ಸಮಸ್ಯೆ ರೇವಣ್ಣನೇ ಆಗಿದ್ದರೆ ರಾಜೀನಾಮೆ ಕೊಡಿಸಲು ಪ್ರಯತ್ನಿಸ್ತೇನೆ: ಎಟಿ ರಾಮಸ್ವಾಮಿ
ಹೊಳೆನರಸೀಪುರ (ಹಾಸನ), ಜುಲೈ 16: "ರಾಜೀನಾಮೆ ಸಲ್ಲಿಸಿರುವ ಹತ್ತಕ್ಕೂ ಹೆಚ್ಚು ಶಾಸಕರು (ಜೆಡಿಎಸ್- ಕಾಂಗ್ರೆಸ್ ಶಾಸಕರು) ವಾಪಸ್ ಬಂದು, ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರಕಾರದ ಉಳಿವಿಗೆ ಸಹಕಾರ ನೀಡುವುದಾದರೆ ಲೋಕೋಪಯೋಗಿ ಸಚಿವರಾಗಿರುವ ಎಚ್.ಡಿ.ರೇವಣ್ಣ ಅವರಿಂದ ರಾಜೀನಾಮೆ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ".
- ಹೀಗೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ. ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ಸೋಮವಾರದಂದು ಮಾಧ್ಯಮದವರ ಜತೆಗೆ ಮಾತನಾಡಿದ ಎ.ಟಿ.ರಾಮಸ್ವಾಮಿ, ಸರಕಾರದ ಇಂದಿನ ಅನಿಶ್ಚಿತತೆಗೆ ಎಚ್.ಡಿ.ರೇವಣ್ಣ ಒಬ್ಬರೇ ಕಾರಣರಲ್ಲ ಎಂದು ಸಮರ್ಥಿಸಿಕೊಂಡರು.
ಎಚ್ಡಿಕೆ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣನ ಹೆಸರು ಹಾಳು ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ
ಕೆಲಸ ಮಾಡುವ ಉತ್ಸಾಹದಲ್ಲಿ ಕೆಲ ತಪ್ಪುಗಳು ಆಗಿರಬಹುದು. ಆದರೆ ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾಸಕರೇನಾದರೂ ಅಂದುಕೊಂಡಿದ್ದರೆ ರೇವಣ್ಣ ಅವರಿಂದ ರಾಜೀನಾಮೆ ಕೊಡಿಸುವುದಕ್ಕೆ ನಾನು ಪ್ರಯತ್ನ ಮಾಡುತ್ತೇನೆ ಎಂದು ಎ.ಟಿ.ರಾಮಸ್ವಾಮಿ ಅವರು ಹೇಳಿದ್ದಾರೆ.
ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದೇನೆಂದರೆ, ಲೋಕೋಪಯೋಗಿ ಸಚಿವ ಹಾಗೂ ಮುಖ್ಯಮಂತ್ರಿಗಳ ಸೋದರ ಎಚ್.ಡಿ.ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ ಎಂದಿದ್ದಾರೆ. ರೇವಣ್ಣ ಅವರ ಮೇಲೆ ಮಾತ್ರವಲ್ಲ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಇತರ ಸದಸ್ಯರ ಬಗ್ಗೆಯೂ ಅಸಮಾಧಾನ ತೋಡಿಕೊಂಡಿದ್ದಾರೆ.
ರೇವಣ್ಣ ಅಲ್ಲ 'ರಾವಣ' ಅಂತ ಹೆಸರಿಡಬೇಕಿತ್ತು: ರಾಜಣ್ಣ
ಆದರೆ, ಶಾಸಕ ಎ.ಟಿ.ರಾಮಸ್ವಾಮಿ ಅಂಥವರಿಂದ ರೇವಣ್ಣ ಅವರ ಮನವೊಲಿಸಿ ಇಂಥ ತ್ಯಾಗಕ್ಕೆ ಸಿದ್ಧಗೊಳಿಸಲು ಸಾಧ್ಯವಿದೆಯಾ? ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಇದಕ್ಕೆ ಉತ್ತರ ಇರಬಹುದು.