ಹಾಸನಾಂಬೆ ದರ್ಶನ : ವಿಶೇಷ ದರ್ಶನಕ್ಕೆ 1 ಸಾವಿರ ರೂ. ಟಿಕೆಟ್
ಹಾಸನ, ನವೆಂಬರ್ 02 : ಹಾಸನ ನಗರದ ಅಧಿದೇವತೆಯಾದ ಹಾಸನಾಂಬ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ನವೆಂಬರ್ 2 ರಿಂದ 8 ತನಕ ಭಕ್ತಾದಿಗಳು ದೇವಿಯ ದರ್ಶನವನ್ನು ಪಡೆಯಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ.
ನವೆಂಬರ್ 1 ರಿಂದ 9 ರವರೆಗೆ ತನಕ ಈ ಬಾರಿ ಹಾಸನಾಂಬ ದೇವಾಯಲಯದ ಬಾಗಿಲು ತೆರೆದಿರುತ್ತದೆ. ಆದರೆ, ಮೊದಲ ಮತ್ತು ಕೊನೆ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಉಳಿದ ಏಳು ದಿನಗಳ ಕಾಲ ಸಾರ್ವಜನಿಕರು ದೇವಿಯ ದರ್ಶನ ಪಡೆಯಬಹುದಾಗಿದೆ.
ಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣ
ನವೆಂಬರ್ 1ರಂದು ಮಧ್ಯಾಹ್ನ 12.30ಕ್ಕೆ ಧರ್ಮಸ್ಥಳದ ಧರ್ಮಧಿಕಾರಿ ವೀರೆಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಸಂಪ್ರದಾಯ ಬದ್ಧವಾಗಿ ವಿಧಿವಿಧಾನಗಳ ಮೂಲಕ ಪೂಜೆ ನೆರವೇರಿಸಿ ದೇವಾಲಯದ ಬಾಗಿಲು ತೆರೆಯಲಾಯಿತು.
ನವೆಂಬರ್ 1 ರಿಂದ ಹಾಸನಾಂಬೆಯ ದರ್ಶನ ಪಡೆಯಿರಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಹಾಸನಕ್ಕೆ ಭೇಟಿ ನೀಡಲಿದ್ದು, ನಗರದ ಅಧಿದೇವತೆಯಾದ ಹಾಸನಾಂಬ ದರ್ಶನವನ್ನು ಪಡೆಯಲಿದ್ದಾರೆ. ವಿಶೇಷ ದರ್ಶನಕ್ಕೆ 1 ಸಾವಿರ ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಟಿಕೆಟ್ ದರ ಹೆಚ್ಚಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ತೆರೆದ ಹಾಸನಾಂಬ ದೇವಾಲಯ ಬಾಗಿಲು, ಭಕ್ತಾದಿಗಳ ನೂಕು-ನುಗ್ಗಲು
ವರ್ಷಕ್ಕೊಮ್ಮೆ ದರ್ಶನ
ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. ನವೆಂಬರ್ 1ರಂದು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ದೇವಾಲಯದ ಮುಂದಿನ ಬಾಳೆಕಂದನ್ನು ಕಡಿಯುವ ಮೂಲಕ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ನವೆಂಬರ್ 1 ರಿಂದ 9ರ ತನಕ ದೇವಾಲಯ ಬಾಗಿಲು ತೆರೆದಿರುತ್ತದೆ.
ಬಲಿಪಾಡ್ಯದ 3ನೇ ದಿನ ಬಂದ್
ವರ್ಷಕ್ಕೊಮ್ಮ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರಯಲಾಗುತ್ತದೆ. ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಬಲಿಪಾಡ್ಯದ 3ನೇ ದಿನ ದೇವಾಲಯಕ್ಕೆ ಬಾಗಿಲು ಹಾಕಲಾಗುತ್ತದೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆಯುವುದರಿಂದ ನೂರಾರು ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಶುಕ್ರವಾರದಿಂದ ಸಾರ್ವಜನಿಕ ದರ್ಶನ
ನವೆಂಬರ್ 1ರ ಮಧ್ಯಾಹ್ನ ವಿವಿಧ ಪೂಜೆಗಳನ್ನು ಮಾಡಿ ದೇವಾಲಯದ ಬಾಗಿಲು ತೆರೆಯಲಾಯಿತು. ಮೊದಲ ದಿನ ಸಾರ್ವನಿಕರಿಗೆ ದರ್ಶನ ಇರುವುದಿಲ್ಲ. ನವೆಂಬರ್ 9ರಂದು ಬಾಗಿಲು ಹಾಕಲು ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಆದ್ದರಿಂದ, ಅಂದು ಸಹ ಸಾರ್ವಜನಿಕರಿಗೆ ದರ್ಶನ ಲಭ್ಯವಿರುವುದಿಲ್ಲ. ಉಳಿದ 7 ದಿನಗಳ ಕಾಲ ಜನರು ದೇವಿಯ ದರ್ಶನ ಪಡೆಯಬಹುದಾಗಿದೆ.
ವಿವಿಧ ಪೂಜೆಗಳು
ಸಂಪ್ರದಾಯಗಳಂತೆ ವಿವಿಧಿ ಪೂಜೆಗಳನ್ನು ಸಲ್ಲಿಸಿದ ಬಳಿಕ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲು ತೆರೆಯಲಾಯಿತು. ಶಾಸಕರಾದ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಪರ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎ.ಎನ್.ಪ್ರಕಾಶ್ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಜಾತ್ರ ಮಹೋತ್ಸವದ ಅಂಗವಾಗಿ ವಿವಿಧ ಪುಷ್ಪ ಮತ್ತು ಹಣ್ಣುಗಳಿಂದ ಅಲಂಕಾರಿಸಿರುವುದು ಅತ್ಯಾಕರ್ಷವಾಗಿದ್ದು, ನೋಡುಗರ ಮನಸೊರೆಗೊಳುತ್ತಿದೆ. ಇಂದಿನಿಂದ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಲಿದ್ದಾರೆ.
1 ಸಾವಿರ ವಿಶೇಷ ದರ್ಶನ
ಹಾಸನಾಂಬ ದೇವಿಯ ವಿಶೇಷ ದರ್ಶನವನ್ನು ಪಡೆಯಲು ಅವಕಾಶವಿದೆ. ಇದಕ್ಕಾಗಿ ಜಿಲ್ಲಾಡಳಿತ 1 ಸಾವಿರ ರೂ.ಗಳ ಟಿಕೆಟ್ ನಿಗದಿ ಮಾಡಿದೆ. ಕಳೆದ ವರ್ಷ ಟಿಕೆಟ್ ದರ ಹೆಚ್ಚಾಯಿತು ಎಂದು ಎಚ್.ಡಿ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಾರಿ ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಅವರೇ ಆದರೆ ವಿಶೇಷ ದರ್ಶನ ಟಿಕೆಟ್ ಬಗ್ಗೆ ಯಾವುದೇ ಚಕಾರವನ್ನು ಎತ್ತಿಲ್ಲ.