ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ರೇವಣ್ಣ ಗರಂ
ಹಾಸನ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರಿಂದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಚಿವ ಎಚ್.ಡಿ. ರೇವಣ್ಣ ಕಿಡಿಕಾರಿದ ಘಟನೆ ಬುಧವಾರ ನಡೆಯಿತು.
ಹಾಸನ ಜಿಲ್ಲಾಕೇಂದ್ರದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಕಾರ್ಯಕ್ರಮದ ಸಮಯಕ್ಕೆ ಹಾಜರಾಗುವ ಸಚಿವ ಎಚ್.ಡಿ. ರೇವಣ್ಣ, ಸುಮಾರು 25 ನಿಮಿಷ ಬೇಗನೆ ಬಂದಿದ್ದರು.
ಕರ್ನಾಟಕ ಅಭಿವೃದ್ಧಿಯ 360 ಡಿಗ್ರಿ ಯೋಜನೆ ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಜಿಲ್ಲಾ ಉಸ್ತುವಾರಿಯೂ ಆಗಿರುವ ಅವರು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲು ಆಗಮಿಸಿದ್ದರು. ಆದರೆ, ಅವರು ಬಂದ ಸಮಯಕ್ಕೆ ಅವರನ್ನು ಸ್ವಾಗತಿಸಲು ಜಿಲ್ಲಾಧಿಕಾರಿ ಒಳಗೊಂಡಂತೆ ಪ್ರಮುಖ ಅಧಿಕಾರಿಗಳು ಅಲ್ಲಿ ಹಾಜರಿರಲಿಲ್ಲ.
ಈ ಬಾರಿಯೂ ಧರಿಸಿದ ದಿರಿಸಿನ ಮೂಲಕ ಗಮನ ಸೆಳೆದ ಪ್ರಧಾನಿ ಮೋದಿ
ಇದರಿಂದ ರೇವಣ್ಣ ಅಸಮಾಧಾನಗೊಂಡಿದ್ದರು. ರೇವಣ್ಣ ಸಮಾರಂಭದ ಸ್ಥಳಕ್ಕೆ ಬಂದಿರುವುದನ್ನು ತಿಳಿದು ಕೂಡಲೇ ರೋಹಿಣಿ ಸಿಂಧೂರಿ ಅಲ್ಲಿಗೆ ತೆರಳಿದರು.
ಈ ರೀತಿ ವರ್ತನೆ ಇಷ್ಟವಾಗುವುದಿಲ್ಲ
ಈ ವೇಳೆ ರೇವಣ್ಣ, ಸಿಂಧೂರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾಕೆ ಲೇಟು? ಈ ರೀತಿ ತಡ ಮಾಡಿದರೆ ಹೇಗೆ ಎಂದು ಅವರನ್ನು ಪ್ರಶ್ನೆ ಮಾಡಿದರು. ಜಿಲ್ಲಾಧಿಕಾರಿ ಇನ್ನೋಸೆಂಟ್ ಆಗಿ ವರ್ತಿಸಬೇಕು. ಈ ರೀತಿ ಬಿಹೇವ್ ಮಾಡಿದರೆ ನನಗೆ ಇಷ್ಟವಾಗುವುದಿಲ್ಲ ಎಂದು ರೇವಣ್ಣ ಕೋಪದಿಂದ ನುಡಿದರು.
ಸ್ವಲ್ಪ ಹೊತ್ತಿನ ಬಳಿಕ ಸಮಾಧಾನಗೊಂಡ ರೇವಣ್ಣ, ಅವರೊಂದಿಗೆ ಸಹಜವಾಗಿ ಮಾತನಾಡಿ, ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು.
ಜಿಲ್ಲಾ ಕ್ರೀಡಾಂಗಣದಲ್ಲಿ ಚಪ್ಪಲಿ ಕಳಚಿ ಧ್ವಜಾರೋಹಣ ನೆರವೇರಿಸಿದ ರೇವಣ್ಣ, ಸ್ವಾತಂತ್ರೋತ್ಸವ ಸಂದೇಶವನ್ನು ನೀಡಿದರು.
ನಾನ್ಯಾಕೆ ಗರಂ ಆಗಲಿ?
ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ, ನಾನ್ಯಾಕೆ ಅವರ ವಿರುದ್ಧ ಗರಂ ಆಗಲಿ. ನಾನು ಅವರನ್ನು ಬೈದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಪ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋರ್ಟ್ ಆದೇಶದಂತೆ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.
ಸಾವಿರಾರು ಮಂದಿಯ ಬಲಿದಾನ
ನೂರಾರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಹೊರ ಬಂದು ನಮ್ಮ ದೇಶ ಸ್ವಾತಂತ್ರ್ಯ ಹೊಂದಿದ ದಿನ. ಈ ಸ್ವಾತಂತ್ರ್ಯದ ಹೋರಾಟದ ಹಿಂದೆ ಸಾವಿರಾರು ಮಂದಿಯ ಬಲಿದಾನವಿದೆ. ಮಾನ್ಯರಾದ ಮಹಾತ್ಮಗಾಂಧಿ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ರಾಯ್, ಜವಾಹರಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರೋಜಿನಿ ನಾಯ್ಡು ಸೇರಿದಂತೆ ಸಹಸ್ರಾರು ಮಂದಿಯ ಕೆಚ್ಚೆದೆಯ ಹೋರಾಟದ ಫಲ ಈ ಸ್ವಾತಂತ್ರ್ಯ ಈ ದಿನವನ್ನು ನಾವೆಲ್ಲರೂ ಹೆಮ್ಮೆ ಹಾಗೂ ಸಂತೋಷದಿಂದ ಆಚರಿಸೋಣ ಎಂದರು.
ಸ್ವಾತಂತ್ರ್ಯೋತ್ಸವಕ್ಕೆ ಸಿಂಗರ್ ಆಗ್ಬಿಟ್ರು ದೆಹಲಿ ಸಿಎಂ ಕೇಜ್ರಿವಾಲ್
ಬಡತನದಿಂದ ಬೆರಗಿನೆಡೆಗೆ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಬಡತನದ ಬವಣೆಯಲ್ಲಿದ್ದ ಭಾರತ ಇಂದು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಷ್ಟರ ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದು ನಿಂತಿದೆ. ಇದಕ್ಕೆ ಹೆಮ್ಮೆಪಡೋಣ ಈ ಸಾಧನೆಗೆ ಕಾರಣರಾದ ಎಲ್ಲಾ ಮಹನೀಯರನ್ನು ಇಂದು ಸ್ಮರಿಸಿ ಅಭಿನಂದಿಸೋಣ ಎಂದು ಸಚಿವರು ತಿಳಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಬೇಡ
ರೈತರ ಸಾಲಮನ್ನಾ, ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ನೀರಾವರಿ ಯೋಜನೆಗಳು, ಪ್ರವಾಸೋದ್ಯಮ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ನಮ್ಮ ಭಾರತ ಶ್ರೀಮಂತ ಸಂಸ್ಕೃತಿಯ ರಾಷ್ಟ್ರ ಅದರ ಹಿರಿಮೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯೋಣ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶ ಭಕ್ತಿಯೊಂದಿಗೆ ರಾಷ್ಟ್ರದ ಐಕ್ಯತೆ, ಸಮಗ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದು ಅವರು ಹೇಳಿದರು.
ವಿವಿಧತೆಯಲ್ಲಿ ಏಕತೆ
ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ. ನಮ್ಮಲ್ಲಿ ಹತ್ತಾರು ಧರ್ಮ ನೂರಾರು ಜಾತಿ, ಭಾಷೆ, ಸಂಸ್ಕೃತಿಗಳಿದ್ದರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ. ಅದಕ್ಕಾಗಿ ಭಾರತ ಇಡೀ ವಿಶ್ವಕ್ಕೆ ಮಾದರಿ ಎನಿಸಿದೆ. ನಮ್ಮ ಹಿರಿಯರ ತ್ಯಾಗ, ಬಲಿದಾನಗಳನ್ನು ಸ್ಮರಿಸುತ್ತಾ, ಬಲಿಷ್ಠ ಭಾರತವನ್ನು ರೂಪಿಸಲು ಸದಾ ಶ್ರಮಿಸೋಣವೆಂದು ಎಂದು ಸಚಿವ ರೇವಣ್ಣ ಕರೆ ನೀಡಿದರು.
ಆಕರ್ಷಕ ಪಥಸಂಚಲನ
ಇದೇ ಸಂದರ್ಭದಲ್ಲಿ ಸಶಸ್ತ್ರಪಡೆಗಳು ಹಾಗೂ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು ಅಲ್ಲದೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಗ್ರಾಮ ಗೀತ ಕಥನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಯಲ್ ಅಪಲೋ ಶಾಲೆ, ವಿಜಯ ಆಂಗ್ಲ ಮಾಧ್ಯಮ ಶಾಲೆ, ಯುನೈಟೆಡ್ ಶಾಲೆ, ಎಸ್.ವಿ.ಎಂ ಶಾಲೆ ಹಾಗೂ ಸಂತ ಫಿಲೋಮಿನಾ ಶಾಲೆಯ 2500ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಹಾಸನ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಪ್ರೀತಮ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಿ ಎಸ್ ಶ್ವೇತಾ ದೇವರಾಜ್ ವಿಧಾನಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸತೀಶ್ ನಗರಸಭೆ ಅಧ್ಯಕ್ಷರಾದ ಹೆಚ್.ಎಸ್ ಅನಿಲ್ ಕುಮಾರ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಜಗದೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಸಿರು ಕರ್ನಾಟಕಕ್ಕೆ ಚಾಲನೆ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್ ಡಿ ರೇವಣ್ಣ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬಲೂನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಸಸಿಯನ್ನು ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಇದೇ ವೇಳೆ ಸಚಿವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.