ಹಾಸನ ಜಿಲ್ಲಾಧಿಕಾರಿ ಧಿಡೀರ್ ವರ್ಗಾವಣೆ: ರಾಜಕೀಯ ಲೆಕ್ಕಾಚಾರ ಏನು?
ಹಾಸನ, ಮಾರ್ಚ್ 30: ಮತದಾನಕ್ಕೆ ಕೆಲವೇ ದಿನ ಇರುವಂತೆ ಹಾಸನದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನು ಧಿಡೀರನೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಅವರನ್ನು ನೇಮಿಸಲಾಗಿದೆ.
ಹಾಸನ ಜಿಲ್ಲಾಧಿಕಾರಿ ಅಕ್ರಮ ಪಾಷಾ ಜೊತೆಗೆ ಇನ್ನೂ ಇಬ್ಬರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣೆ ಸಮಯ ಈ ಧಿಡೀರ್ ವರ್ಗಾವಣೆ ಚರ್ಚೆಗೆ ಗ್ರಾಸವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಹಾಸನದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಆಯೋಗಕ್ಕೆ ಮನವಿ ಮಾಡಿದ್ದರು, ಅದರಂತೆ ಈಗ ವರ್ಗಾವಣೆ ಮಾಡಲಾಗಿದೆ.
ಕಾಂಗ್ರೆಸ್ ಸೇರಿದ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್!
ಅಕ್ರಂಪಾಷಾ ಅವರು ರೇವಣ್ಣ ಅವರಿಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಾರೆ ಎಂಬುದು ಬಿಜೆಪಿಯ ಆರೋಪವಾಗಿತ್ತು. ಶಾಸಕ ಪ್ರೀತಂ ಗೌಡ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು, ಅದರಂತೆ ವರ್ಗಾವಣೆ ಆಗಿದೆ.
ಮತದಾನ ಸಮೀಪಿಸಿದ್ದಾಗ ಹೀಗೆ ಏಕಾ-ಏಕಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ರೇವಣ್ಣ ಅವರಿಗೆ ಆಪ್ತರಾಗಿದ್ದರು ಎನ್ನಲಾಗುತ್ತಿರುವ ಅಕ್ರಂ ಪಾಷಾ ಅವರ ವರ್ಗಾವಣೆಯಿಂದ ರೇವಣ್ಣ ಅವರಿಗೆ ಹಿನ್ನಡೆ ಆಗಲಿದೆಯಾ ಕಾದು ನೋಡಬೇಕಿದೆ.
ನನ್ನದು ಸ್ವಾತಿ ನಕ್ಷತ್ರ, ನನ್ನನ್ನು ಏನೂ ಮಾಡಲು ಆಗುವುದಿಲ್ಲ; ರೇವಣ್ಣ
ಅಕ್ರಂ ಪಾಷಾ ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಉಲ್ವಜ್ ಕುಮಾರ್ ಘೋಷ್ ಅವರನ್ನು ನೇಮಿಸಲಾಗಿದೆ.
ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿದ್ದ ಕನಗವಲ್ಲಿ ಅವರನ್ನು ನೇಮಿಸಲಾಗಿದೆ.