ಏನಾಯಿತು ಗೌಡ್ರ ಪುತ್ರ ರೇವಣ್ಣಗೆ? ಯಾಕೆ ರಾಜಕೀಯ ನಿವೃತ್ತಿಯ ಮಾತು!
ಹಾಸನ, ಜ 3: ಹೊಸವರ್ಷದ ಆರಂಭದಲ್ಲೇ ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ರೇವಣ್ಣ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. "ಜಿಲ್ಲೆಯ ಹೊಸದಾಗಿ ಆಯ್ಕೆಯಾದ ನಮ್ಮ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರು ಕುದುರೆ ವ್ಯಾಪಾರಕ್ಕೆ ಸಿಗುವುದಿಲ್ಲ"ಎಂದು ರೇವಣ್ಣ ಹೇಳಿದ್ದಾರೆ.
"ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಅಂದರೆ 2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದೇ ಇದ್ದ ಪಕ್ಷದಲ್ಲಿ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ"ಎನ್ನುವ ಆಶ್ಚರ್ಯಕರ ಹೇಳಿಕೆಯನ್ನು ರೇವಣ್ಣ ನೀಡಿದ್ದಾರೆ.
ಆ ಲಿಂಬಾವಳಿ ಇದ್ದಾನಲ್ಲಾ ಅವನು ಥರ್ಡ್ ಕ್ಲಾಸ್, ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್
ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ದ ಕಿಡಿಕಾರಿರುವ ರೇವಣ್ಣ, "ನಮ್ಮವರ ತಪ್ಪಿನಿಂದಾಗಿ ಹಾಸನ ವಿಧಾನಸಭಾ ಕ್ಷೇತ್ರ ನಮ್ಮ ಕೈತಪ್ಪಿತು. ಹೊಸದಾಗಿ ಆಯ್ಕೆಯಾದ ಶಾಸಕನಿಗೆ ಅನುಭವ ಏನಾದರೂ ಇರುತ್ತದೆಯೇ?ಇನ್ನಾದರೂ ಅಭಿವೃದ್ದಿ ಕೆಲಸಕ್ಕೆ ಅಡ್ಡಗಾಲು ಹಾಕುವುದನ್ನು ಅವರು ನಿಲ್ಲಿಸಲಿ"ಎಂದು ಕಿಡಿಕಾರಿದ್ದಾರೆ.
"ದೇವೇಗೌಡ್ರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆ ಆರಂಭಿಸಿದ್ದೇವೆ. ಪೂರ್ವತಯಾರಿಯನ್ನು ಈಗಾಗಲೇ ಆರಂಭಿಸಿದ್ದೇವೆ. ನಮಗೂ ಚುನಾವಣೆ ಹೇಗೆ ಗೆಲ್ಲಬೇಕು ಎನ್ನುವುದು ಗೊತ್ತಿದೆ. ಒಂದು ವೇಳೆ ನಮ್ಮ ಲೆಕ್ಕಾಚಾರ ವರ್ಕೌಟ್ ಆಗಿಲ್ಲದಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ"ರೇವಣ್ಣ ಹೇಳಿದ್ದಾರೆ.
"ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಗೆದ್ದದ್ದು ನಮ್ಮ ಪಕ್ಷದವರು. ಪ್ರತೀ ವಾರ್ಡಿಗೆ ಬಿಜೆಪಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಎಲ್ಲಾ ಗೊತ್ತಿದ್ದ ಚುನಾವಣಾ ಆಯೋಗ ಕಣ್ಮುಚ್ಚಿ ಕೂತಿದೆ"ಎಂದು ರೇವಣ್ಣ ಆರೋಪಿಸಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ ಎನ್ನುವ ವಿಚಾರದ ಬಗ್ಗೆಯೂ ರೇವಣ್ಣನವರು, ಬಿಜೆಪಿಯ ಹಿರಿಯ ಮುಖಂಡ ಅರವಿಂದ ಲಿಂಬಾವಳಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದರು. "ಆ ಅರವಿಂದ ಲಿಂಬಾವಳಿ ಇದ್ದಾನಲ್ಲಾ ಅವನೊಬ್ಬ ಥರ್ಡ್ ಕ್ಲಾಸ್, ಬಿಜೆಪಿಯ ಉಪಾಧ್ಯಕ್ಷ ಆಗಲಿಕ್ಕೆ ಅವನಿಗೆ ಏನಿದೆ ಅರ್ಹತೆ, ಅವನು ಅನ್ ಫಿಟ್"ಎಂದು ವಾಗ್ದಾಳಿ ನಡೆಸಿದ್ದರು.