜ್ವಲ್ ರೇವಣ್ಣ ಅಫಿಡವಿಟ್ನಲ್ಲಿ ಮಾಹಿತಿ ನೀಡಿಲ್ಲ. ಆದರೆ, ಅಜ್ಜಿ ಚನ್ನಮ್ಮ ದೇವೇಗೌಡ ಅವರಿಗೆ ಸಾಲ ನೀಡಿರುವುದಾಗಿ ಪ್ರಜ್ವಲ್ ದಾಖಲಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ತನಿಖೆಗೆ ಒಳಪಡಿಸಿದರೆ ಕುಟುಂಬವೇ ಸಂಕಷ್ಟಕ್ಕೆ ಒಳಗಾಗಲಿದೆ.
ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ
ನ್ಯಾಯಾಲಯದ ಮೆಟ್ಟಿಲೇರಬಹುದು
ಒಂದು ವೇಳೆ ಚುನಾವಣಾ ಆಯೋಗವು ಪ್ರಜ್ವಲ್ ರೇವಣ್ಣ ಅವರ ಅಫಿಡವಿಟ್ ಮಾಹಿತಿ ಸರಿಯಾಗಿದೆ ಎಂದು ಅವರನ್ನು ಆರೋಪಮುಕ್ತರನ್ನಾಗಿ ಮಾಡಿದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲು ಬಿಜೆಪಿಯ ಎ.ಮಂಜು ಅವರಿಗೆ ಅವಕಾಶವಿದೆ. ಪ್ರಜ್ವಲ್ ಅವರ ಅನರ್ಹತೆಗೆ ಆಗ್ರಹಿಸಿ ಅವರು ಕಾನೂನು ಹೋರಾಟ ನಡೆಸಬಹುದು. ಇಲ್ಲಿ ಎ.ಮಂಜು ಗೆದ್ದರೆ, ನ್ಯಾಯಾಲಯದ ಆದೇಶದಂತೆ ಪ್ರಜ್ವಲ್, ಅನರ್ಹಗೊಳ್ಳುವ ಸಾಧ್ಯತೆ ಇದೆ.
ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ
ಆರು ವರ್ಷ ಸ್ಪರ್ಧಿಸುವಂತಿಲ್ಲ
ಪ್ರಜಾಪ್ರತಿನಿಧಿ ಕಾಯ್ದೆ 125ಎ ಮತ್ತು 1951ರ ಅಡಿ ಕ್ರಮ ತೆಗೆದುಕೊಂಡರೆ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣಾ ಆಯೋಗ ದಂಡ ವಿಧಿಸಬಹುದು. ಅಥವಾ ಅವರನ್ನು ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಮಿಗಿಲಾಗಿ ಇಷ್ಟು ದೊಡ್ಡ ಅಂತರದಿಂದ ಗೆದ್ದಿದ್ದರೂ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನ ಕಳೆದುಕೊಳ್ಳಬಹುದು. ಇದರಿಂದ ಇಡೀ ರಾಜ್ಯದಲ್ಲಿ ಜೆಡಿಎಸ್ ಸಾಧನೆ 'ಶೂನ್ಯ'ವಾಗುತ್ತದೆ. ಚುನಾವಣೆಯಲ್ಲಿ ಎರಡನೆಯ ಸ್ಥಾನ ಪಡೆದ ಎ. ಮಂಜು ಅವರು ಸಂಸದರಾಗುವ ಅರ್ಹತೆ ಪಡೆದುಕೊಳ್ಳುತ್ತಾರೆ. ಇದರಿಂದ ಹಾಸನದಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಾರೆ.
ಪ್ರಜ್ವಲ್ ವಿರುದ್ಧದ ಆರೋಪಗಳೇನು?
ಹೊಳೆನರಸೀಪುರದಲ್ಲಿ ರೇವಣ್ಣ ಅವರಿಂದ ಬಳವಳಿಯಾಗಿ ಬಂದ ಜಾಗದಲ್ಲಿ ಕನ್ವೆನ್ಷನಲ್ ಹಾಲ್ ಕಟ್ಟಿಸಿರುವುದರ ಬಗ್ಗೆ ಪ್ರಜ್ವಲ್ ಅವರು ಅಫಿಡವಿಟ್ನಲ್ಲಿ ಮಾಹಿತಿ ನೀಡಿಲ್ಲ. ತಾತ ಎಚ್ ಡಿ ದೇವೇಗೌಡ ಅವರಿಂದ ಸಾಲ ಪಡೆದಿರುವುದರ ಕುರಿತು ಕೂಡ ದಾಖಲೆಯಲ್ಲಿ ಹೇಳಿಲ್ಲ. 2014-17ರವರೆಗಿನ ಆದಾಯ ಲಾಭ-ನಷ್ಟದ ಬಗ್ಗೆ ಕಲಂನಲ್ಲಿ ಮಾಹಿತಿ ಕೊಟ್ಟಿಲ್ಲ. 2018ರ ಪೂರ್ವ ವರ್ಷದ ಆದಾಯದ ಬಗ್ಗೆ ಮಾಹಿತಿ ಒದಗಿಸಿಲ್ಲ. ಆದಾಯ ಪ್ರಮಾಣ ಪತ್ರ ಇಲ್ಲದೆಯೇ ಬ್ಯಾಂಕ್ನಿಂದ ಸಾಲ ಹೇಗೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವವರು ಕಡ್ಡಾಯವಾಗಿ ತಮ್ಮ ಐದು ವರ್ಷದ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೂ ಸೂಚಿಸಿತ್ತು. ಆದರೆ ಪ್ರಜ್ವಲ್ 2018ರ ಆದಾಯದ ವಿವರಗಳನ್ನು ಮಾತ್ರ ಸಲ್ಲಿಸಿದ್ದಾರೆ. ಪ್ರಜ್ವಲ್ ಅವರು 3.70 ಕೋಟಿ ಸಾಲ ಪಡೆದ ಮಾಹಿತಿ ನೀಡಲಾಗಿದ್ದು, ಅದರ ಮೂಲದ ಬಗ್ಗೆ ನಮೂದಿಸಿಲ್ಲ. ಅದಕ್ಕೆ ಆದಾಯ ತೆರಿಗೆ ಕಟ್ಟಲಾಗಿದೆಯೇ ಎಂಬುದನ್ನೂ ವಿವರಿಸಿಲ್ಲ.