ಎಚ್ ಕೆ ಕುಮಾರಸ್ವಾಮಿ, ಎಟಿ ರಾಮಸ್ವಾಮಿಗೆ ಸಚಿವ ಸ್ಥಾನ ಕೊಡಿ!
ಹಾಸನ, ಮೇ 29: ಜೆಡಿಎಸ್ ತನ್ನ ಭದ್ರಕೋಟೆಯಾದ ಹಾಸನದಲ್ಲಿ ಏಳು ಕ್ಷೇತ್ರಗಳ ಪೈಕಿ ಆರರಲ್ಲಿ ಭರ್ಜರಿ ಜಯ ದಾಖಲಿಸಿದೆ. ಜಿಲ್ಲಾವಾರು, ಪ್ರಾಂತ್ಯವಾರು, ಜಾತಿವಾರು ಲೆಕ್ಕಾಚಾರದಂತೆ ಸಚಿವ ಸ್ಥಾನ ಅಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಹಾಸನ ಜಿಲ್ಲೆಯಿಂದಲೂ ಮೂವರಿಗೆ ಅದೃಷ್ಟ ಒಲಿಯುವ ನಿರೀಕ್ಷೆಯಿದೆ.
ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರೇ ಪ್ರಾಧಾನ್ಯವಾಗಿರುವ ಜಿಲ್ಲೆಯಲ್ಲಿ ಆಲೂರು-ಸಕಲೇಶಪುರ ಮಾತ್ರ ಮೀಸಲು(ಎಸ್ ಸಿ) ಕ್ಷೇತ್ರವಾಗಿದೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ : ಯಾವ ಖಾತೆ ಯಾರಿಗೆ?
2013ರ ಫಲಿತಾಂಶದಂತೆ ಹಾಸನ ಜಿಲ್ಲೆಯ 7 ಕ್ಷೇತ್ರಗಳ ಕಾಂಗ್ರೆಸ್ 2 ಹಾಗೂ ಬಿಜೆಪಿ 0, ಜೆಡಿಎಸ್ 5 ಗಳಿಸಿತ್ತು. 2018ರಲ್ಲಿ ಹಾಸನದಲ್ಲಿ ಬಿಜೆಪಿ 1989ರ ನಂತರ ಮತ್ತೆ ಖಾತೆ ತೆರೆದಿದೆ. ಮಿಕ್ಕಂತೆ ಕಾಂಗ್ರೆಸ್ 2 ಸ್ಥಾನ ಕಳೆದುಕೊಂಡಿದ್ದಲ್ಲದೆ, ಈ ಬಾರಿ ಒಂದು ಸೀಟು ಕೂಡಾ ಗೆದ್ದಿಲ್ಲ.
ಬೇಲೂರಿನಲ್ಲಿ ಹಾಲಿ ಶಾಸಕ ಕಾಂಗ್ರೆಸ್ಸಿನ ವೈ.ಎನ್ ರುದ್ರೇಶ್ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಅಭ್ಯರ್ಥಿ ಸ್ಥಾನಕ್ಕೆ ಅವರ ಪತ್ನಿ ಕೀರ್ತನಾ ಅವರನ್ನು ಕರೆ ತರಲಾಯಿತು. ಆದರೆ, ಅನುಕಂಪದ ಅಲೆ ವರ್ಕ್ ಔಟ್ ಆಗಲಿಲ್ಲ. ಕಳೆದ ಬಾರಿ 6 ಸಾವಿರ ಅಂತರದ ಮತಗಳಿಂದ ಸೋಲು ಕಂಡಿದ್ದ ಜೆಡಿಎಸ್ ನ ಕೆ.ಎಸ್ ಲಿಂಗೇಶ್ ಈ ಬಾರಿ ಭರ್ಜರಿ ಗೆಲುವು ದಾಖಲಿಸಿದರು.
ಸಕಲೇಶಪುರದಲ್ಲಿ ಅಧಿಕಾರಿ ಸಿದ್ದಯ್ಯ ಮೂರನೇ ಸ್ಥಾನಕ್ಕೆ ಕುಸಿದರೆ, ಹಾಸನ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಎಸ್ ಪ್ರಕಾಶ್ ಗೆ ಅಚ್ಚರಿಯ ಸೋಲು, ಅರಕಲಗೂಡು ಮಂಜುಗೆ ಸೋಲು ಅನಿರೀಕ್ಷಿತವಾಗಿತ್ತು.
ಈಗ ಹೊಳೆನರಸೀಪುರದ ಅರಸ ಎಚ್ ಡಿ ರೇವಣ್ಣ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ಮಿಕ್ಕಂತೆ, ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿ ಹಾಗೂ ಅರಕಲಗೂಡು ಶಾಸಕ ಎ. ಟಿ ರಾಮಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಲಾಗಿದೆ.