ಮೇ.13ಕ್ಕೆ ನೆಲಮಂಗಲದಲ್ಲಿ ಜೆಡಿಎಸ್ ಜನತಾ ಜಲಧಾರೆ ರಥಯಾತ್ರೆ ಸಮಾರೋಪ
ಹಾಸನ, ಮೇ.10: ರಾಜ್ಯದಲ್ಲಿ ನೀರಾವರಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ಅಂತ್ಯಗೊಳ್ಳಲಿದ್ದು, ಇದೇ ತಿಂಗಳು ಮೇ.13 ರಂದು ಬೃಹತ್ ಕಾರ್ಯಕ್ರಮ ಆಯೋಜಿಸಿರುವುದಾಗಿ ಜೆಡಿಎಸ್ ಶಾಸಕ ಹೆಚ್.ಕೆ ಕುಮಾರಸ್ವಾಮಿ ಅವರು ಹಾಸನದಲ್ಲಿ ತಿಳಿಸಿದರು.
ಬೆಂಗಳೂರು ರಸ್ತೆಯ ನೆಲಮಂಗಲದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದ 51 ಸ್ಥಳಗಳಿಂದ ನದಿಯಿಂದ ನೀರನ್ನು ಸಂಗ್ರಹಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ 180 ವಿಧಾನಸಭಾ ಕ್ಷೇತ್ರದಿಂದ ಸುಮಾರು 6 ರಿಂದ 8 ಲಕ್ಷ ಜನರುಸೇರುವ ಸಾಧ್ಯತೆಯಿದೆ ಎಂದು ತಿಳಿಸಿದರು.
2023 ರಾಜ್ಯದ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದಲ್ಲಿ ನೀರಾವರಿ ಕ್ರಾಂತಿ ಸೃಷ್ಟಿಸುವ ಉದ್ದೇಶದಿಂದ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಕಿಲೋಮೀಟರ್ ಕ್ರಮಿಸುವ ಮೂಲಕ ರಾಜ್ಯದ ಜನರಿಗೆ ರಾಜ್ಯದ ನೀರಾವರಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು. ಸದ್ಯ ಈ ಜನತಾ ಜಲಧಾರೆ ರಥಯಾತ್ರೆ ಅಂತ್ಯಗೊಂಡಿದ್ದು, ಜೆಡಿಎಸ್ ಇತಿಹಾಸ ಪುಟಗಳಲ್ಲಿ ಸೇರುವ ಮತ್ತು ಪಕ್ಷ ಸಂಘಟನೆ ಜೊತೆಗೆ ಮುಂದಿನ ವಿದಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸುವ ವೇದಿಕೆಗೆ ಸಾಕ್ಷಿಯಾಗಲಿದೆ.
ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವಿಚಾರ:
ಜೆಡಿಎಸ್ ಪಕ್ಷದಲ್ಲಿ ದುಡ್ಡು ಇದ್ದವರಿಗೆ ಮಾತ್ರ ಟಿಕೆಟ್ ಕೊಡ್ತಾರೆ ಎಂದು ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಸಕ ಹೆಚ್.ಕೆ ಕುಮಾರಸ್ವಾಮಿ, ಮರಿತಿಬ್ಬೇಗೌಡರು ಜಯರಾಂ ಎಂಬುವವರಿಗೆ ಟಿಕೆಟ್ ಕೇಳಿದ್ದರು. ಶ್ರೀಕಂಠೇಗೌಡರು ಮತ್ತು ನಾಲ್ಕು ಜಿಲ್ಲೆಗಳ ಸ್ಥಳೀಯ ಜನಪ್ರತಿನಿಧಿಗಳು ರಾಮು ಅವರನ್ನ ಸೂಚಿಸಿದ್ದರು. ರಾಮು ಅವರಿಗೆ ಟಿಕೆಟ್ ಕೊಟ್ಟಿದ್ದು ಮರಿತಿಬ್ಬೇಗೌಡರಿಗೆ ಇಷ್ಟವಿರಲಿಲ್ಲ ಆದ್ದರಿಂದ ಈ ರೀತಿ ಅಸಮಾಧಾನ ತೋಡಿಕೊಂಡಿದ್ದಾರೆ. ಮರಿತಿಬ್ಬೇಗೌಡ ಅವರು ಒಳ್ಳೆಯ ಎಂಎಲ್ ಸಿ, ವೈಯುಕ್ತಿಕವಾಗಿ ಸ್ವಲ್ಪ ಬೇಸರವಾಗಿದೆ ಎಲ್ಲವೂ ಸರಿಹೋಗುತ್ತೆ ಎಂದ ಸಮಜಾಯಿಷಿ ಕೊಟ್ಟರು.
Recommended Video