ಮತ್ತೆ ನಾನೇ ಹಾಸನ ಕ್ಷೇತ್ರದ ಸಂಸದನಾಗುವೆ: ಎ.ಮಂಜು
ಹಾಸನ, ಸೆ 4: ಕೇಂದ್ರ ಚುನಾವಣಾ ಆಯೋಗ, ಹಾಸನದ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿರುವದಕ್ಕೆ ಬಿಜೆಪಿ ಮುಖಂಡ ಎ.ಮಂಜು ಹರ್ಷ ವ್ಯಕ್ತ ಪಡಿಸಿದ್ದಾರೆ.
Recommended Video
"ಜೆಡಿಎಸ್ ನಾಯಕ, ಹಾಲೀ ಕ್ಷೇತ್ರದ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರು ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆಂದು ಹಿಂದೆಯಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈಗ ಅದಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಯಿದೆ"ಎಂದು ಮಂಜು ಹೇಳಿದ್ದಾರೆ.
ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ
"ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ವರದಿ ನೀಡುವಂತೆ ಚುನಾವಣಾ ಆಯೋಗ ಹಾಸನ ಡಿಸಿಗೆ ಸೂಚಿಸಿದೆ" ಎ.ಮಂಜು ತಿಳಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಒಬ್ಬರು ಶಾಸಕರು ಸುಳ್ಳು ಪ್ರಮಾಣಪತ್ರ ನೀಡಿ, ಸಿಕ್ಕಿಬಿದ್ದು, ಶಾಸಕ ಸ್ಥಾನದಿಂದ ವಜಾಗೊಂಡಿದ್ದರು. ಇಲ್ಲೂ ಹೀಗೇ ಆಗಲಿದೆ, ನಾನು ಮತ್ತೆ ಹಾಸನದ ಸಂಸದನಾಗುತ್ತೇನೆ ಎನ್ನುವ ಸಂಪೂರ್ಣ ಭರವಸೆ ನನಗಿದೆ"ಎನ್ನುವ ಆಶಾಭಾವನೆಯನ್ನು ಮಂಜು ಹೊರಹಾಕಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ, ನ್ಯಾ. ಮೈಕಲ್ ಡಿ. ಕುನ್ಹಾ ನೇತೃತ್ವದ ಏಕ ಸದಸ್ಯ ಪೀಠ ಎ. ಮಂಜು ಸಲ್ಲಿಸಿದ್ದ ದೂರನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ, ಮಂಜು, ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರು.
ಎ. ಮಂಜು, ಕೇಂದ್ರ ಚುನಾವಣಾ ಆಯೋಗಕ್ಕೂ ಈ ಕುರಿತು ಪತ್ರ ಬರೆದಿದ್ದರು. ಗುರುವಾರ (ಸೆ 3) ಚುನಾವಣಾ ಆಯೋಗ ಈ ಕುರಿತು ವರದಿ ನೀಡುವಂತೆ ಹಾಸನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದರಿಂದ, ಡಿಸಿ ನೀಡುವ ವರದಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ (2019) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎ.ಮಂಜು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ 141,324 ಮತಗಳ ಅಂತರದಿಂದ ಪರಾಭವಗೊಂಡಿದ್ದರು.