ಪ್ರಜ್ವಲ್ ರೇವಣ್ಣ ಸಂಸತ್ ಸ್ಥಾನಕ್ಕೆ ಕುತ್ತು, ಹೈಕೋರ್ಟಿನಿಂದ ಸಮನ್ಸ್ ಜಾರಿ
Recommended Video
ಬೆಂಗಳೂರು, ಸೆ. 04: ಜೆಡಿಎಸ್ನ ಏಕೈಕ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ನಿಂದ ಮತ್ತೊಮ್ಮೆ ಸಮನ್ಸ್ ಜಾರಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಸ್ತಿ ಘೋಷಣೆ ವಿವರ, ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ಕುರಿತಂತೆ ಸ್ಪಷ್ಟಣೆ ಕೋರಲಾಗಿದೆ.
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರಜ್ವಲ್ ರೇವಣ್ಣ ಅವರು ಚೊಚ್ಚಲ ಪ್ರಯತ್ನದಲ್ಲೇ ಜಯ ಗಳಿಸಿದ್ದರು. ಆದರೆ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ಅವರು ಜೂನ್ 26ರಂದು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎ.ಮಂಜು ವಿರುದ್ಧ 1.40 ಲಕ್ಷ ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶಿಸಿದ್ದಾರೆ. ಲೋಕಸಭೆಗೆ ಪ್ರವೇಶಿಸುತ್ತಿರುವ ಅತಿ ಕಿರಿಯ ಸಂಸದರಲ್ಲಿ ಪ್ರಜ್ವಲ್ ಕೂಡ ಒಬ್ಬರು.
ಈ ಅರ್ಜಿ ವಿಚಾರಣೆ ನಡೆದು ಹಾಸನ ಜಿಲ್ಲಾಧಿಕಾರಿಗಳಿಂದ , ವರದಿ ಪಡೆದ ಹೈಕೋರ್ಟ್ ನ್ಯಾ. ಜಾನ್ ಮೈಕಲ್ ಕುನ್ಹಾ ಸಮನ್ಸ್ ಜಾರಿಗೊಳಿಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸೆ.06ಕ್ಕೆ ಮುಂದೂಡಿದ್ದಾರೆ.
ಸಮನ್ಸ್ ಇನ್ನೂ ಪ್ರಜ್ವಲ್ ಕೈ ತಲುಪಿಲ್ಲವೇಕೆ?
ಮಂಗಳವಾರ(ಸೆ. 03) ದಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಜ್ವಲ್ ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ, ಕೋರ್ಟ್ ಸಿಬ್ಬಂದಿ ಸಮನ್ಸ್ ಹಿಡಿದುಕೊಂಡು ನಾಮಪತ್ರದಲ್ಲಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದರೆ ಯಾರೂ ಕಾಣಿಸಿಲ್ಲ. ವಿಳಾಸಕ್ಕೆ ಸಮನ್ಸ್ ಅಂಟಿಸಿ ಬರಲಾಗಿದ್ದು, ಪತ್ರಿಕಾ ಪ್ರಕಟಣೆಯನ್ನು ನೀಡುವಂತೆ ಅರಕಲಗೂಡು ಮಂಜು ಅವರು ಮನವಿ ಮಾಡಿದ್ದಾರೆ. ಈ ಮನವಿ ಬಗ್ಗೆ ಸೆ. 06ರಂದು ವಿಚಾರಣೆ ನಡೆಸುವುದಾಗಿ ನ್ಯಾ. ಜಾನ್ ಮೈಕಲ್ ಕುನ್ಹಾ ತಿಳಿಸಿದರು.
ಅರಕಲಗೂಡು ಮಂಜು ವಾದವೇನು?
"ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ. ಸುಮಾರು 6 ಕೋಟಿ ಮೌಲ್ಯದ ಆಸ್ತಿ ಬಗ್ಗೆ ವಿವರ ನೀಡಿಲ್ಲ. ಈ ಬಗ್ಗೆ ಈ ಮುಂಚೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು" ಎಂದು ಮಂಜು ಹೇಳಿದ್ದಾರೆ.
ನಾಮಪತ್ರದಲ್ಲಿ ಹಲವು ಉಲ್ಲೇಖಗಳು ಮಾಯ
ಹೊಳೆನರಸೀಪುರದಲ್ಲಿರುವ ಚೆನ್ನಕಾಂಬ ಕನ್ವೆನ್ಶನ್ ಹಾಲ್ಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ವಾಣಿಜ್ಯ ಕಟ್ಟಡಗಳನ್ನು ತಾವು ಹೊಂದಿಲ್ಲವೆಂದು ರೇವಣ್ಣ ಹೇಳಿದ್ದಾರೆ. ಆದರೆ ಚೆನ್ನಕಾಂಬಾ ಕನ್ವೆನ್ಶನ್ ಹಾಲ್ ರೇವಣ್ಣ ಅವರದ್ದೇ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ದೇವೇಗೌಡ ಅವರ ನಾಮಪತ್ರದಲ್ಲಿ ಪ್ರಜ್ವಲ್ ರೇವಣ್ಣಗೆ 23 ಲಕ್ಷ ಕೊಟ್ಟಿರುವುದಾಗಿ ನಮೂದು ಮಾಡಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ಅವರ ನಾಮಪತ್ರದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಾರಿ ನಿರ್ದೇಶನಾಲಯಕ್ಕೂ ದೂರು
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ವಿವರಗಳನ್ನು ಸರಿಯಾಗಿ ಸಲ್ಲಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಕಾಂಗ್ರೆಸ್ ಕಾರ್ಯಕರ್ತ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಲ್ಲದೆ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಿದ್ದೇನೆ ಆದರೆ, ಯಾವುದೆ ಕ್ರಮ ಜರುಗಿಸಿಲ್ಲದ ಕಾರಣ, ನ್ಯಾಯಾಲಯದ ಮೆಟ್ಟಿಲೇರಿದ್ದೇನೆ ಎಂದು ಮಂಜು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ತನಿಖೆ
ಪ್ರಜ್ವಲ್ ರೇವಣ್ಣ ಅವರ ಆಸ್ತಿ ವಿವರಗಳಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನು ಪರಿಶೀಲಿಸಿದ್ದ ರಾಜ್ಯ ಚುನಾವಣಾ ಆಯೋಗ, ಈ ಬಗ್ಗೆ ವರದಿ ನೀಡುವಂತೆ ಹಾಸನ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಐದು ಪುಟಗಳ ವರದಿ ನೀಡಿದ್ದರು. ಈ ಎಲ್ಲ ಆರೋಪಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದರು.
ರೇವಣ್ಣ ಸೇರಿ ಇತರರಿಗೂ ಕಂಟಕ
ಆದಾಯ ತೆರಿಗೆ ಇಲಾಖೆ ತನಿಖೆಗೆ ಮುಂದಾದರೆ, ದೇವೇಗೌಡರ ಕುಟುಂಬವನ್ನೇ ತನಿಖೆಗೆ ಒಳಪಡಿಸಬೇಕಾಗಬಹುದು. ಏಕೆಂದರೆ, ಎಚ್.ಡಿ. ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಸಾಲ ನೀಡಿರುವುದಾಗಿ ನಾಮಪತ್ರದಲ್ಲಿ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಜ್ವಲ್ ರೇವಣ್ಣ ಅಫಿಡವಿಟ್ನಲ್ಲಿ ಮಾಹಿತಿ ನೀಡಿಲ್ಲ. ಆದರೆ, ಅಜ್ಜಿ ಚನ್ನಮ್ಮ ದೇವೇಗೌಡ ಅವರಿಗೆ ಸಾಲ ನೀಡಿರುವುದಾಗಿ ಪ್ರಜ್ವಲ್ ದಾಖಲಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ತನಿಖೆಗೆ ಒಳಪಡಿಸಿದರೆ ಕುಟುಂಬವೇ ಸಂಕಷ್ಟಕ್ಕೆ ಒಳಗಾಗಲಿದೆ.
ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ
ಪ್ರಜಾಪ್ರತಿನಿಧಿ ಕಾಯ್ದೆ 125ಎ ಮತ್ತು 1951ರ ಅಡಿ ಕ್ರಮ ತೆಗೆದುಕೊಂಡರೆ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣಾ ಆಯೋಗ ದಂಡ ವಿಧಿಸಬಹುದು. ಅಥವಾ ಅವರನ್ನು ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಮಿಗಿಲಾಗಿ ಇಷ್ಟು ದೊಡ್ಡ ಅಂತರದಿಂದ ಗೆದ್ದಿದ್ದರೂ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನ ಕಳೆದುಕೊಳ್ಳಬಹುದು. ಇದರಿಂದ ಇಡೀ ರಾಜ್ಯದಲ್ಲಿ ಜೆಡಿಎಸ್ ಸಾಧನೆ 'ಶೂನ್ಯ'ವಾಗುತ್ತದೆ. ಚುನಾವಣೆಯಲ್ಲಿ ಎರಡನೆಯ ಸ್ಥಾನ ಪಡೆದ ಎ. ಮಂಜು ಅವರು ಸಂಸದರಾಗುವ ಅರ್ಹತೆ ಪಡೆದುಕೊಳ್ಳುತ್ತಾರೆ. ಇದರಿಂದ ಹಾಸನದಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಾರೆ.