ಮೋದಿ ಸರ್, ಕರ್ನಾಟಕದ ಜನತೆ ನಿಮಗೆ ಏನು ತಪ್ಪು ಮಾಡಿದ್ದಾರೆ? ಪ್ರಜ್ವಲ್ ರೇವಣ್ಣ ಪ್ರಶ್ನೆ
ಹಾಸನ, ಮೇ 8: ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ್ದಾರೆ. "ದೆಹಲಿಯಲ್ಲಿ ಹತ್ತು ಸಾವಿರ ಬೆಡ್ ನಿರ್ಮಾಣ ಮಾಡಿದ್ದೇವೆ ಎನ್ನುವ ಪ್ರಧಾನಿ ಮೋದಿಯ ಹೇಳಿಕೆ ಬರೀ ಸುಳ್ಳು"ಎಂದು ಪ್ರಜ್ವಲ್ ಆಕ್ರೋಶ ವ್ಯಕ್ತ ಪಡಿಸಿದರು.
"ಬಜೆಟ್ ನಲ್ಲಿ 35 ಸಾವಿರ ಕೋಟಿ ಲಸಿಕೆಗಾಗಿ ಮೀಸಲಿಡಲಾಗಿದೆ ಎನ್ನುವ ಮಾತನ್ನು ಮೋದಿಯವರು ಹೇಳಿದ್ದರು. ಬಜೆಟ್ ಅಪ್ರೂವಲ್ ಕೂಡಾ ಆಗುತ್ತೆ. ಆ ದುಡ್ಡು ಎಲ್ಲಿಗೆ ಹೋಯಿತು"ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.
ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಜ್ವಲ್, "ಲಸಿಕೆಗೆ ನಾಲ್ಕು ನೂರು ರೂಪಾಯಿ ನಿಗದಿ ಮಾಡಿದ್ದಾರೆ. ಈ ಕಡೆ ಜಿಎಸ್ಟಿ ದುಡ್ಡು ಕೊಡುವುದಿಲ್ಲ, ಲಸಿಕೆ ಹೆಚ್ಚು ಕೊಡುವುದಿಲ್ಲ. ಆಕ್ಸಿಜನ್ ಹೆಚ್ಚುವರಿ ಕೇಳಿದರೆ ನಮ್ಮ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ"ಎಂದು ಪ್ರಜ್ವಲ್ ಬೇಸರ ವ್ಯಕ್ತ ಪಡಿಸಿದರು.
"ಯಾಕೆ ಸರ್, ಕರ್ನಾಟಕದ ಜನತೆ ಏನು ತಪ್ಪು ಮಾಡಿದೆ ನಿಮಗೆ? 25 ಸಂಸದರನ್ನು ಕೊಟ್ಟಿದ್ದು ತಪ್ಪಾ ನಿಮಗೆ. ಸ್ವರ್ಗಾನೇ ಇಳಿಸುತ್ತಾರೆಂದು ಮಾತನಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ"ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.
"ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರು ವರದಿಯಾಗುತ್ತಿರುವುದು ಕರ್ನಾಟಕದಲ್ಲಿ. ಸ್ಮಶಾನದಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ಇದೆ. ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ರಾಜ್ಯದ ಜನತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಲಿ"ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಕೊರೊನಾ ನಿಭಾಯಿಸಲು ಸರಕಾರಕ್ಕೆ ಎಚ್ಡಿಕೆ ಕೊಟ್ಟ 10 ಸಲಹೆಗಳು
Recommended Video
"ಎಷ್ಟೋ ಜನ ಬೆಡ್ ಸಿಗದೇ ಮನೆಯಲ್ಲೇ ಸಾವನ್ನಪ್ಪುತ್ತಿದ್ದಾರೆ. ಜನರ ಆಕ್ರೋಶ ಹೊರಬರುವ ಮುನ್ನ ಸೂಕ್ತ ಕ್ರಮ ತೆಗೆದುಕೊಳ್ಳಿ"ಎಂದು ಪ್ರಜ್ವಲ್ ರೇವಣ್ಣ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.