ಸಿದ್ದಿಸಿದ ರೋಹಿಣಿ ಸಂಕಲ್ಪ, ಎಸ್ಎಸ್ಎಲ್ಸಿಯಲ್ಲಿ ಹಾಸನ ನಂ.1
ಹಾಸನ, ಏಪ್ರಿಲ್ 30: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲೇ ಮೂರನೇ ಸ್ಥಾನಕ್ಕೇರಿಸುವ ಆಸೆಯನ್ನು ರೋಹಿಣಿ ಸಿಂಧೂರಿ ಐಎಎಸ್ ಹೊತ್ತುಕೊಂಡಿದ್ದರು. ಅವರು ಅಂದು ಕೈಗೊಂಡ ಸಂಕಲ್ಪ ಸಿದ್ಧಿಸಿದ್ದು, ಮಂಗಳವಾರ (ಏಪ್ರಿಲ್ 30) ದಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಶೇ 89.33 ಫಲಿತಾಂಶದೊಂದಿಗೆ ನಂ.1 ಸ್ಥಾನಕ್ಕೇರಿದೆ.
ಅಂದಿನ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಂದು ಕೈಗೊಂಡ ಕ್ರಮ ಇಂದು ಫಲ ನೀಡಿದೆ. ಸರ್ಕಾರಿ ಶಾಲೆ ಶಿಕ್ಷಕ ವರ್ಗಕ್ಕೆ ಪರೀಕ್ಷೆ ನಡೆಸಿ, ಅವರ ಬೋಧನಾ ಕ್ರಮವನ್ನೇ ಬದಲಾಯಿಸಿಬಿಟ್ಟರು. ಇದರಿಂದ ವಿದ್ಯಾರ್ಥಿ ವೃಂದಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಿ ಇಂದು ಫಲಿತಾಂಶ ಎಲ್ಲರ ಕಣ್ಮುಂದಿದೆ.
ಅಂಕಿ-ಅಂಶಗಳ ಸಮೇತ ಎಸ್ಎಸ್ಎಲ್ಸಿ ಫಲಿತಾಂಶ ಸಂಪೂರ್ಣ ಮಾಹಿತಿ
ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನ ಬೋಧಿಸುವ 6ರಿಂದ 10ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಶಿಕ್ಷಕರು ತಮ್ಮ ವಿಷಯದ ಮೇಲೆ ಪರೀಕ್ಷೆಯನ್ನು ಬರೆದಿದ್ದರು. ಆಗ ಹಾಸನ ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರೇ ಖುದ್ದು ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ರೂಪಿಸಿದ್ದರು.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ
ಹೀಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಬಗ್ಗೆ ಪಾಠ ಮಾಡುವುದಕ್ಕೂ ಮುನ್ನ ಶಿಕ್ಷಕರು ತಯಾರಿ ಮಾಡಿಕೊಂಡಿದ್ದರು. ಈ ಪೂರ್ವ ತಯಾರಿ ಫಲ ಎಲ್ಲಾ ಸರ್ಕಾರಿ ಶಾಲೆಗಳಿಗೂ ತಲುಪಿತು. ರೇಡಿಯೋ ಪಾಠ, ಹೊಸ ಪದ್ಧತಿ ಅಳವಡಿಕೆಗೆ ಸ್ಪಂದಿಸಿ ಖಾಸಗಿ ಶಾಲೆಗಳು ಕೂಡಾ ಉತ್ತಮ ಫಲಿತಾಂಶ ನೀಡಿದ್ದರಿಂದ ಜಿಲ್ಲೆ ಅಗ್ರಸ್ಥಾನಕ್ಕೇರಲು ಸಾಧ್ಯವಾಯಿತು.
ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ವಿವಿಧ ಇಲಾಖೆಗಳ ಜತೆ ಸಭೆ ನಡೆಸುತ್ತಿದ್ದ ರೋಹಿಣಿ ಅವರು, ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ರೀತಿ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಂಡರು. ಈ ಮೂರು ವಿಷಯಗಳಲ್ಲಿ ರಾಜ್ಯಪಠ್ಯ ಕ್ರಮವನ್ನು ಕೇಂದ್ರ ಪಠ್ಯಕ್ರಮಕ್ಕೆ ಉನ್ನತೀಕರಿಸಲು ನಿರ್ಧರಿಸಿದರು. ಕೇವಲ ಕೆಲವೇ ಕೆಲವು ಶಿಕ್ಷಕರು ಪರಿಷ್ಕೃತ ಪಠ್ಯಕ್ರಮಕ್ಕೆ ಹೊಂದಿಕೊಂಡಿದ್ದರು.
ಪಠ್ಯಕ್ರಮ, ಬೋಧನಾ ಕ್ರಮ ಅಪ್ಡೇಟ್
ಪಠ್ಯಕ್ರಮ ಅಪ್ಡೇಟ್ ಮಾಡಿಸಿದ ಬಳಿಕ, ಶಿಕ್ಷಕರು ಅಪ್ಡೇಟ್ ಆಗುವುದು ಮುಖ್ಯವಾಗಿತ್ತು. ಕೆಲವರು ಬಿಟ್ಟರೆ, ಉಳಿದವರು ಇನ್ನೂ ತಮ್ಮನ್ನು ಅಪ್ ಡೇಟ್ ಮಾಡಿಕೊಂಡಿರಲಿಲ್ಲ ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಶಿಕ್ಷಕರಿಗೆ ಒಂದು ಪರೀಕ್ಷೆ ಹಮ್ಮಿಕೊಳ್ಳಲು ನಿರ್ಧರಿಸಿದರು.
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ : ಶೇ 73.70 ಫಲಿತಾಂಶ
ಪರೀಕ್ಷೆಗೂ ಮುನ್ನ ಒಂದು ತಿಂಗಳು ಅಧ್ಯಯನ ಅವಧಿ
ಎಲ್ಲಾ ಶಿಕ್ಷಕರಿಗೆ ನೂತನ ಪಠ್ಯಕ್ರಮವನ್ನು ಮನನ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. 2018ರ ಜುಲೈ 28ರಂದು ಪರೀಕ್ಷೆ ನಡೆಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸ್ವತಃ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ್ದರು, ಗಣಿತ, ವಿಜ್ಞಾನ, ಸಮಾಜಶಾಸ್ತ್ರದ ಮೇಲೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಅಂದು ರೋಹಿಣಿ ಹೇಳಿದ್ದೇನು?
"ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯಲೇಬೇಕು. ಕರಾವಳಿ ಜಿಲ್ಲೆಗಳಂತೆ ನಮ್ಮ ಜಿಲ್ಲೆ ಕೂಡ ಎಸ್ಎಸ್ಎಲ್ಸಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದೊಳಗಿರಬೇಕು. ಇದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಆರಂಭದಿಂದಲೇ ಪ್ರಯತ್ನ ಆರಂಭಿಸುತ್ತಿದ್ದೇವೆ," ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಮೂರನೇ ಸ್ಥಾನ ಗುರಿ ಹೊಂದಿದ್ದ ಹಾಸನ ಜಿಲ್ಲೆ ಈಗ ನಂ.1 ಸ್ಥಾನದಲ್ಲಿದೆ.