4 ವರ್ಷಗಳ ಬಳಿಕ ಹೇಮಾವತಿಯ ಒಡಲು ಭರ್ತಿ
ಹಾಸನ, ಜೂನ್ 25 : ಜೂನ್ ತಿಂಗಳಿನಲ್ಲಿ ಅಬ್ಬರಿಸಿದ ಮಳೆ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯವಾದ ಹೇಮಾವತಿಯ ಒಡಲನ್ನು ತುಂಬಿಸಿದೆ. 4 ವರ್ಷಗಳಿಂದ ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿಲ್ಲ. ಈ ಬಾರಿ ಭರ್ತಿಯಾಗಲಿದೆ ಎನ್ನುವ ನಿರೀಕ್ಷೆ ರೈತರದ್ದು.
ಹಾಸನ ತಾಲೂಕಿನ ಗೊರೂರಿನಲ್ಲಿ ಹೇಮಾವತಿ ಜಲಾಶಯವಿದೆ. ಜಲಾಶಯ ಹಾಸನ ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಮೈಸೂರು ಜಿಲ್ಲೆಗಳ 6,720 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ವಿವಿಧ ನೀರಾವರಿ ಯೋಜನೆ ಸೇರಿ ಜಲಾಶಯ 7 ಲಕ್ಷ ಎಕರೆ ಅಚ್ಚುಕಟ್ಟು ಹೊಂದಿದೆ.
20 ವರ್ಷಗಳ ನಂತರ ಜೂನ್ನಲ್ಲಿ 100ರ ಗಡಿ ದಾಟಿದ ಕೆಆರ್ಎಸ್
4 ವರ್ಷಗಳಿಂದ ಜಲಾಶಯ ಭರ್ತಿಯಾಗಿಲ್ಲ. ಆದ್ದರಿಂದ, ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಜಲಾಶಯ ಭರ್ತಿಯಾದಾಗ ಭತ್ತ ಬೆಳೆಯುತ್ತಿದ್ದ ರೈತರು ಈಗ ಪರ್ಯಾಯ ಬೆಳೆಗಳತ್ತ ಗಮನ ಹರಿಸಿದ್ದಾರೆ.
ಹೇಮಾವತಿ ಜಲಾಶಯದ ಗರಿಷ್ಟ ಎತ್ತರ 146 ಅಡಿಗಳು (ತಳಪಾಯದ ಮೇಲ್ಮಟ್ಟದಿಂದ). ಅಣೆಕಟ್ಟೆಯಲ್ಲಿ 37.103 ಟಿಎಂಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ. ಈ ಬಾರಿ ಮುಂಗಾರು ಮಳೆ ಜುಲೈ ಪೂರ್ತಿ ಜೋರಾಗಿ ಸುರಿದರೆ ಹೇಮಾವತಿ ಒಡಲು ಭರ್ತಿಯಾಗುವ ನಿರೀಕ್ಷೆ ಇದೆ.
ಉತ್ತರ ಭಾರತದತ್ತ ಮುಖಮಾಡಿದ ಮುಂಗಾರು ಮಾರುತ
ಜೂನ್ 12ರಂದು 29,379, ಜೂನ್ 13ರಂದು 37,946, ಜೂನ್ 14ರಂದು 37,479 ಕ್ಯುಸೆಕ್ ಒಳ ಹರಿವು ಇತ್ತು. ಒಂದೇ ದಿನ 6 ಅಡಿ ನೀರು ಜಲಾಶಯದಲ್ಲಿ ಏರಿಕೆಯಾಗಿತ್ತು. ಜೂನ್ 22ರಂದು ಜಲಾಶಯದ ನೀರಿನ ಮಟ್ಟ 2901.33 ಅಡಿಗೆ ತಲುಪಿದೆ.
ಹೇಮಾವತಿ ಜಲಾಶಯ ಹೇಮಾವತಿ ಎಡದಂಡೆ ನಾಲೆ, ನಾಗಮಂಗಲ ಶಾಖಾ ನಾಲೆ, ತುಮಕೂರು ಶಾಖಾ ನಾಲೆ, ಹೇಮಾವತಿ ಬಲದಂಡೆ ನಾಲೆ, ಹೇಮಾವತಿ ಬಲಮೇಲ್ದಂಡೆ ನಾಲೆ ಎಂಬ 5 ನಾಲೆಗಳನ್ನು ಹೊಂದಿದೆ.