ಎಸ್ಎಸ್ಎಲ್ ಸಿಯಲ್ಲಿ ಹಾಸನಕ್ಕೆ ಅಗ್ರಸ್ಥಾನ, ಹುಟ್ಟಿಕೊಂಡಿತು ಅನುಮಾನ!
ಹಾಸನ, ಜನವರಿ.24: ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ತೀರ್ಮಾನಿಸಲಾಗಿದೆ. 2020ರಲ್ಲಿ ನಡೆಯುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗಾಗಲೇ ಪೂರ್ವ ಸಿದ್ಧತೆ ಶುರುವಾಗಿದೆ. ಇದರ ಬೆನ್ನಲ್ಲೇ ಕಳೆದ ಬಾರಿ ಪರೀಕ್ಷೆ ವೇಳೆ ಹಾಸನ ಜಿಲ್ಲೆಯಲ್ಲಿ ಸಾಮೂಹಿಕ ನಕಲು ನಡೆದಿತ್ತು ಎಂಬ ಆರೋಪ ಕೇಳಿ ಬಂದಿದೆ.
2019ರ ಮಾರ್ಚ್ ನಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ದು, ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಮೂಹಿಕ ನಕಲು ನಡೆದಿರುವ ಆರೋಪ ಕೇಳಿ ಬಂದಿತ್ತು.
ಎಸ್ಎಸ್ಎಲ್ ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಹಾಸನದಲ್ಲಿ ಕಳೆದ ಬಾರಿ ಸಾಮೂಹಿಕ ನಕಲು ನಡೆದಿದೆ ಎಂದು ಶಿವಕುಮಾರ್ ಎಂಬ ಶಿಕ್ಷಕರೊಬ್ಬರು ಹಾಸನದ ಡಿಡಿಪಿಐ ಪ್ರಕಾಶ್ ಎಂಬುವವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ 2020ರಲ್ಲಿ ನಡೆಯುವ ಎಸ್ಎಸ್ಎಲ್ ಸಿ ಪರೀಕ್ಷೆ ವೇಳೆ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಬರೆದ ಪತ್ರದ ಬಗ್ಗೆ ತನಿಖೆ:
ಹಾಸನ ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ. ಇದರ ಜೊತೆಗೆ ಶಿವಕುಮಾರ್ ಎಂಬ ಶಿಕ್ಷಕರು ಬರೆದ ಪತ್ರದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನು, ಶಿಕ್ಷಕನು ತನ್ನ ಬಗ್ಗೆ ಪತ್ರದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಪತ್ರ ಬರೆದ ಶಿಕ್ಷಕ ಯಾರು ಹಾಗೂ ಅದರಲ್ಲಿ ಇರುವ ಆರೋಪ ನಿಜವೇ ಸುಳ್ಳೇ ಎಂಬುದರ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು, ಕಳೆದ 2019ರಲ್ಲಿ ಶೇ. 89.33ರಷ್ಟು ಫಲಿತಾಂಶದೊಂದಿಗೆ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಶೇ.88.49ರಷ್ಟು ಫಲಿತಾಂಶವನ್ನು ಕಂಡ ರಾಮನಗರ ಎರಡನೇ ಸ್ಥಾನದಲ್ಲಿತ್ತು. ಪ್ರತಿಬಾರಿ ಪ್ರಥಮ ಸ್ಥಾನ ಪಡೆಯುತ್ತಿದ್ದ ಉಡುಪಿ ಜಿಲ್ಲೆ ಐದನೇ ಸ್ಥಾನಕ್ಕೆ ಕುಸಿತ ಕಂಡಿತ್ತು.