ನಿರುದ್ಯೋಗ ಸಮಸ್ಯೆ ಪರಿಹಾರ ಯಾವ ಪಿ.ಎಂಗೂ ಆಗೊಲ್ಲ: ದೇವೇಗೌಡ
ಹಾಸನ, ಜನವರಿ 11: ಜನಪ್ರಿಯತೆ ಕುಗ್ಗುತ್ತಿರುವ ಕಾರಣಕ್ಕೆ ಕೇಂದ್ರ ಸರ್ಕಾರ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಅಸ್ತ್ರವನ್ನು ಪ್ರಯೋಗಿಸಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಶುಕ್ರವಾರ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರದ ಜನಪ್ರಿಯತೆ ಕುಗ್ಗುತ್ತಿದೆ. ಚುನಾವಣೆಯಲ್ಲಿ ಜಯಗಳಿಸುವ ಸಲುವಾಗಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಅಸ್ತ್ರ ಬಳಸಿದೆ. ಇದನ್ನು ಗ್ರಹಿಸಿಯೇ ಎಲ್ಲ ವಿರೋಧ ಪಕ್ಷಗಳು ಕೂಡ ಈ ಯೋಜನೆಗೆ ಬೆಂಬಲ ನೀಡಿವೆ ಎಂದು ಹೇಳಿದ್ದಾರೆ.
ಜೆಡಿಎಸ್ನಿಂದ ಪರಿಷತ್ ನಾಮ ನಿರ್ದೇಶನಕ್ಕೆ ಅಚ್ಚರಿ ಹೆಸರು
ಈ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಈ ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಯಾವ ಪ್ರಧಾನಿ ಅಥವಾ ಮುಖ್ಯಮಂತ್ರಿ ಬಗೆಹರಿಸಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಚ್ ಡಿ ರೇವಣ್ಣ ಅವರ ವಿಶೇಷಾಧಿಕಾರಿ ತಿಪ್ಪೇಸ್ವಾಮಿ ಅವರ ಹೆಸರನ್ನು ವಿಧಾನಪರಿಷತ್ ಸ್ಥಾನಕ್ಕೆ ಅಂತಿಮಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡ, 'ತಿಪ್ಪೇಸ್ವಾಮಿ ಅವರ ಹೆಸರು ಶಿಫಾರಸು ಮಾಡಿರುವ ವಿಚಾರ ನನಗೆ ತಿಳಿದಿಲ್ಲ. ಬೆಳಿಗ್ಗೆ ಪತ್ರಿಕೆಗಳಲ್ಲಿ ನೋಡಿದೆ. ಮೂರು ಜನರ ಹೆಸರು ಪರಿಗಣನೆಯಲ್ಲಿದೆ' ಎಂದಿದ್ದಾರೆ.
ಲೋಕಸಭೆಯಲ್ಲೂ ಮೈತ್ರಿ
ಲೋಕಸಭೆಯಲ್ಲಿ ಕೂಡ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಯುತ್ತದೆ. ಕಾಂಗ್ರೆಸ್ನವರು ನಮಗೆ ಎಷ್ಟು ಸೀಟುಗಳನ್ನು ನೀಡುತ್ತಾರೆಯೋ ಎನ್ನುವುದು ತಿಳಿದಿಲ್ಲ. ಸೀಟು ಹಂಚಿಕೆ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಸ್ಪರ್ಧೆ ತೀರ್ಮಾನ ಮಾಡಿಲ್ಲ
2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ದೇವೇಗೌಡರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವುದಿಲ್ಲ. ಅದರ ಬದಲಾಗಿ ಮೊಮ್ಮಕ್ಕಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅವರು ಅದನ್ನು ಇನ್ನೂ ಖಚಿತಪಡಿಸಿಲ್ಲ.
ಪ್ರಧಾನಿ ಮಾತನಾಡೊಲ್ಲ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ: ದೇವೇಗೌಡ
ಸಿಬಿಐ ದುರ್ಬಳಕೆ ಹೊಸತಲ್ಲ
ಸಿಬಿಐ ಸೇರಿದಂತೆ ಅನೇಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಹೊಸತೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಿಬಿಐ ಆಂತರಿಕ ಜಗಳ ಮತ್ತು ನಿರ್ದೇಶಕರ ವಜಾ ಕುರಿತು ಮಾತನಾಡಿದ ಅವರು, ಇಬ್ಬರು ಹಿರಿಯ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿಕೊಂಡರು. ಬಳಿಕ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ಇದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದು ಕೇವಲ ತಾಂತ್ರಿಕ ವಿಚಾರ ಎಂದು ದೇವೇಗೌಡ ಹೇಳಿದ್ದಾರೆ.
ಆಚೆಗೆ ಹೋಗು ರೇವಣ್ಣಗೆ ಗದರಿದ ಎಚ್ಡಿಡಿ
ಹಾಸನದ ಸಭಾಂಗಣದ ಒಳಗೆ ಅಧಿಕಾರಿಗಳೊಂದಿಗೆ ಮಾತನಾಡಿತ್ತಿದ್ದ ಸಚಿವ ಎಚ್ ಡಿ ರೇವಣ್ಣ ಅವರನ್ನು ಕಂಡ ದೇವೇಗೌಡರು ಸಿಟ್ಟಾದರು. 'ನಿಮ್ಮ ವಿಷಯ ಇದ್ದರೆ ಆಚೆಗೆ ಹೋಗಿ ಮಾತನಾಡಿ. ಇಲ್ಲಿ ಮಾಧ್ಯಮದವರು ಇದ್ದಾರೆ ಹುಷಾರ್ ಎಂದು ಕೋಪದಿಂದ ರೇವಣ್ಣ ಅವರಿಗೆ ಹೇಳಿದರು. ಬಳಿಕ ರೇವಣ್ಣ ಸಭಾಂಗಣದಿಂದ ಹೊರನಡೆದರು.
ದೋಸ್ತಿಗೂ ಮುಂಚೆ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿ ಅಂದರೇಕೆ ಗೌಡರು?