SSLC ಫಲಿತಾಂಶ ಹೆಚ್ಚಳದ ಶ್ರೇಯಸ್ಸು ಯಾರಿಗೆ? ರೋಹಿಣಿ ಅಥವಾ ಭವಾನಿ ರೇವಣ್ಣ?
Recommended Video
ಹಾಸನ, ಮೇ 1: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಕ್ಕೆ ಬಂದಿದ್ದು ಆ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಆದರೆ, ಅದರ ಬೆನ್ನಲ್ಲೇ ಈ ಸಾಧನೆಯ ಶ್ರೇಯಸ್ಸು ಯಾರಿಗೆ ಸೇರಬೇಕು ಎನ್ನುವುದು ಹಾಸನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಹಾಸನದ ಸಾಧನೆ, ರಾಜಕೀಯ ಕಾವು ಪಡೆದಿದೆ. ಜತೆಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಅದರಲ್ಲಿಯೂ ಹಾಸನದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಚಿವ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ನಡುವೆ ಶ್ರೇಯಸ್ಸು ಯಾರಿಗೆ ಸಲ್ಲುತ್ತದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಹಾಸನ ಎಸ್ಎಸ್ಎಲ್ಸಿಯಲ್ಲಿ ಗಣನೀಯ ಸಾಧನೆ ಮಾಡಿದ ಬಳಿಕ ರೋಹಿಣಿ ಸಿಂಧೂರಿ ಅವರು ತೆಗೆದುಕೊಂಡಿದ್ದ ಶೈಕ್ಷಣಿಕ ಸುಧಾರಣಾ ಕ್ರಮಗಳ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿಯೂ ರೋಹಿಣಿ ಅವರ ಪ್ರಯತ್ನದಿಂದಲೇ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು.
ಸಿದ್ದಿಸಿದ ರೋಹಿಣಿ ಸಂಕಲ್ಪ, ಎಸ್ಎಸ್ಎಲ್ಸಿಯಲ್ಲಿ ಹಾಸನ ನಂ.1
ಆದರೆ, ರೇವಣ್ಣ ಅವರ ಅಭಿಮಾನಿಗಳು ಈ ಶ್ರೇಯಸ್ಸು ರೋಹಿಣಿ ಸಿಂಧೂರಿ ಅವರಿಗೆ ಸೇರುವುದಿಲ್ಲ. ಜಿಲ್ಲಾ ಪಂಚಾಯಿತಿಯಲ್ಲಿ ಶೈಕ್ಷಣಿಕ ಸ್ಥಾಯಿ ಸಮಿತಿ ಸದಸ್ಯರಾಗಿರುವ ಭವಾನಿ ರೇವಣ್ಣ ಅವರಿಂದಾಗಿಯೇ ಹಾಸನ ಮೊದಲ ಸ್ಥಾನ ಪಡೆದಿದೆ ಎಂದು ವಾದಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವಿರುದ್ಧ ಸದಾ ಕಿಡಿಕಾರುತ್ತಲೇ ಇದ್ದ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಕೂಡ ಪತ್ನಿ ಪರ ಬ್ಯಾಟ್ ಬೀಸಿದ್ದಾರೆ.
ರೋಹಿಣಿ ವಿರುದ್ಧ ರೇವಣ್ಣ ಕಿಡಿ
ಹಿಂದಿನ ಜಿಲ್ಲಾಧಿಕಾರಿ ಕಡಿದು ದಬಾಕಿರೋದು ಏನು? ಶಿಕ್ಷಕರಿಗೆ ಪಾಠ ಮಾಡಲು ಹೋಗಿ ಅವರೇ ಉಗಿಸಿಕೊಂಡಿದ್ದರು. ನನ್ನ ಪತ್ನಿ ಪ್ರಯತ್ನ ಸಫಲವಾಗಿದೆ. ಆದರೆ, ಇದನ್ನು ನಾನು ಹೇಳಿಕೊಂಡಿದ್ದೇನೆಯೇ? ಶಿಕ್ಷಣದ ಅಭಿವೃದ್ಧಿಗೆ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ರೇವಣ್ಣ, ರೋಹಿಣಿ ವಿರುದ್ಧ ಕಿಡಿಕಾರಿದ್ದಾರೆ.
ಅಂಕಿ-ಅಂಶಗಳ ಸಮೇತ ಎಸ್ಎಸ್ಎಲ್ಸಿ ಫಲಿತಾಂಶ ಸಂಪೂರ್ಣ ಮಾಹಿತಿ
ಕಾರ್ಯಕ್ರಮಗಳನ್ನು ನಡೆಸಿದ್ದೆ
ಶಿಕ್ಷಣ ಕ್ಷೇತ್ರವನ್ನು ಸವಾಲಾಗಿ ತೆಗೆದುಕೊಂಡು 1 ರಿಂದ 3ನೇ ಸ್ಥಾನದೊಳಗೆ ಬರಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಹೇಳಿದ್ದೆ. ಆರಂಭದಲ್ಲಿ ಈ ಗುರಿಯನ್ನು ತಲುಪುವುದು ಎಲ್ಲರಿಗೂ ಬಹಳ ಕಷ್ಟವಾಗಿತ್ತು. ಎಲ್ಲ ಶಾಲೆಗಳ ಪ್ರಾಂಶುಪಾಲರಿಗೆ ಖುದ್ದಾಗಿ ಪತ್ರ ಬರೆದಿದ್ದೆ. ರೇಡಿಯೋ ಕಾರ್ಯಕ್ರಮಗಳನ್ನು ನಡೆಸಿದ್ದೆ. ನಿರಂತರ ಸಭೆಗಳನ್ನು ಮಾಡಿದ್ದೆ ಎಂದು ರೋಹಿಣಿ ತಿಳಿಸಿದ್ದಾರೆ.
ತಾಯಂದಿರ ಸಭೆಗಳನ್ನು ನಡೆಸಿದ್ದೇವೆ
ಪ್ರತಿ ಬಾರಿಯೂ ಶಾಲೆಗಳಲ್ಲಿ ಪರೀಕ್ಷೆ ನಡೆದ ಬಳಿಕ ತಾಯಂದಿರ ಸಭೆ ನಡೆಸುತ್ತಿದ್ದೆವು. ಶಿಕ್ಷಣದಲ್ಲಿ ತಾಯಂದಿರುವ ಮಹತ್ವದ ಪಾತ್ರ ವಹಿಸುತ್ತಾರೆ. ಆ ಸಭೆಯಲ್ಲಿ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಇದು ಸುಲಭದ ಕೆಲಸವಾಗಿರಲಿಲ್ಲ. ಎರಡು ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಮೂರನೇ ಸ್ಥಾನದೊಳಗೆ ಗುರಿ
"ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯಲೇಬೇಕು. ಕರಾವಳಿ ಜಿಲ್ಲೆಗಳಂತೆ ನಮ್ಮ ಜಿಲ್ಲೆ ಕೂಡ ಎಸ್ಎಸ್ಎಲ್ಸಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದೊಳಗಿರಬೇಕು. ಇದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಆರಂಭದಿಂದಲೇ ಪ್ರಯತ್ನ ಆರಂಭಿಸುತ್ತಿದ್ದೇವೆ" ಎಂದು ಆಗ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹೇಳಿದ್ದರು.
ರೇವಣ್ಣಗೆ ಪ್ರಿಯಾಂಕಾ ತಿರುಗೇಟು
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತಿದ್ದಾರೆ ಎಂಬ ಸಚಿವ ಎಚ್ಡಿ ರೇವಣ್ಣ ಅವರ ಹೇಳಿಕೆಗೆ ಹಾಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿರುಗೇಟು ನೀಡಿದ್ದಾರೆ.
'ನಾನು ಸ್ವತಂತ್ರವಾಗಿ ಕೆಲಸ ಮಾಡುತ್ತೇನೆ. ರೋಹಿಣಿ ಅವರು ನನ್ನ ಬ್ಯಾಚ್ಮೇಟ್, ಹೀಗಾಗಿ ಅವರನ್ನು ಭೇಟಿ ಮಾಡುತ್ತೇನೆ. ಅದರಲ್ಲಿ ವಿಶೇಷವೇನಿದೆ? ಎಂದು ರೇವಣ್ಣ ಅವರು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ರೇವಣ್ಣ ಆರೋಪವೇನು?
ಜಿಲ್ಲೆಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆದಿದೆ ಎಂದಿದ್ದ ಜಿಲ್ಲಾಧಿಕಾರಿಯೇ ಹತ್ತು ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎಂದು ದೂರು ಪಡೆದುಕೊಂಡಿರುವುದು ಏಕೆ? ಈ ಬಗ್ಗೆ ತನಿಖೆಯಾಗಬೇಕು ಮತ್ತು ಅವರ ವರ್ಗಾವಣೆಯಾಗಬೇಕು. ಅವರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆದುಕೊಂಡಿದ್ದರು. ಅವರ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದರು.