ಸಿದ್ದರಾಮಯ್ಯ ರಾಜಕೀಯ ಬದುಕಿನ ಕುರಿತು ಕೋಡಿಶ್ರೀ ಹೊಸ ಭವಿಷ್ಯ
ಹಾಸನ, ಸೆಪ್ಟೆಂಬರ್ 20: ರಾಜ್ಯದಲ್ಲಿ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಗುರುವಾರ ಭವಿಷ್ಯ ನುಡಿದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಇನ್ನು ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಹೇಳುವ ಮೂಲಕ ಕೋಡಿಶ್ರೀ ಅವರು ಬಿಜೆಪಿ ಸರ್ಕಾರ ಪತನಗೊಂಡು ಚುನಾವಣೆ ಎದುರಾಗಲಿದೆ ಎಂದು ಹೇಳಿದ್ದರು.
ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಹಾಸನದ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ಶುಕ್ರವಾರ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ನಾಯಕರಾಗಿ ಬೆಳೆಯಲಿದ್ದಾರೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಕುರಿತು ಈ ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಅವರಿಗೆ ದೆಹಲಿ ಕಡೆ ಗಮನ ನೀಡಲು ಹೇಳಿದ್ದೇನೆ ಎಂದು ಕೋಡಿಶ್ರೀ ಹೇಳಿದ್ದಾರೆ.
ಬಾದಾಮಿಗೆ ಬರಲು ಆಹ್ವಾನಿಸಿದ್ದೆ
''ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ. ಈ ಹಿಂದೆ ಬಾದಾಮಿಗೆ ಬರುವಂತೆ ಬನ್ನಿ ಎಂದು ನಾನೇ ಕರೆದಿದ್ದೆ. ಆದರೆ ಅವರು ಇಲ್ಲಿಯೇ ನಿಂತು ಗೆಲ್ಲುತ್ತೇನೆ ಎಂದರು. ಕೊನೆಗೆ ಬಾದಾಮಿಗೆ ಬಂದರು'' ಎಂದು ಕೋಡಿ ಶ್ರೀ ಹೇಳಿದರು.
ದೆಹಲಿಗೆ ಗದ್ದುಗೆ ಹಿಡಿಯಿರಿ
''ಮತ್ತೆ ಕೆಲವೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ಬರಲಿದೆ. ಸಿದ್ದರಾಮಯ್ಯ ನೀವು ಈಗಾಗಲೇ ರಾಜ್ಯದ ಗದ್ದುಗೆ ಹಿಡಿದಿದ್ದೀರಿ. ಇನ್ನು ಮುಂದೆ ದೆಹಲಿಯ ಗದ್ದುಗೆ ಹಿಡಿಯಿರಿ. ದೆಹಲಿಯ ಕಡೆ ನೋಡಿ ಎಂದು ಸಲಹೆ ನೀಡುತ್ತಿದ್ದೇನೆ'' ಎಂದರು.
ಇನ್ನೂ ಭೀಕರ ಗಂಡಾಂತರ ಕಾದಿದೆ: ಕೋಡಿಮಠದ ಶ್ರೀ ಭವಿಷ್ಯ
ಕಂಬಳಿ ಹಾಸೀತು, ಅಂಬಲಿ ಹಳಸೀತು
''ಹಾಲುಮತ ಸಮಾಜದವರು ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ನೆಲೆಸಿದ್ದಾರೆ. ನಾನು ಹಿಂದೆಯೇ ಹೇಳಿದ್ದೆ, ಕಂಬಳಿ ಹಾಸೀತು, ಅಂಬಲಿ ಹಳಸೀತು ಸಿದ್ದು ಗದ್ದುಗೆ ಹಾಸೀತು ಎಂದು ಹಿಂದೆಯೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಅವರಿಗೆ ಶುಭಸೂಚನೆ ಇದೆ'' ಎಂದು ಭವಿಷ್ಯ ನುಡಿದರು.
ಚುನಾವಣೆ ಬರಲಿದೆ
"ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. 18 ತಿಂಗಳ ನಂತರ ಮತ ಭಿಕ್ಷೆ (ಚುನಾವಣೆ) ಎಂದು. ಇದನ್ನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ. ಈಗ 14-15 ತಿಂಗಳು ಮುಗಿದಿದೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ. ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ ಎಂದಿದ್ದೆ" ಎಂದು ಕೋಡಿಶ್ರೀ ಗುರುವಾರ ಹಾವೇರಿಯಲ್ಲಿ ಹೇಳಿದ್ದರು.
'ಗಗನಕ್ಕೆ ಮುತ್ತಿಕ್ಕೀತು, ಮುತ್ತು ಎರಡಾಯಿತಲೇ ಎಚ್ಚರ': ಕಾರ್ಣಿಕ
ಭವಿಷ್ಯ ನಿರ್ಧರಿಸುವುದು ಜನ
ಸರ್ಕಾರದ ಬಗ್ಗೆ ಕೋಡಿಶ್ರೀ ಭವಿಷ್ಯದ ವಿಚಾರದ ಬಗ್ಗೆ ಮಾತನಾಡಿದ ಆರ್. ಅಶೋಕ್, ಸರ್ಕಾರದ ಭವಿಷ್ಯ ನಿರ್ಧಾರ ಮಾಡುವುದು ಜನ. ಜನರ ಆಶೀರ್ವಾದ ಇರುವವರೆಗೆ ಸರ್ಕಾರ ಇರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಭವಿಷ್ಯ ನುಡಿಯುತ್ತಾರೆ. ಭವಿಷ್ಯಕ್ಕೆ ಬೆಲೆ ಕೊಡಬಾರದು ಎಂದು ಹೇಳಿದರು.