ಹುಣಸೂರು ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪ್ರಜ್ವಲ್ ದಿಟ್ಟ ನಿರ್ಧಾರ
ಬೆಂಗಳೂರು, ಸೆ. 18: ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರಿಂದ ತೆರವಾಗುವ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗಾಗಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿದೆ. ಈ ನಡುವೆ ಹುಣಸೂರು ಕ್ಷೇತ್ರದಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಈ ಕುರಿತಂತೆ ಸ್ಥಳೀಯ ಅಭಿಮಾನಿಗಳು ಜೆಡಿಎಸ್ ವರಿಷ್ಠರನ್ನು ಒತ್ತಾಯಿಸುದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಪ್ರಜ್ವಲ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
"ಮುಂಬರುವ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಹುಣಸೂರಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಬಂದಿರುವ ಸುದ್ದಿ ಸುಳ್ಳು. ನಾನು ಟಿಕೆಟ್ ಆಕಾಂಕ್ಷಿಯೂ ಅಲ್ಲ. ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರು ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಜೊತೆಗೆ ಹುಣಸೂರು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಮಂಡ್ಯದ ಕೆ. ಆರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸುವುದು ನಿಶ್ಚಿತ ಎಂದರು.
ಹುಣಸೂರಿಗೆ ಅಭ್ಯರ್ಥಿ ಆಯ್ಕೆ; ದೇವೇಗೌಡರ ಮಾನದಂಡವೇನು?
ಲೋಕಸಭೆ ಚುನಾವಣೆ ವೇಳೆಯಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಆಸ್ತಿ ವಿವರಗಳನ್ನು ತಪ್ಪಾಗಿ ನೀಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಅರಕಲಗೂಡು ಮಂಜು ದೂರು ಸಲ್ಲಿಸಿದ್ದರು. ಈ ಕುರಿತಂತೆ ಕೋರ್ಟ್ ನೋಟಿಸ್ ಕಳಿಸಿರುವ ಬಗ್ಗೆ ಗೊಂದಲ ಮೂಡಿರುವ ಬಗ್ಗೆ ಕೂಡಾ ಪ್ರಜ್ವಲ್ ಪ್ರತಿಕ್ರಿಯಿಸಿದ್ದಾರೆ.
"ನನ್ನ ರಾಜಕೀಯ ಪ್ರವೇಶದ ಬಗ್ಗೆ ಆಗದವರು, ವಿರೋಧಿಗಳು ಸುಳ್ಳು ಆರೋಪ ಮಾಡಿದ್ದಾರೆ. ನಾನು ನ್ಯಾಯಾಂಗಕ್ಕೆ ತಲೆ ಬಾಗುತ್ತೇನೆ. ಆದರೆ, ವಿಚಾರಣೆಗೆ ಹಾಜರಾಗುವಂತೆ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಕೋರ್ಟ್ ನೋಟಿಸ್ ಬಂದರೆ ಅದರಂತೆ ನಡೆದುಕೊಳ್ಳುತ್ತೇನೆ" ಎಂದರು.