ಹಾಸನದಲ್ಲಿ ವರುಣನ ಆರ್ಭಟ: ತೆಂಗು, ಅಡಿಕೆ, ಭತ್ತದ ಗದ್ದೆಗೆ ನುಗ್ಗಿದ ನೀರು
ಹಾಸನ, ಆಗಸ್ಟ್ 2 : ರಾಜ್ಯದಲ್ಲಿ ಮಳೆ ನಿಂತಿತು ಎನ್ನುವಷ್ಟರಲ್ಲೇ ಕಳೆದೆರಡು ದಿನಗಳಿಂದ ಮತ್ತೆ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ಹಾಸನ ಜಿಲ್ಲೆಯಲ್ಲೂ ವರುಣಾರ್ಭಟ ಮುಂದುವರಿದಿದೆ. ಕಳೆದ ತಿಂಗಳು ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಬೆಂಬಿಡದೆ ಕಾಡಿದ್ದ ಮಳೆರಾಯ ಇದೀಗ ಬಯಲುಸೀಮೆ ತಾಲ್ಲೂಕುಗಳಲ್ಲೂ ಅಬ್ಬರಿಸಿದ್ದಾನೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಅವಾಂತರಗಳು ಕೂಡ ಸೃಷ್ಟಿಯಾಗಿವೆ.
ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದ ಅರಸೀಕೆರೆ ನಗರದ ಅನೇಕ ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅನೇಕ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿವೆ. ಭಾರಿ ಮಳೆಗೆ ರಸ್ತೆ ಬದಿ ನಿಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡುವ ಕಾರ್ಮಿಕರಿಗೆ ಸೇರಿದ ಎರಡು ಬೈಕ್ಗಳು ಹಾಗೂ ಓಮಿನಿ ಕಾರು ನೀರಿನಲ್ಲಿ ಕೊಚ್ಚಿ ಹೋಗಿವೆ.
Infographics: ಕರ್ನಾಟಕದ ಕರಾವಳಿ, ಮಲೆನಾಡಿಗೆ 'ಹೈ ಅಲರ್ಟ್' ಘೋಷಣೆ
ಅರಸೀಕೆರೆ ತಾಲ್ಲೂಕಿನ ಜಿಜಿಹಳ್ಳಿ, ಅಂಚೇಕೊಪ್ಪಲು ಗ್ರಾಮದ ಕೆರೆ ಏರಿ ಕುಸಿತವಾಗಿದ್ದು ದಶಕಗಳಿಂದ ತುಂಬದೇ ಇದ್ದ ಮುರುಂಡಿ ಕೆರೆ ಕೋಡಿ ಬಿದ್ದಿದೆ. ಅರಸೀಕೆರೆ ನಗರದಲ್ಲಂತೂ ಎಲ್ಲಿ ನೋಡಿದರಲ್ಲಿ ನೀರು ತುಂಬಿದ್ದು ನಗರಸಭೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲೂ ನೀರು ನುಗ್ಗಿದೆ. ಮಂಗಳವಾರ ಬೆಳಗ್ಗೆ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಮತ್ತು ತಹಶಿಲ್ದಾರ್ ವಿದ್ಯಾ ವಿಭಾ ರಾಥೋಡ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರತಿ ಬಾರಿಯೂ ಮಳೆ ಬಂದಾಗೆಲ್ಲ ನಮಗೆ ಇದೇ ಪರಿಸ್ಥಿತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಚನ್ನರಾಯಪಟ್ಟಣ ತಾಲ್ಲೂಕಿನಲ್ಲೂ ವರುಣ ಅಬ್ಬರಿಸಿದ್ದು ಕೆರೆಗಳು ಕೋಡಿ ಬಿದ್ದಿವೆ ತಾಲ್ಲೂಕಿನ ದಿಂಡಗೂರು ಕೆರೆ ಕೋಡಿ ಬಿದ್ದಿದ್ದು ವಳಗೆರೆಸೋಮನಹಳ್ಳಿ- ನಂದೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಬದಲಿ ರಸ್ತೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಕೂಡ ಎದುರಾಗಿದೆ. ಕೋಡಿ ಹೋಗುತ್ತಿರುವ ನೀರು ತೆಂಗು, ಅಡಿಕೆ, ಭತ್ತದ ಗದ್ದೆಗೆ ನುಗ್ಗಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲೂ ಮಳೆಯಾಗುತ್ತಿದ್ದು, ವಾಡಿಕೆ ಮಳೆಗೂ ಈಗ ಆಗಿರುವ ಮಳೆಗೂ ಅಜಗಜಾಂತರ ವ್ಯತ್ಯಾಸದ ಮಳೆಯಾಗಿದೆ.
ಇನ್ನೂ 6 ದಿನ ಭಾರಿ ಮಳೆ ಸಾಧ್ಯತೆ:
ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಡಗು, ಹಾಸನ, ಬೆಳಗಾವಿ, ಮೈಸೂರು, ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸೋಮವಾರದಿಂದ ಸಂಜೆಯಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಆಗಸ್ಟ್ 6ರವರೆಗೂ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯಿದೆ. ಉತ್ತರಕನ್ನಡ ಜಿಲ್ಲೆ ಭಾರಿ ಮಳೆಗೆ ತತ್ತರಿಸಿ ಹೋಗಿದೆ. ಭಟ್ಕಳ ತಾಲೂಕಿನಲ್ಲಿ ದಾಖಲೆ ಪ್ರಮಾಣದ 550 ಮಿ.ಮೀ.ಮಳೆಯಾಗಿದೆ.
ಇನ್ನು ದಕ್ಷಿಣ ಕನ್ನಡ ಪಶ್ಚಿಮ ಘಟ್ಟದಲ್ಲಿ ಮಳೆರಾಯ ರೌದ್ರನರ್ತನ ತೋರಿದ್ದು, ಹಲವು ಹಳ್ಳಿಗಳು ನೀರಿಗೆ ಜಲಾವೃತಗೊಂಡಿದೆ. ರಸ್ತೆಗಳು ಕೊಚ್ಚಿ ಹೋಗಿವೆ, ಸೇತುವೆಗಳು ಮುಳುಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿವೆ. ಹತ್ತಾರು ಮನೆಗಳು ಕುಸಿದುಬಿದ್ದಿವೆ. ಕುಕ್ಕೆಯಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ.