ಜೆಡಿಎಸ್ ಮುಖಂಡನ ಹತ್ಯೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್.ಡಿ.ರೇವಣ್ಣ ಗರಂ
ಹಾಸನ, ಜೂ2: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಹಿನ್ನೆಲೆ ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ. ಹೂವು, ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿದ್ದ ಪ್ರಶಾಂತ್ ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಿರುವ ವರ್ತಕರು ಸ್ವಯಂಪ್ರೇರಿತವಾಗಿ ಮಾರುಕಟ್ಟೆಯ ಎಲ್ಲಾ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರಶಾಂತ್ ಗೆ ಸಂತಾಪ ಸೂಚಿಸದರು.
ಜೆಡಿಎಸ್ ಮುಖಂಡ ಪ್ರಶಾಂತ್ ಹತ್ಯೆಯ ಬಳಿಕ ಹಾಸನ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತೆಗಾಗಿ ನಗರದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಪ್ರಶಾಂತ್ ಮೃತದೇಹ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಹಿನ್ನೆಲೆ ಆಸ್ಪತ್ರೆ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು.
ಹಾಸನದಲ್ಲಿ ಜೆಡಿಎಸ್ ಮುಖಂಡ, ನಗರಸಭೆ ಸದಸ್ಯನ ಹತ್ಯೆ
ಹಾಸನ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಹಾಸನದಲ್ಲಿ ನಗರದಲ್ಲಿ ಮತ್ತೆ ಲಾಂಗು, ಮಚ್ಚುಗಳು ಜಳಪಿಸಿವೆ. ಜೆಡಿಎಸ್ ಮುಖಂಡ, ನಗರಸಭೆ ಸದಸ್ಯ ಪ್ರಶಾಂತ್ ಎಂಬುವವರನನ್ನು ನಡುರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ. ಪ್ರಶಾಂತ್ ಬುಧವಾರ ಸಂಜೆ ಕೆಲಸ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುವ ವೇಳೆ ಹಂತಕರು ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾರೆ. ನಗರಸಭೆ ಸದಸ್ಯರ ಹತ್ಯೆಯಿಂದ ಹಾಸನದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಾಸನ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸೂಕ್ತ ಬಂದೋಬಸ್ತ್ ಗೆ ಹೊರ ಜಿಲ್ಲೆಯಿಂದಲೂ ಪೊಲೀಸರು ಆಗಮಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ಆರೋಪಿಗಳಿಗಾಗಿ ಚುರುಕಿನಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆದ ಪ್ರಶಾಂತ್ ಬೆಂಬಗಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ದೌಡಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಸೋನಿಯಾ ಅನುಮತಿ ಇದ್ದಿದ್ದಲ್ಲಿ 2ನೇ ಅಭ್ಯರ್ಥಿ ಕಣದಲ್ಲಿ ಯಾಕೆ: ಏನಿದು ರಾಜಕೀಯ ಮೇಲಾಟ?
ಹಿಮ್ಸ್ ಆಸ್ಪತ್ರೆ ಬಳಿ ಕುಳಿತ ರೇವಣ್ಣ
ಪ್ರಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದರು. ಕರ್ತವ್ಯಲೋಪ ಆರೋಪದಡಿ ಯಾರದೋ ಗುಲಾಮರಾಗಿ ಕೆಲಸ ಮಾಡುತ್ತಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶಾಂತ್ ಹತ್ಯೆ ಹಿನ್ನೆಲೆ ನಿನ್ನೆಯಿಂದಲೂ ಪೊಲೀಸರ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಿಟ್ಟಾಗಿದ್ದಾರೆ. ಸಿಪಿಐ ರೇಣುಕಾಪ್ರಸಾದ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ಆತನನ್ನ ಕೂಡಲೇ ಸಸ್ಪೆಂಡ್ ಮಾಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ರೇವಣ್ಣ ಬಳಿ ಮಾತುಕತೆಗೆ ಬಂದ ಎಸ್ಪಿ ಆರ್.ಶ್ರೀನಿವಾಸ್ಗೌಡ ರೇವಣ್ಣ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಕ್ರಮ ಕೈಗೊಳ್ಳುತ್ತೇವೆ ಸಮಾಧಾನವಾಗಿರಿ ಎಂದು ಮನವಿ ಮಾಡಿದರು. ಮೊದಲು ಸಸ್ಪೆಂಡ್ ಮಾಡ್ರಿ ಎಂದು ಎಸ್ಪಿ ವಿರುದ್ದ ಗರಂ ರೇವಣ್ಣ ಆದರು. ಐಜಿ ಬಂದ ಮೇಲೆ ಮಾತಾಡ್ತೀನಿ ಹೋಗ್ರಿ ಎಂದು ಎಸ್ಪಿ, ಎಎಸ್ಪಿಗೆ ತಿಳಿಸಿದರು.
ನಗರಸಭೆ ಸದಸ್ಯ ಪ್ರಶಾಂತ್ ವಿಧಿವಶ: ಶ್ರದ್ಧಾಂಜಲಿ
ಹಾಸನ ನಗರದ 16ನೇ ವಾರ್ಡ್ ನಿಂದ ಜೆಡಿಎಸ್ ಪಕ್ಷದಿಂದ ನಗರಸಭೆಗೆ ಆಯ್ಕೆಯಾಗಿದ್ದರು. ಪ್ರಶಾಂತ್ ಕೊಲೆಗೆ ಕಾರಣವೇನು? ಎಂಬುದು ಇನ್ನೂ ನಿಗೂಢವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಶಾಂತ್ ಅವರು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಈ ಹಿನ್ನೆಲೆ ಪ್ರಶಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ.
ನಗರಸಭೆ ಸದಸ್ಯ ಪ್ರಶಾಂತ್ ವಿಧಿವಶ ಹಿನ್ನೆಲೆ ಅಗಲಿದ ಸದಸ್ಯನಿಗೆ ನಗರಸಭೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಸದಸ್ಯರು, ನಗರಸಭೆ ಅಧಿಕಾರಿ ವರ್ಗ ಸಿಬ್ಬಂದಿ ವರ್ಗ, ನಗರಸಭೆ ಸಭಾಂಗಣದಲ್ಲಿ ಪ್ರಶಾಂತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ನಗರಸಭೆ ಆವರಣದಲ್ಲಿ ಪ್ರಶಾಂತ್ ಅಂತಿಮದರ್ಶನ ಮಾಡುವ ಬಗ್ಗೆಯೂ ಚರ್ಚೆ ಮಾಡಿದರು.
ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ
ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಹಿನ್ನೆಲೆ ಹಾಸನ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಾಸನ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ಬಗೆಯ ಮದ್ಯ ಹಾಗೂ ಅಮಲು ಪಾನೀಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಜೆಡಿಎಸ್ ಮುಖಂಡನ ಹತ್ಯೆಯಿಂದಾಗಿ ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಹಾಕಲಾಗಿದೆ. ಆದಷ್ಟು ಬೇಗ ಪೊಲೀಸರು ಕೊಲೆಗಡುಕರನ್ನು ಪತ್ತೆಹಚ್ಚಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video