ಆರ್ಎಸ್ಎಸ್ ಕುರಿತ ಟೀಕೆಯಿಂದ ಜೆಡಿಎಸ್ಗೆ ಸೋಲು: ಪ್ರೀತಂಗೌಡ
ಹಾಸನ, ನವೆಂಬರ್ 4: ದೇಶ ಪ್ರೇಮ ಮತ್ತು ಆರ್ಎಸ್ಎಸ್ ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡ ಜೆಡಿಎಸ್ಗೆ ಟಾಂಗ್ ನೀಡಿದ್ದಾರೆ.
'ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಮೂಲಕ ರಾಜ್ಯದ ಜನ ಜೆಡಿಎಸ್ಗೆ ಉತ್ತರ ನೀಡಿದ್ದಾರೆ. ಆರ್ಎಸ್ಎಸ್ ಸಂಘಟನೆಯ ಬಗ್ಗೆ ಟೀಕೆ ಮಾಡಿರುವ ಜೆಡಿಎಸ್ ಬಗ್ಗೆ ನನ್ನ ವಿರೋಧವೂ ಇದೆ. ನಾನು ಮನೆ ಮತ್ತು ದೇಶ ಕಟ್ಟುವವನು ಹೊರತು ದೇಶವನ್ನು ಹೊಡೆಯುವ ಕೆಲಸ ಮಾಡುವ ಶಾಸಕನಲ್ಲ' ಎಂದು ಅವರು ಗುರುವಾರ ನಡೆಸಿದ ಪತ್ರಿಕಾಗೋಷ್ಠೀಯಲ್ಲಿ ಹೇಳಿದರು.
ದೇಶ ಪ್ರೇಮ ಮರೆತು, ಆರ್.ಎಸ್.ಎಸ್.ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ. ಅದಕ್ಕೆ ಉಪ ಚುನಾವಣೆಯ ಫಲಿತಾಂಶದ ಮೂಲಕ ಉತ್ತರವನ್ನು ಮತದಾರರು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರು ಆರ್.ಎಸ್.ಎಸ್. ಸಂಘಟನೆ ಬಗ್ಗೆ ಟೀಕಿಸುವುದಕ್ಕೆ ನನ್ನ ವಿರೋಧವಿದ್ದು, ಈಗ ಚುನಾವಣೆ ಮುಗಿದಿದೆ. ಈಗಲಾದರೂ ಆರ್.ಎಸ್.ಎಸ್. ಸಂಘಟನೆಗೆ ಬಂದು ಚರ್ಚಿಸಿ ಸಂಘಟನೆ ಏನೆಂಬುದನ್ನು ತಿಳಿದುಕೊಳ್ಳಲಿ ಎಂದರು,
ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿ. ರಾಜ್ಯದಲ್ಲಿ ನಡೆದ ಎರಡು ಉಪ ಚುನಾವಣೆಯಲ್ಲಿ ಜೆಡಿಎಸ್ ಅತ್ಯಂತ ಕಳಪೆ ಪ್ರದರ್ಶನ ತೋರಿಸಿದೆ. ಅವರ ತಪ್ಪಿನಿಂದಲೇ ಜೆಡಿಎಸ್ ಪಕ್ಷ ಅಸ್ಥಿತ್ವ ಕಳೆದುಕೊಳ್ಳವ ಪರಿಸ್ಥಿತಿಗೆ ಬಂದಿದೆ. ಈ ಭಾಗದಲ್ಲಿ ಮಾಜಿ ಪ್ರಧಾನಿ, ಮಾಜಿ ಸಿಎಂ, ಸಂಸದರು, ಮಾಜಿ ಸಚಿವರು ಎಲ್ಲಾ ನಾಯಕರು ಪ್ರಚಾರ ಮಾಡಿದರೂ ಅವರ ಶಕ್ತಿ ಕುಂದಿದೆ. ಅವರ ಸ್ಪರ್ಧೆಯಿಂದಲೇ ನಾವು ಗೆಲ್ಲಲು ಸಾಧ್ಯವಾಯಿತು ಎಂದು ಟೀಕಿಸಿದರು.
ನಮ್ಮದು ಕಟ್ಟುವ ಕೆಲಸ
ನಂದು ಏನಿದ್ದರೂ ಮನೆ ಕಟ್ಟುವ ಕೆಲಸ. ಬೇರೆಯವರ ಹಾಗೆ ಮನೆ, ಅಂಗಡಿ, ಬಿ.ಎಂ.ರಸ್ತೆಯನ್ನು ಹೊಡೆಯುವ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಚಿವ ಜೆಡಿಎಸ್ನ ಹೆಚ್.ಡಿ.ರೇವಣ್ಣ ಅವರಿಗೆ ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಕುಟುಕಿದರು.
ಇನ್ನು ಹಾಸನ ನಗರದ ಹೊಸ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣಗಳ ಮೇಲ್ಸೇತುವೆ ಕಾಮಗಾರಿಗಳು ಮುಗಿಯಬೇಕಿತ್ತು. ಆದರೆ ಕೋವಿಡ್ ಹಿನ್ನಲೆಯಲ್ಲಿ 3 ತಿಂಗಳ ಕಾಲಾವಕಾಶ ಕೇಳಿದ್ದು, ಮುಂದಿನ ಮಾರ್ಚ 31ರ ವೇಳೆಗೆ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಸಂಬಂಧ ಯಾವುದೇ ಅನುಮಾನ ಬೇಡ. ಹಾಸನ ನಗರ ಮತ್ತು ಸುತ್ತಮುತ್ತಲ ಹೊಂದಿಕೊಂಡಿರುವ 25 ಗ್ರಾಮಗಳನ್ನು ನಗರಸಭೆಯ ವ್ಯಾಪ್ತಿಗೆ ತುರುವ ಮೂಲಕ ನಂತರದಲ್ಲಿ ಜನಸಂಖ್ಯೆ ಅನುಗುಣದ ಆಧಾರದ ಮೇಲೆ ಹಾಸನ ತಾನಾಗಿಯೇ ನಗರಪಾಲಿಕೆ ಆಗಲಿದೆ ಎಂದರು.
"ನಾನು ನನ್ನ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ದಿ ಕಾಮಗಾರಿಗಳ ಸಂಕ್ಷಿಪ ಮಾಹಿತಿಯನ್ನ ಶ್ವೇತಪತ್ರದ ರೀತಿಯಲ್ಲಿಯೇ ಮುದ್ರಿಸಿ ಬಿಡುಗಡೆ ಮಾಡುತ್ತೇನೆ. ಅಭಿವೃದ್ದಿ ಮಾಡುತ್ತೇನೆ ಎಂದವರು ಕಳೆದ 25 ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ. ಆದರೆ ನಾನು ಮಾತನಾಡುವ ಶಾಸಕನಲ್ಲ, ಕೆಲಸ ಮಾಡುವ ಶಾಸಕ. ನನ್ನ ಅವಧಿಯಲ್ಲಿ ಯಾವ ರಸ್ತೆಯ ಕಾಮಗಾರಿಯ ಗುಣಮಟ್ಟ ಸರಿಯಿಲ್ಲವೋ ಅದನ್ನು ಗುಣಮಟ್ಟದಲ್ಲಿ ಮಾಡಿಸೋದು ನನ್ನ ಕರ್ತವ್ಯ. ಅದನ್ನ ಮಾಡುತ್ತಿದ್ದೆನೆ. ನಗರದ ಮೂರ್ನಾಲ್ಕು ಕಡೆಯಲ್ಲಿಇದ್ದ ರಸ್ತೆ ಸರಿಯಿರಲಿಲ್ಲ. ಅದನ್ನು ಸರಿಪಡಿಸಿದ್ದೇನೆ ಎಂದು ಎಚ್.ಡಿ. ರೇವಣ್ಣ ಆವರ ಆರೋಪಕ್ಕೆ ಉತ್ತರ ನೀಡಿದರು.