ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ರೇವಣ್ಣ ಎಚ್ಚರಿಕೆ
ಹಾಸನ, ಜೂನ್ 27: ಮುಖ್ಯಮಂತ್ರಿ ಯಡಿಯೂರಪ್ಪ ಇಳಿವಯಸ್ಸಿನಲ್ಲಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಮಾಜಿ ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ. ಮೊಸಳೆ ಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕುರಿತು ಹಾಸನದಲ್ಲಿ ಮಾತನಾಡುವ ಸಂದರ್ಭ ರೇವಣ್ಣ ಸರ್ಕಾರದ ನಿಯಮವನ್ನು ವಿರೋಧಿಸಿದ್ದಾರೆ.
Recommended Video
''ಸರ್ಕಾರ ತಾಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ವರ್ಗಾಯಿಸುವಂತೆ ಆದೇಶ ನೀಡಿದೆ. ದ್ವೇಷದ ರಾಜಕಾರಣದಿಂದ ಕಾಲೇಜನ್ನು ಹಾಸನದ ಎಂಜಿನಿಯರ್ ಕಾಲೇಜಿಗೆ ವಿಲೀನಗೊಳಿಸಲು ಹುನ್ನಾರ ನಡೆಸಿದೆ'' ಎಂದು ಅಸಮಾಧಾನ ಹೊರ ಹಾಕಿದ್ದಾರೆ.
'ಮರ್ಯಾದೆ ಕೊಡಿ': ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಕ್ರೋಶ
ರಾಜ್ಯದಲ್ಲಿ ಹದಿಮೂರು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇದ್ದು, ಮೊಸಳೆ ಹೊಸಹಳ್ಳಿ ಕಾಲೇಜಿನಲ್ಲಿ 173 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿಗಿಂತ ಬೇರೆ ಬೇರೆ ಕಾಲೇಜಿನಲ್ಲಿ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. ಆದರೂ, ಆ ಕಾಲೇಜುಗಳನ್ನು ಬಿಟ್ಟು ಇದನ್ನು ಮಾತ್ರ ಮುಚ್ಚುತ್ತಿದ್ದಾರೆ ಎನ್ನುವುದು ರೇವಣ್ಣ ಆರೋಪವಾಗಿದೆ.
ಗ್ರಾಮೀಣ ಭಾಗದ ಸಾಕಷ್ಟು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊಸಳೆ ಹೊಸಹಳ್ಳಿ ಕಾಲೇಜಿನಿಂದ ಅನುಕೂಲವಾಗಿದೆ. ಯಾವುದೇ ಕಾರಣಕ್ಕೂ ಕಾಲೇಜು ಇಲ್ಲಿಂದ ಸ್ಥಳಾಂತರ ಆಗಲು ಬಿಡುವುದಿಲ್ಲ. ಕಾಲೇಜು ಮುಚ್ಚಿದರೆ, ಸಿಎಂ ಮನೆ ಮುಂದೆ ಧರಣಿ ಮಾಡುತ್ತೇನೆ. ಬಿಜೆಪಿ ಸರ್ಕಾರ ಶಾಶ್ವತವಾಗಿ ಇರುವುದಿಲ್ಲ. ನಮಗೂ ಕಾಲ ಬರಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.