'ನಾನು ಆರೂವರೆ ಕೋಟಿ ಕನ್ನಡಿಗರ ಕ್ಲರ್ಕ್': ಶಾ ಗೆ ಎಚ್ಡಿಕೆ ಟಾಂಗ್
ಹಾಸನ, ಫೆಬ್ರವರಿ 15: ನಾನು ಆರು ಕೋಟಿ ಕನ್ನಡಿಗರ ಕ್ಲರ್ಕ್, ಕಾಂಗ್ರೆಸ್ ಪಕ್ಷದ ಕ್ಲರ್ಕ್ ಅಲ್ಲ ಎಂದು ಅಮಿತ್ ಶಾ ಮಾತಿಗೆ ತಕ್ಕ ತಿರುಗೇಟು ನೀಡಿದ್ದಾರೆ ಕುಮಾರಸ್ವಾಮಿ.
ನಿನ್ನೆ ರಾಯಚೂರಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, 'ಕುಮಾರಸ್ವಾಮಿ ಸಿಎಂ ಅಲ್ಲ ಕಾಂಗ್ರೆಸ್ನ ಕ್ಲರ್ಕ್' ಎಂದು ವ್ಯಂಗ್ಯ ಮಾಡಿದ್ದರು. ಅದಕ್ಕೆ ಇಂದು ಹಾಸನದಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದ ಚೆನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರಾಧ್ಯಕ್ಷರಾಗಿ ಹೀಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ಆಪರೇಷನ್ ಕಮಲ ಆಡಿಯೋ ಬಗ್ಗೆ ಮಾತನಾಡಿದ ಅವರು, ಆಡಿಯೋದಲ್ಲಿನ ಧ್ವನಿ ಯಡಿಯೂರಪ್ಪ ಅವರದ್ದೇ ಎಂದು ಯಾರು ಬೇಕಾದರೂ ಹೇಳುತ್ತಾರೆ. ಆಡಿಯೋ ಬಗ್ಗೆ ಎಸ್ಐಟಿ ತನಿಖೆ ಮಾಡುವ ಬಗ್ಗೆ ಶೀಘ್ರವೇ ಸರ್ಕಾರ ನಿರ್ಧಿಸುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕ ಪ್ರೀತಂಗೌಡ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಅವರ ಆರೋಪದಲ್ಲಿ ಹುರುಳಿಲ್ಲ. ಕೊಲೆಯ ಆರೋಪ ಹೊರಿಸುತ್ತಿರುವುದರಿಂದಲೇ ಬಿಜೆಪಿ ಸಂಸ್ಕೃತಿ ಎಂತಹದ್ದು ಎಂಬುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ನಿನ್ನೆ ನಡೆದ ಉಗ್ರರ ದಾಳಿ ಬಗ್ಗೆ ಮಾತನಾಡಿದ ಅವರು, ಮಂಡ್ಯದ ಹುತಾತ್ಮ ಯೋಧ ಗುರು ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ಹೇಳಿದರು.