ಹಾಸನ: ಸೋರುವ ಸರ್ಕಾರಿ ಶಾಲೆಯಲ್ಲಿ ಛತ್ರಿ ಅಡಿ ಪಾಠ ಕೇಳುವ ಮಕ್ಕಳು
ಹಾಸನ, ಜುಲೈ 17: ಹಾಸನದ ಮಲ್ಲಿಪಟ್ಟಣ ಸರ್ಕಾರಿ ಶಾಲೆಯ ಈ ಮಕ್ಕಳು ಶಾಲೆಗೆ ಊಟದ ಡಬ್ಬಿ ಒಯ್ಯುವುದ ಮರೆತರೂ ಛತ್ರಿ ಒಯ್ಯುವುದು ಮಾತ್ರ ಮರೆಯುವುದಿಲ್ಲ.
ಹೌದು, ಮಳೆ ಬಂತೆಂದರೆ ಸೋರುವ ಶಾಲೆಗೆ ಛತ್ರಿ ಒಯ್ಯದೆ ಇನ್ನೇನು ಮಾಡಿಯಾರು ಈ ಮಕ್ಕಳು ಪಾಪ. ಮಲ್ಲಿಪಟ್ಟಣದ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 8 ಕೊಠಡಿಗಳಿವೆ ಅದರಲ್ಲಿ ಎರಡನ್ನು ಕಚೇರಿ ಉಪಯೋಗಕ್ಕೆ ಬಳಸಲಾಗುತ್ತಿದೆ. ಮೂರು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಇನ್ನು ಮೂರು ಕೊಠಡಿಗಳು ಮಳೆ ಬಂದರೆ ಸೋರುತ್ತವೆ ಆದರೆ ಅಲ್ಲಿಯೇ ಪಾಠ ಪ್ರವಚನ ನಡೆಯುತ್ತದೆ.
ಅಕ್ಷರದ ಹಂಗಿಲ್ಲದೆಯೂ ಸಾಧಕನಾಗಬಹುದೆಂದು ತೋರಿಸಿಕೊಟ್ಟ ಸಂಜೀವ ಸುವರ್ಣ
ಈ ಪ್ರೌಢಶಾಲೆ ಸತತವಾಗಿ ಮೂರು ವರ್ಷದಿಂದ ಶೇ 100% ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಾಲೆಯಾಗಿದೆ. ಆದರೆ ಮೂಲಭೂತ ಸೌಕರ್ಯಗಳು ಮಾತ್ರ ಇಲ್ಲ. ಮಳೆ ಬಂತೆಂದರೆ ಮಕ್ಕಳು ಕೊಡೆ ಅರಳಿಸಿ ಅದರ ಕಳಗೆ ಕೂತು ಪಾಠ ಕೇಳಬೇಕು. ಇಲ್ಲವೇ ಶಾಲೆಗೆ ರಜೆಯನ್ನೇ ಘೋಷಿಸಬೇಕು.
ಈ ಶಾಲೆಯ ಚಾವಣಿ ಸೋರುವುದು ಒತ್ತಟ್ಟಿಗಾದರೆ, ಗೋಡೆಗಳಲ್ಲೂ ನೀರು ಜಿನುಗುತ್ತದೆ. 50 ವರ್ಷದ ಹಳೆಯ ಈ ಗೋಡೆಗಳು ಯಾವಾಗ ಧರೆಗುರುಳತ್ತವೆಯೋ ಹೇಳಲಾಗದು. ಮಕ್ಕಳು, ಶಿಕ್ಷಕರು ಜೀವ ಕೈಯಲ್ಲಿ ಹಿಡಿದುಕೊಂಡೆ ಮಳೆಗಾಲ ಕಳೆಯುತ್ತಿದ್ದಾರೆ ಪಾಪ.
167 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯು ಗುಣಮಟ್ಟದಲ್ಲಿ ಉತ್ತಮವಾಗಿಯೇ ಇದೆ ಎನ್ನುತ್ತಾರೆ ಸ್ಥಳೀಯರು. ಎಷ್ಟೆಂದರೆ ಸಮೀಪದಲ್ಲಿನ ಖಾಸಗಿ ಶಾಲೆಗಳಿಗೆ ಶೈಕ್ಷಣಿಕ ಸೆಡ್ಡು ಹೊಡೆಯುತ್ತಾರೆ ಇಲ್ಲಿನ ಮಕ್ಕಳು, ಆದರೆ ಸೌಲಭ್ಯಗಳ ಕೊರತೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳಾಗಿದೆ.
ವೈರಲ್ ವಿಡಿಯೋ: ಈ ಗುರುಗಳ ಪಾಠಕ್ಕೆ ಕುಣಿದು ಕುಪ್ಪಳಿಸಿದ್ರು ಮಕ್ಳು!
ಶಾಲೆಗೆ 5.15 ಎಕರೆ ವಿಸ್ತಾರವಾದ ಜಮೀನಿದೆ. ಅದಕ್ಕೆ ಅವಶ್ಯಕವಾದ ಕಾಂಪೌಂಡ್ ವ್ಯವಸ್ಥೆ ಕೂಡಾ ಇದೆ. ಆದರೆ ಬೇಕಿರುವುದು ಹೊಸ ಕಟ್ಟಡಗಳಿಗೆ ಸರ್ಕಾರದ ಅನುದಾನವಷ್ಟೆ.
ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯವರೇ, ಲೋಕೋಪಯೋಗಿ ಸಚಿವರೂ ಹಾಸನ ಜಿಲ್ಲೆಯವರೆ ತಮ್ಮದೇ ಜಿಲ್ಲೆಯ ಪ್ರತಿಭಾನ್ವಿತ ಬಡ ಸರ್ಕಾರಿ ಶಾಲೆ ಮಕ್ಕಳು ಮಳೆಯಲ್ಲಿ ನೆನಯುತ್ತಾ ಪಾಠ ಕಲಿಯುವ ಸಮಸ್ಯೆಯನ್ನು ನಿವಾರಿಸಿ ಅವರಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲೆಂಬುದು ಆಶಯ.