ಕೆಪಿಟಿಸಿಎಲ್ ನೌಕರನಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಜೆಡಿಎಸ್ ಮುಖಂಡ
ಹಾಸನ, ಸೆಪ್ಟೆಂಬರ್ 25: ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ನೀಡಲಿಲ್ಲವೆಂದು ಕೆ.ಪಿ.ಟಿ.ಸಿ.ಎಲ್ ವಿದ್ಯುತ್ ಸ್ಟೇಷನ್ ಆಪರೇಟರ್ ಒಬ್ಬರಿಗೆ ಜೆಡಿಎಸ್ ಮುಖಂಡರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಘಟನೆ ಹಾಸನ ಜಿಲ್ಲೆಯ ಗಂಗೂರು ಗ್ರಾಮದಲ್ಲಿ ನಡೆದಿದೆ.
ಗಂಗೂರು ಗ್ರಾಮದಲ್ಲಿರುವ ಕೆ.ಪಿ.ಟಿ.ಸಿ.ಎಲ್ ಸಬ್ ಸ್ಟೇಷನ್ನಲ್ಲಿ ಹೇಮಂತ್ ಕುಮಾರ್ ಎಂಬುವವರು ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯುತ್ ವಿತರಣೆ ಬಗ್ಗೆ ವಿಚಾರಿಸಲು ಗಂಗೂರು ಕೆಪಿಟಿಸಿಎಲ್ ಪವರ್ ಸ್ಟೇಷನ್ ಗೆ ಜೆಡಿಎಸ್ ಮುಖಂಡ ರಾಮಚಂದ್ರ ಎಂಬುವವರು ಕರೆ ಮಾಡಿದ್ದರು.
ಈ ವೇಳೆ ತನ್ನ ಕರೆಗೆ ಸರಿಯಾಗಿ ಉತ್ತರಿಸಿಲ್ಲ ಎಂದು ಪವರ್ ಸ್ಟೇಷನ್ ಗೆ ಬಂದಿದ್ದ ಜೆಡಿಎಸ್ ಮುಖಂಡ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಪವರ್ ಸ್ಟೇಷನ್ ಗೆ ಯಾಕೆ ಬಂದಿದ್ದೀರಿ ಎಂದು ಆಪರೇಟರ್ ಹೇಮಂತ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇದರಿಂದ ಕೆರಳಿದ ಜೆಡಿಎಸ್ ಮುಖಂಡ ರಾಮಚಂದ್ರ ಇದೇನು ನಿಮ್ಮ ಅಪ್ಪನದಾ? ಇಲ್ಲಿ ಇರಬೇಕು ಅಂತಿದ್ದೀಯೋ, ಏನು ಎಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ ಪರಸ್ಪರ ತಳ್ಳಾಟ ನೂಕಾಟ ಕೂಡ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಆಪರೇಟರ್ ಹೇಮಂತ್ ಕುಮಾರ್ ಕಚೇರಿಯೊಳಗೆ ಹೋಗಿದ್ದಾರೆ.
Recommended Video
ಕಚೇರಿ ಒಳಗೂ ಬಂದ ಜೆಡಿಎಸ್ ಮುಖಂಡ ರಾಮಚಂದ್ರ, ಸ್ಟೇಷನ್ ಒಳಗೆ ಹೋಗಿದ್ದೀಯ, ಹೊರಗೆ ಬಾ. ನೀನು ಹೇಗೆ ಮನೆಗೆ ಹೋಗುತ್ತೀಯಾ ನೋಡುತ್ತೇನೆ ಎಂದು ಮತ್ತೆ ಅಶ್ಲೀಲ ಪದಗಳಿಂದ ಬೆದರಿಕೆ ಹಾಕಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.