ಮಂಡ್ಯದವರು ಒರಟು ಅಂತಿದ್ದೆ, ಹಾಸನದವರು ಅದಕ್ಕಿಂತ ಒರಟರು; ಡಿಕೆಶಿ
ಹಾಸನ, ಡಿಸೆಂಬರ್ 26; "ಮಂಡ್ಯದವರು ಒರಟು ಅಂತಿದ್ದೆ, ನೀವು ಹಾಸನದವರು ಅದಕ್ಕಿಂತ ಒರಟರು. ನಿಮ್ಮ ಅಭಿಮಾನ ತಪ್ಪಲ್ಲ, ವ್ಯಕ್ತಿ ಪೂಜೆಗೆ ಅವಕಾಶ ಕೊಡಲ್ಲ, ಪಕ್ಷ ಪೂಜೆ ಮಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಶನಿವಾರ ಹಾಸನದ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಿ. ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಕಾರ್ಯಕರ್ತರೊಬ್ಬರು ಡಿಕೆಶಿ ಕಾಲಿಗೆ ಬೀಳಲು ಬಂದಾಗ, "ನಾನೇನು ಮಠದ ಸ್ವಾಮೀಜಿನಾ ಕಾಲಿಗೆ ಬೀಳುತ್ತಿದ್ದಿಯಲ್ಲ?" ಎಂದು ಡಿ. ಕೆ. ಶಿವಕುಮಾರ್ ಗದರಿದರು.
ಮೇಕೆದಾಟುಗಾಗಿ ಕಾಂಗ್ರೆಸ್ ಪಾದಯಾತ್ರೆ; ದಿನಾಂಕ ಘೋಷಣೆ
ಸಭೆಯಲ್ಲಿ ಕಾರ್ಯಕರ್ತರು ಪದೇ ಪದೇ ಘೋಷಣೆ ಕೂಗುತ್ತ ಭಾಷಣ ಮಾಡಲು ಬಿಡದಂತೆ ಗಲಾಟೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಹಾರ ಹಾಕುವುದು, ಕಾಲಿಗೆ ಬೀಳುವುದು ಮಾಡುತ್ತಿದ್ದರು. ಈ ವೇಳೆ ಡಿಕೆಶಿ ಅಸಮಾಧಾನ ಹೊರಹಾಕಿದರು. ನಂತರ ಮಾತನಾಡಿದ ಅವರು, "ನೀವೆಲ್ಲಾ ಸೇರಿ ಸಭೆಯನ್ನು ಹಾಳು ಮಾಡುತ್ತಿದ್ದೀರಿ. ಯಾರಾದರೂ ಹೆಸರಿಡಿದು ಜೈಕಾರ ಹಾಕಿದರೆ ವಾಪಸ್ ಹೋಗುತ್ತೇನೆ. ಯಾರು ಕಿರುಚಬಾರದು, ಕಿರುಚಿದರೆ ಮೈಕ್ ಬಿಸಾಕುತ್ತೇನೆ. ಹೂವಿನ ಹಾರ ಇಟ್ಕೊಂಡಿರೋರೆಲ್ಲ ಆ ಕಡೆ ನಡೀರಿ. ನಿಮಗೆ ಶಕ್ತಿ ಇದ್ದರೇ ಬಿಜೆಪಿ, ಜೆಡಿಎಸ್ ಸೋಲಿಸಿ ಜೈಕಾರ ಹಾಕಿ" ಎಂದು ಸೂಚಿಸಿದರು.
ಪಾದಯಾತ್ರೆಗಾಗಿ ಮೇಕೆದಾಟು ಪ್ರದೇಶ ಪರಿಶೀಲನೆ ಮಾಡಿದ ಡಿ.ಕೆ. ಶಿವಕುಮಾರ್
"ಮಂಡ್ಯದವರು ಒರಟು ಅಂತಿದ್ದೆ. ನೀವು ಹಾಸನದವರು ಅದಕ್ಕಿಂತ ಒರಟರು. ನಿಮ್ಮ ಅಭಿಮಾನ ತಪ್ಪಲ್ಲ. ಆದರೆ ವ್ಯಕ್ತಿ ಪೂಜೆಗೆ ನಾನು ಅವಕಾಶ ಕೊಡಲ್ಲ, ಅದರ ಬದಲು ಪಕ್ಷವನ್ನು ಪೂಜಿಸಿ. ನೀವು ಅಧಿಕಾರ ನೀಡುವುದು ನನಗಲ್ಲ, ಕಾಂಗ್ರೆಸ್ಗೆ ನೀಡಿ. ಇದರಿಂದ ನೀವು ನನಗೆ ಅಧಿಕಾರ ಕೊಟ್ಟ ಹಾಗೆ ಆಗುತ್ತದೆ. ಮೇಕೆದಾಟು ಪಾದಯಾತ್ರೆಗೆ ನೀವು ಬರಬೇಕು. ಜನವರಿ 9 ರಿಂದ 19ರ ತನಕ ಪಾದಯಾತ್ರೆ ನಡೆಯಲಿದೆ. ಅದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ" ಡಿ. ಕೆ. ಶಿವಕುಮಾರ್ ಮನವಿ ಮಾಡಿದರು.
ಮೇಕೆದಾಟು ಯೋಜನೆ ಜಾರಿ, ಕಾಂಗ್ರೆಸ್ನಿಂದ ಪಾದಯಾತ್ರೆ
ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತೇನೆ
"ಕಾವೇರಿ ನೀರಿಗಾಗಿ ಗಾಂಧೀಜಿ ಅವರ ದಂಡಿ ಸತ್ಯಾಗ್ರಹದ ರೀತಿ ಈ ಹೋರಾಟ ಮಾಡುತ್ತೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಹಾಸನದ ಆರ್ಸಿ ರಸ್ತೆಯಲ್ಲಿರುವ ವೆಸ್ಲಿ ಚರ್ಚ್ಗೆ ಭೇಟಿ ನೀಡಿ ಎಲ್ಲರ ಪರವಾಗಿ ಶುಭಾಶಯ ತಿಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅವರವರ ಧರ್ಮ ಅವರು ಉಳಿಸಿಕೊಳ್ಳಬೇಕು. ಇದು ಮೂಲಭೂತವಾಗಿ ನಮಗೆ ಸಂವಿಧಾನದಲ್ಲಿ ಬಂದ ಹಕ್ಕು. ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿ ವಿಶ್ವಾಸದಿಂದ ಬದುಕಲು ಎಲ್ಲ ಧರ್ಮದಲ್ಲೂ ಅವಕಾಶ ಕೊಟ್ಟಿದೆ" ಎಂದರು.
ಕುಮಾರಸ್ವಾಮಿ ಬಹಳ ದೊಡ್ಡವರು
ಮೇಕೆದಾಟು ಯೋಜನೆ ಹೋರಾಟವನ್ನು ಡಿಕೆಶಿ ಹೈಜಾಕ್ ಮಾಡಿದ್ದಾರೆ ಎಂಬ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಕುಮಾರಸ್ವಾಮಿ ಅವರು ಬಹಳ ದೊಡ್ಡವರು. ಕುಮಾರಸ್ವಾಮಿ ಯಾವಾಗ ಹೋರಾಟ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಹೋರಾಟ ಮಾಡಿದ ನಂತರ ಹೋರಾಟ ಮಾಡುವುದು ಅವರ ಮನಸ್ಸಿನಲ್ಲಿತ್ತು ಅಂತ ಅಧಿವೇಶನದಲ್ಲಿ ಹೇಳುತ್ತಾರೆ" ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರ ಬಗ್ಗೆ ಮಾತನಾಡಿದ ಅವರು, "ಬಸವರಾಜ ಹೊರಟ್ಟಿ ಅವರು ರಾಜಕೀಯಕ್ಕೋಸ್ಕರ ಏನು ಮಾಡಿದರು ಸ್ವಾಗತಿಸುತ್ತೇವೆ" ಎಂದರು.
ಎ. ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರ
ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ನಮಗೆ ಯಾವುದೇ ಅರ್ಜಿ ಬಂದಿಲ್ಲ. ಅರ್ಜಿ ಬಂದರೆ ಅಲ್ಲಂ ವೀರಭದ್ರಪ್ಪ ಸಮಿತಿಗೆ ಹೋಗುತ್ತದೆ. ಅವರ ಮಗನಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ನಾವೇ ಅವರನ್ನು ಮಂತ್ರಿ ಮಾಡಿದ್ದೇವೆ, ಎ. ಮಂಜು ನನ್ನ ಒಳ್ಳೆಯ ಸ್ನೇಹಿತ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿಲ್ಲ" ಎಂದರು.
"2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದೆವು. ಆಗ ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ರೈತರಿಗೆ ನ್ಯಾಯಯುತವಾದ ನೀರು ಸಿಗಬೇಕು, ಬೆಂಗಳೂರಿಗೆ ನಿಗದಿತ ನೀರು ಪೂರೈಕೆಯಾಗಬೇಕು. ನಮ್ಮ ನೀರು ನಮ್ಮ ಹಕ್ಕು, ಕಾವೇರಿ ನಮ್ಮದು. ತಮಿಳುನಾಡಿಗೆ ಏನು ಶೇರ್ ಹೋಗಬೇಕು ಅದಕ್ಕೆ ನಮ್ಮ ತಕರಾರಿಲ್ಲ. ಇಲ್ಲಿನ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಸರ್ಕಾರ ಸಭೆ ನಡೆಸಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಮಾಡಲಿಲ್ಲ" ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.
ಈ ಹೋರಾಟ ಇತಿಹಾಸದ ಪುಟ ಸೇರಬೇಕು
"ಮೇಕೆದಾಟು ಪಾದಯಾತ್ರೆಗೆ ಎಲ್ಲರೂ ಬರಬೇಕು. ಜನವರಿ 9 ರಿಂದ 19ರ ತನಕ ಪಾದಯಾತ್ರೆ ನಡೆಯಲಿದೆ. ಈ ಹೋರಾಟ ಇತಿಹಾಸದ ಪುಟ ಸೇರಬೇಕು. ಗಾಂಧೀಜಿ ಅವರ ದಂಡಿ ಸತ್ಯಾಗ್ರಹದ ರೀತಿ ಈ ಹೋರಾಟ ಮಾಡುತ್ತಿದ್ದೇನೆ. ಒಂದು ದಿನ 18 ರಿಂದ 20 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದೇನೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
Recommended Video