ಹಾಸನ; ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಿಗ್ ಫೈಟ್!
ಹಾಸನ, ನವೆಂಬರ್ 23; ವಿಧಾನ ಪರಿಷತ್ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಹಾಸನ ಜಿಲ್ಲೆಯಲ್ಲಿ ಚುನಾವಣಾ ರಾಜಕೀಯ ಜೋರಾಗಿತ್ತು. ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ಇಂದು ಮತ್ತೊಂದು ನಾಮಪತ್ರ ಹಾಗೂ ಅಫಿಡೆವಿಟ್ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಎಚ್. ಎಂ. ವಿಶ್ವನಾಥ್ ಕೂಡ ಮಂಗಳವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎಂ. ವಿಶ್ವನಾಥ್ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂ ಗೌಡ ಜೊತೆ ನಾಮಪತ್ರ ಸಲ್ಲಿಕೆ ಮಾಡಿದರು. ಎಂ. ಶಂಕರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ನತ್ತ ಮಾಜಿ ಸಚಿವ; ಸಿದ್ದರಾಮಯ್ಯ ಭೇಟಿ!
ಮಾಧ್ಯಮಗಳ ಜೊತೆ ಮಾತನಾಡಿದ ಎಂ. ವಿಶ್ವನಾಥ್ ಪ್ರತಿಸ್ಪರ್ಧಿ ಸೂರಜ್ ರೇವಣ್ಣ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದರು. "ಪರಿಷತ್ ಹಿರಿಯರು ಇರುವ ವಿಧಾನ ಮಂಡಲ ಮೇಲ್ಮನೆಗೆ ಕಿರಿಯರನ್ನು ಏಕೆ ಕಳುಹಿಸುತ್ತೀರಾ?. ಹಿರಿಯರನ್ನೇ ಕಳುಹಿಸಿ" ಎಂದು ಮತದಾರರಲ್ಲಿ ಮನವಿ ಮಾಡಿದರು.
ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್!
"ಸಹಜವಾಗಿ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ. ಅಧಿಕಾರ ಒಂದೇ ಕಡೆ ಕೇಂದ್ರಿಕೃತವಾಗಬಾರದು. ಅದು ವಿಕೇಂದ್ರಿಕರಣವಾಗಬೇಕು. ಇದು ಮೇಲ್ಮನೆ ಚುನಾವಣೆ ಹಿರಿಯರ ಮನೆ ಚುನಾವಣೆ. ಸ್ಪೀಕರ್ ಹೊರಟ್ಟಿ ಎಂಟು ಭಾರಿ ಆಯ್ಕೆಯಾಗಿದ್ದಾರೆ. ನಲವತ್ತು ವರ್ಷದಿಂದ ಅವರು ಇದ್ದಾರೆ, ಅಂತಹ ಮನೆಯಲ್ಲಿ ಯಾರಿರಬೇಕು?" ಎಂದು ಜೆಡಿಎಸ್ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡಿದರು.
ಪರಿಷತ್ ಚುನಾವಣೆ; ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ
"ಹಾಸನದಿಂದ ಬಿ. ಬಿ. ಶಿವಪ್ಪ, ಬಿ. ಆರ್. ಕೃಷ್ಣಮೂರ್ತಿ ಆಯ್ಕೆಯಾಗಿ ಮೇಲ್ಮನೆಗೆ ಹೋಗಿದ್ದಾರೆ. ದೇವೇಗೌಡರೇ ರಾಜ್ಯಸಭೆಯಲ್ಲಿ ಹಿರಿಯರಾಗಿ ಇದ್ದಾರೆ. ಇಲ್ಲಿ ಹಿರಿಯರ ಸಭೆಗೆ ಕಿರಿಯರು ಏಕೆ?. ಹಿರಿಯರು ಅಂದರೆ ಅನುಭವ, ತಿಳುವಳಿಕೆ ಇರುವವರು. ಪಂಚಾಯತ್ ರಾಜ್ನಿಂದ ಆಯ್ಕೆ ಮಾಡುವ ಚುನಾವಣೆ. ಗಾಂಧಿ ವಿಚಾರಗಳನ್ನು ಇಟ್ಟುಕೊಂಡು ಹೋಗಿರುವುದು ವಿಕೇಂದ್ರಿಕರಣ. ಅಧಿಕಾರ ಕೇಂದ್ರಿಕೃತವಾಗುವಂತಹ ರಾಜಕಾರಣಕ್ಕೆ ಹಾಸನ ಜಿಲ್ಲೆ ಸೆಡ್ಡು ಹೊಡಿಯಬೇಕು. ಅದರ ವಿರುದ್ದ ಜನಶಕ್ತಿ ಎದ್ದು ನಿಂತಿದೆ" ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಸಿದರು.
ಒಂದು ಮನೆತನಕ್ಕಾಗಿ ಓಟು ಮಾಡಬೇಡಿ
"ಆತ್ಮಸಾಕ್ಷಿಯಂತೆ ಓಟು ಮಾಡಿ. ಯಾವುದೇ ಹಣಕ್ಕಾಗಲಿ, ಅಧಿಕಾರಕ್ಕಾಗಲಿ, ಜಾತಿಯ ಬಲಕ್ಕಾಗಲಿ, ಒಂದು ಮನೆತನಕ್ಕಾಗಿ ಓಟು ಮಾಡಬೇಡಿ. ಹಾಗೇ ಮಾಡಿದರೆ ನಾವೇ ಆತ್ಮಹತ್ಯೆ ಮಾಡಿಕೊಂಡಂಗೆ. ಹಿರಿಯರ ಮನೆಗೆ ಹಿರಿಯರನ್ನು ಕಳುಹಿಸಿ. ಕಿರಿಯರಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಇದೆ. ಜ್ಞಾನ, ಅನುಭವ ಇರುವವರನ್ನು ಕಳುಹಿಸಿದರೆ ಈ ಜಿಲ್ಲೆಗೆ ಅನುಕೂಲವಾಗುತ್ತದೆ" ಎಂದು ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ಎಂ. ವಿಶ್ವನಾಥ್ ಮನವಿ ಮಾಡಿದರು.
ಅಪ್ಪ ಬಿಜೆಪಿಯಲ್ಲಿ, ಮಗ ಕಾಂಗ್ರೆಸ್ನಿಂದ ಸ್ಪರ್ಧೆ
ಮಂಥರ್ ಗೌಡ ಕೊಡಗಿನಲ್ಲಿ ಕಾಂಗ್ರೆಸ್ನಿಂದ ವಿಧಾನ ಪರಿಷತ್ಗೆ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಬಿಜೆಪಿ ನಾಯಕ, ಮಾಜಿ ಸಚಿವ ಎ.ಮಂಜು ಸ್ಪಷ್ಟನೆ ನೀಡಿದರು. "ಸೋನಿಯಾ ಗಾಂಧಿ, ಮೇನಕಾ ಗಾಂಧಿ ಯಾರೂ ಈ ದೇಶದಲ್ಲಿ?. ಅವರು ಬಿಜೆಪಿ, ಇವರು ಕಾಂಗ್ರೆಸ್ನಲ್ಲಿ ಇಲ್ವಾ?. ದೇವೇಗೌಡರ ಕುಟುಂಬದವರೆಲ್ಲಾ ಜನತಾದಳ ಅಂತಿದ್ದಾರೆ ಅಷ್ಟೇ. ಎಲ್ಲಾ ಪಾರ್ಟಿನಲ್ಲೂ ಅವರೇ ಇದ್ದಾರೆ. ಅವರು ಒಳಒಪ್ಪಂದದ ಚುನಾವಣೆ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ಡಾ. ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಆಗಬೇಕಿತ್ತು. ಏತಕ್ಕೆ ತಪ್ಪಿ ಹೋಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ" ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್ಗೆ ಹೋಗುವ ಪ್ರಶ್ನೆ ಇಲ್ಲ
"ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಆಗಿಲ್ಲ, ಅವರಿಗೆ ಆರೋಗ್ಯ ಹದಗೆಟ್ಟಾಗ ಭೇಟಿಯಾಗಿದ್ದು. ನನ್ನ ಜೊತೆ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ರೇವಣ್ಣ ವಿಶ್ವಾಸದಲ್ಲಿ ಮಾತನಾಡಿದ್ದಾರೆ. ನಾನು ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ. ನಾನು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಪರ ಓಟು ಹಾಕಿಸುತ್ತೇನೆ. ಕಳೆದ ಚುನಾವಣೆಯಲ್ಲಿ 900 ಓಟು ಜಾಸ್ತಿ ಜೆಡಿಎಸ್ಗೆ ಇತ್ತು. ಕುಟುಂಬದ ವಿರುದ್ದವಾಗಿ ಓಟು ಹಾಕಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದರು. ಮೇಲ್ಮನೆಗೆ ಯಾರು ಹೋಗಬೇಕು ಅನ್ನೋದನ್ನು ಮತದಾರರು ಯೋಚನೆ ಮಾಡಬೇಕು. ಏನು ಅನುಭವವಿಲ್ಲದ, ಗ್ರಾಮ ಪಂಚಾಯಿತಿ ಸದಸ್ಯನು ಆಗದೆ ಇದ್ದಕ್ಕಿದ್ದಂತೆ ಚುನಾವಣೆಗೆ ನಿಂತಿರುವುದರಿಂದ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಿರಸ್ಕಾರ ಮಾಡುತ್ತಾರೆ" ಎಂದು ಡಾ. ಸೂರಜ್ ಗೌಡ ಸ್ಪರ್ಧೆ ಬಗ್ಗೆ ಮಾತನಾಡಿದರು.
Recommended Video
ಡಾ. ಸೂರಜ್ ರೇವಣ್ಣ ತಿರುಗೇಟು
ದೇವೇಗೌಡರದ್ದು ಕುಟುಂಬ ರಾಜಕಾರಣ ಎಂಬ ಪ್ರತಿಪಕ್ಷಗಳ ಟೀಕೆಗೆ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ ಪ್ರತಿಕ್ರಿಯೆ ನೀಡಿದರು. "ಬೆಳಗಾಂನಿಂದ ಕನಕಪುರದವರೆಗೂ ತಗೊಳಿ, ಒಂದೊಂದು ಕುಟುಂಬದಲ್ಲಿ ಎಷ್ಟೆಷ್ಟು ಜನ ಇದ್ದಾರೆ ಅಂಥಾ ಲೆಕ್ಕ ಹಾಕಿ, ನಾನು ಹೆಸರು ಹೇಳಲು ಬಯಸಲ್ಲ. ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಇದ್ದಿದ್ದೇ ಅದು, ಕುಟುಂಬ ರಾಜಕಾರಣ ಅಂಥಾ ನೀವು ಹೊಸದಾಗಿ ಹೇಳುತ್ತಿದ್ದೀರಾ?, 20 ವರ್ಷದಿಂದ ಕುಟುಂಬ ರಾಜಕಾರಣ ಅಜೆಂಡಾನೆ ಎಲ್ಲಾ, ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರ್ತಾರೆ, ಎಲ್ಲಾ ರಾಜಕೀಯ ವ್ಯಕ್ತಿಗಳ ಮನೆಯಲ್ಲಿ ನಾಲ್ಕೈದು ಜನ ಇದ್ದಾರೆ" ಎಂದರು.
"ನಮ್ಮ ತಾತ ಅವರು ಧೃಡವಾದ ನಿರ್ಧಾರ ತಗೊಂಡು ನನ್ನ ಅಭ್ಯರ್ಥಿ ಮಾಡಿದ್ದಾರೆ. ಸುಮಾರು 50 ವರ್ಷಗಳಿಂದ ನಮ್ಮ ಕುಟುಂಬ ರಾಜ್ಯ, ಜಿಲ್ಲೆಯಲ್ಲಿ ಕಳಕಳಿಯಿಂದ ಕೆಲಸ ಮಾಡಿಕೊಂಡು ಬರುತ್ತಿದೆ, ಅದನ್ನು ಮುಂದುವರಿಸಿಕೊಂಡು ಹೋಗಲು ನನಗೂ ಅವಕಾಶ ಕೊಡಿ ಎಂದು ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಾನು ಅನಿರೀಕ್ಷಿತವಾಗಿ ಅಭ್ಯರ್ಥಿಯಾಗಿದ್ದೇನೆ, ನಾನು ಅಭ್ಯರ್ಥಿಯಾಗುವ ಅಪೇಕ್ಷೆ ಇರಲಿಲ್ಲ" ಎಂದು ಸ್ಪಷ್ಟಪಡಿಸಿದರು.