ದೇವೇಗೌಡ್ರ ಮನೆಗೆ ಔತಣಕ್ಕೆ ಹೋದ ಸಚಿವ ಗೋಪಾಲಯ್ಯ: ಬಿಜೆಪಿಯಲ್ಲಿ ತಳಮಳ
ಹಾಸನ, ಆ 23: ಈ ಹಿಂದೆ ಜೆಡಿಎಸ್ಸಿನ ಕಟ್ಟಾಳುವಾಗಿದ್ದ, ಈಗ ಬಿಜೆಪಿಯಲ್ಲಿರುವ ಜಿಲ್ಲಾ ಉಸ್ತುವಾರಿ ಮತ್ತು ಸಚಿವರೂ ಆಗಿರುವ ಕೆ.ಗೋಪಾಲಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆ ಊಟಕ್ಕೆ ಹೋಗಿರುವುದು, ಹಾಸನ ಜಿಲ್ಲಾ ಬಿಜೆಪಿ ಘಟಕದಲ್ಲಿ ಹೊಸ ಸಂಚಲನ ಮೂಡಿಸಿದೆ.
Recommended Video
ಕೆಲವು ದಿನಗಳ ಹಿಂದೆ ಮತ್ತೋರ್ವ ಪಕ್ಷದ ಮಾಜಿ ಶಾಸಕ, ಹಾಲೀ ಕಾಂಗ್ರೆಸ್ಸಿನ ಚಾಮರಾಜಪೇಟೆ ಎಂಎಲ್ಎ ಜಮೀರ್ ಅಹ್ಮದ್ ಖಾನ್ ಅವರ ಆರೋಗ್ಯವನ್ನು ದೇವೇಗೌಡ್ರು ವಿಚಾರಿಸಿದ್ದೂ ಸುದ್ದಿಯಾಗಿತ್ತು.
ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಣೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದ ಒಂದೇ ಒಂದು ಕ್ಷೇತ್ರವೆಂದರೆ ಅದು ಹಾಸನ. ಬಿಜೆಪಿ ಅಲ್ಲಿ ಸೋತಿದ್ದರೂ, ತುರುಸಿನ ಸ್ಪರ್ಧೆಯನ್ನು ನೀಡಿತ್ತು. ಅದಕ್ಕೆ ಕಾರಣ, ಹಾಸನ ಶಾಸಕ ಪ್ರೀತಂ ಗೌಡ.
ಅವರದ್ದೇ ಸರ್ಕಾರವಿದ್ದರೂ ಬಿಜೆಪಿ ನಾಯಕರ ರಾಜಕೀಯ ಚೆಲ್ಲಾಟ: ದೇವೇಗೌಡ
ಪಕ್ಷಕ್ಕೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿಯ ಬೇರು ದಿನದಿಂದ ದಿನಕ್ಕೆ ಗಟ್ಟಿಯಾಗಲು ಪ್ರೀತಂ ಗೌಡ ಅವರ ಪರಿಶ್ರಮ ಅಪಾರ. ಜೊತೆಗೆ, ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಪ್ರೀತಂ ಗೌಡ ಅವರ ಕೊಡುಗೆ ನಗಣ್ಯವೇನೂ ಅಲ್ಲ. ಹಾಸನ ನಗರ ವ್ಯಾಪ್ತಿಯಲ್ಲಿ ಪ್ರೀತಂ ಗೌಡ, ದೇವೇಗೌಡ್ರ ಕುಟುಂಬವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.
ಗೋಪಾಲಯ್ಯ, ಗೌಡ್ರ ಮನೆಗೆ ಊಟಕ್ಕೆ ಹೋಗಿದ್ದು
ಈಗ, ಗೋಪಾಲಯ್ಯ, ಗೌಡ್ರ ಮನೆಗೆ ಊಟಕ್ಕೆ ಹೋಗಿದ್ದು, ಗೋಪಾಲಯ್ಯ ಮತ್ತು ಪ್ರೀತಂ ಗೌಡ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು, ಗೋಪಾಲಯ್ಯನವರಿಗೂ ಇರಿಸುಮುರಿಸು ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. ಹೇಮಾವತಿಗೆ ಬಾಗಿನ ಅರ್ಪಿಸಲು, ಗೋಪಾಲಯ್ಯ ಹಾಸನದಲ್ಲಿದ್ದರು.
ಗೊರೂರಿನ ಹೇಮಾವತಿ ಜಲಾಶಯಕ್ಕೆ ಕೆ.ಗೋಪಾಲಯ್ಯ ಬಾಗಿನ
ಕಳೆದ ಶುಕ್ರವಾರ (ಆ 21) ಗೊರೂರಿನ ಹೇಮಾವತಿ ಜಲಾಶಯಕ್ಕೆ ಕೆ.ಗೋಪಾಲಯ್ಯ ಬಾಗಿನ ಅರ್ಪಿಸಿ, ಹೇಮಾವತಿ ದೇವಿಯ ದೇಗುಲದಲ್ಲಿ ವಿಶೇಷ ಪೊಜೆ ನೆರವೇರಿಸಿದ್ದರು. ದೇವೇಗೌಡರ ಹೊಳೆನರಸೀಪುರ ನಿವಾಸಕ್ಕೆ ಊಟಕ್ಕೆ ಗೋಪಾಲಯ್ಯ ತೆರಳಿದ್ದರು. ಇದನ್ನರಿತಿದ್ದ ಪ್ರೀತಂ ಗೌಡ, ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಬಿಜೆಪಿಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದ ಪ್ರೀತಂ ಗೌಡ
ಹಾಸನ ನಗರಸಭೆಯಲ್ಲೂ ಜೆಡಿಎಸ್ ಪ್ರಾಬಲ್ಯವನ್ನು ಮೆಟ್ಟಿ, ಬಿಜೆಪಿಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದ ಪ್ರೀತಂ ಗೌಡ ಅವರಿಗೆ ಸಚಿವ ಗೋಪಾಲಯ್ಯನವರ ನಡೆಯ ಬಗ್ಗೆ ಬೇಸರವಿದೆ ಎಂದು ಹೇಳಲಾಗುತ್ತಿದೆ. ಗೋಪಾಲಯ್ಯ, ಜೆಡಿಎಸ್ ಜೊತೆಗಿನ ತಮ್ಮ ಹಳೆಯ ಸಂಬಂಧವನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆಯೇ ಎನ್ನುವ ಸಂಶಯ ಬಿಜೆಪಿ ವಲಯದಲ್ಲಿ ಕಾಡುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೆ.ಆರ್.ಪೇಟೆ ಉಪಚುನಾವಣೆ
ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದ ಪ್ರೀತಂ ಗೌಡ, ಸಿಎಂ ಯಡಿಯೂರಪ್ಪ ನೀಡಿದ್ದ ನಿಗಮ ಮಂಡಳಿ ಹುದ್ದೆಯನ್ನು ನಯವಾಗಿ ತಿರಸ್ಕರಿಸಿದ್ದರು. ನನಗಿನ್ನೂ ವಯಸ್ಸಿದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈಗ ಗೋಪಾಲಯ್ಯನವರ ವಿದ್ಯಮಾನ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಯಾವಮಟ್ಟಿಗೆ ಕಾವೇರಲಿದೆ ಎಂದು ಕಾದು ನೋಡಬೇಕಿದೆ.