ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಶಾಸಕ ಪ್ರೀತಂ
ಹಾಸನ, ಜನವರಿ26: ಹಾಸನ ಜಿಲ್ಲೆಗೆ ನಾನೇ ಮುಖ್ಯಮಂತ್ರಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ಸಹಕಾರ ಕೊಟ್ಟಿದ್ದಾರೆ, ಈಗಿನ ಮುಖ್ಯಮಂತ್ರಿಗಳು ಹಾಗೂ ಸಚಿವರು ಬೆನ್ನು ತಟ್ಟುತ್ತಿದ್ದಾರೆ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು ''ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ'' ಎಂದರು. ಸಚಿವ ಸಂಪುಟ ಪುನಾರಚನೆ ಚರ್ಚೆ ನಡೆಯುತ್ತಿದ್ದು ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ಇದೆ.
ಆದರೆ ನಾನು ಸದ್ಯ ಸಚಿವ ಸ್ಥಾನದ ರೇಸ್ನಲ್ಲಿ ಇಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹ ನನಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಲಾಗಿತ್ತು. ಅದನ್ನು ನಾನು ತಿರಸ್ಕರಿಸಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ ಅದರಂತೆ ಸರ್ಕಾರ ನಡೆದುಕೊಂಡಿದೆ.
ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಸನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿದ್ದಾರೆ ಎಂದರು. ಮುಂದಿನ 2022 ರಾಜ್ಯ ಬಜೆಟ್ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳ ನಿರೀಕ್ಷೆಯಲ್ಲಿದ್ದು ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದೇನೆ, ಸಿಎಂ ಹಾಗೂ ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಸದ್ಯ ನಾನೇ ಸಿಎಂ ಆದ್ದರಿಂದ ಸಚಿವ ಸ್ಥಾನದ ಬಗ್ಗೆ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ, ಮೊದಲನೇ ಬಾರಿ ಶಾಸಕನಾಗಿ ಹಾಸನದಲ್ಲಿ ಅಧಿಕಾರದಲ್ಲಿದ್ದು ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದರು.
ಬಿಜೆಪಿ ಶಾಸಕರು ಪಕ್ಷಾಂತರ ವಿಚಾರ ಪ್ರತಿಕ್ರಿಯಿಸಿದ ಅವರು ನಾನಿನ್ನು ಪ್ರಬುದ್ಧನಾಗಿಲ್ಲ. ಮೊದಲ ಬಾರಿ ಶಾಸಕನಾಗಿ ನಾನು ಅಧಿಕಾರ ನಡೆಸುತ್ತಿದ್ದು, ಕಾಂಗ್ರೆಸ್ನಿಂದ ಬಂದವರು ಈಗಾಗಲೇ ನಮ್ಮ ಪಕ್ಷದಲ್ಲಿ ಮಂತ್ರಿಗಳಾಗಿ ಅಧಿಕಾರ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂಬುದು ಕೇವಲ ಊಹಾಪೋಹವಷ್ಟೇ ಎಂದರು.
ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೆ :
ನಾನು ಬಿಜೆಪಿಯಲ್ಲಿ ಸ್ವಯಂ ಸೇವಕನಾಗಿ ನಂತರ ಕಾರ್ಯಕರ್ತನಾಗಿ ಶಾಸಕನಾಗಿ ಅಧಿಕಾರ ಹಿಡಿದಿದ್ದೇನೆ. ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಹೊರತು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮಾತನಾಡುವವರು ಕೇವಲ ಬಾಯಿ ಚಪಲ ತೀರಿಸಿಕೊಳ್ಳಬೇಕು ಅಷ್ಟೇ. ಇದೆಲ್ಲ ಊಹಾಪೋಹ ಹಾಗೂ ಭ್ರಮೆಯ ಮಾತುಗಳಾಗಿವೆ. ನನ್ನ ಮಾತೃಪಕ್ಷ ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷ ಸೇರುವ ಯಾವುದೇ ಆಸಕ್ತಿ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರೀತಂ ಗೌಡ ರಾಜಕೀಯವಾಗಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಯಾವುದೇ ಅಪಪ್ರಚಾರ ಬೇಡ. ಇವೆಲ್ಲಾ ಕೇವಲ ಊಹಾಪೋಹವಾಗಿದ್ದು ನಾನು ಒಂದಲ್ಲ, ಡಿಕೆಶಿ ಅವರೊಂದಿಗೆ ನೂರು ಸುತ್ತಿನ ಮಾತುಕತೆ ನಡೆದರೂ ಸಹ ಪ್ರೀತಂ ಗೌಡ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಹಾಸನದಲ್ಲಿ ರೇವಣ್ಣ ವಿರುದ್ದ ಪ್ರೀತಂಗೌಡ ವಾಗ್ದಾಳಿ
ನ್ಯೂಟ್ರಿಷಿಯನ್ ಕೋರ್ಸ್ ನೀಡದ್ದಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಧರಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೀತಂ, ಅವರ ವಿಧಾನಸಭಾ ಕ್ಷೇತ್ರಕ್ಕೆ ಏನು ಬೇಕು ಎಂದು ಅವರು ಕೇಳಿರುತ್ತಾರೆ, ಕೇಳಿದ್ದೆಲ್ಲಾ ಕೊಡಲು ಭಗವಂತನ ಕೈಯಲ್ಲೂ ಆಗಲ್ಲ, ಮನುಷ್ಯರ ಆಸೆ ಎಷ್ಟು ಇರುತ್ತದೆ ಎಂದರೆ, ದೇವರು ಕೂಡ ನಮ್ಮ ಆಸೆಗಳನ್ನು ಪೂರೈಸಲು ಆಗಲ್ಲ, ಅಂತಹದ್ದರಲ್ಲಿ ಒಬ್ಬ ಸಾಮಾನ್ಯ ಸಚಿವರು, ಸಾಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಶಾಸಕರ, ಎಲ್ಲಾ ಮಂತ್ರಿಗಳ, ಎಲ್ಲಾ ಜನರ ಆಸೆಗಳನ್ನು ಈಡೇರಿಸಲು ಆಗಲ್ಲ, ಅವರು ಕೇಳಿರುವ ಹತ್ತರಲ್ಲಿ ಏಳೆಂಟು ಕೆಲಸ ಮಾಡಿಕೊಟ್ಟಿರುತ್ತಾರೆ, ಏಳೆಂಟು ಮಾಡಿಕೊಟ್ಟಿರುವುದನ್ನು ಮರೆತು, ಒಂದು ಕೆಲಸ ಆಗಿಲ್ಲ ಎಂದು ರಚ್ಚೆ ಇಡಿಯುವುದು ಬಿಡಬೇಕು, ಮಾಡಿಕೊಟ್ಟಿರುವ ಕೆಲಸಕ್ಕೆ ಕೃತಜ್ಞತೆ ಭಾವನೆ ಇಟ್ಟುಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯದು,'' ಎಂದರು.
Recommended Video
ಬಿಜೆಪಿ ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಕಾಂಗ್ರೆಸ್ನ ಶಾಸಕರು, ಮಂತ್ರಿಯಾಗಿದ್ದವರು ಆ ಪಕ್ಷ ಬಿಟ್ಟು ಬಿಜೆಪಿ ಪಕ್ಷದ ಕದ ತಟ್ಟಿ ಗೆದ್ದು ಮಂತ್ರಿಯಾಗಿದ್ದಾರೆ. ಅಂತಹದ್ದರಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಹೋಗ್ತಾರೆ ಎನ್ನೋದು ಅವರ ವರ್ಚಸ್ಸನ್ನು ಅವರೇ ವೃದ್ಧಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗ, ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದೆ, ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಹೋಗುವ ದುಸ್ಥಿತಿ ಬಿಜೆಪಿ ಪಕ್ಷದ ಶಾಸಕರಿಗೆ ಬಂದಿಲ್ಲ, ಬರೋದು ಇಲ್ಲ,'' ಎಂದು ಸ್ಪಷ್ಟಪಡಿಸಿದರು.