ಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯ
ಹಾಸನ, ಅ.14 : ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕದಲ್ಲಿ ಪ್ರವಾಸಿಗರು ಎಳನೀರು ಸವಿಯಬಹುದು. ಹಾಸನ ಜಿಲ್ಲಾಡಳಿತ ಎಳನೀರು ಮಾರಟಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸುತ್ತಿದೆ.
ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಕೀರ್ತಿಸ್ತಂಭ ಸ್ಥಾಪನೆ
ಜಿಲ್ಲಾಡಳಿತ ಶ್ರವಣಬೆಳಗೊಳಕ್ಕೆ ಸಾಗುವ ರಸ್ತೆ, ಶ್ರವಣಬೆಳಗೊಳದಲ್ಲಿ ಎಳನೀರು ಮಾರಾಟಕ್ಕೆ ಪ್ರತ್ಯೇಕ ವಾದ ಜಾಗದ ವ್ಯವಸ್ಥೆ ಮಾಡಿಕೊಡಲಿದೆ. ಈ ಮೂಲಕ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ತೆಂಗು ಬೆಳೆಯುವ ರೈತರಿಗೆ ನೆರವಾಗಲು ಮುಂದಾಗಿದೆ.
'ಕಲ್ಪವೃಕ್ಷ' ಹೆಸರಿನಲ್ಲಿ ರಸ್ತೆಗಳಲ್ಲಿ ಮತ್ತು ವಿವಿಧ ಪ್ರದೇಶಗಳಲ್ಲಿ ಎಳನೀರು ಮಾರಾಟ ಮಳಿಗೆ ಆರಂಭಿಸಲಾಗುತ್ತದೆ. ರೈತರು ಈ ಮಾರಾಟ ಮಳಿಗೆ ಮೂಲಕ ಎಳನೀರು ಮಾರಾಟ ಮಾಡಬಹುದಾಗಿದೆ. 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ.
ಮಸ್ತಕಾಭಿಷೇಕ ತಯಾರಿ ವೀಕ್ಷಿಸಿದ ಡಿಸಿ ರೋಹಿಣಿ ಸಿಂಧೂರಿ
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮಸ್ತಕಾಭಿಷೇಕದಲ್ಲಿ ಎಳನೀರು ಮಾರಾಟ ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗಿದೆ. ಕಲ್ಪವೃಕ್ಷ ಅಥವ ಬೇರೆ ಹೆಸರಿನಲ್ಲಿ ಮಾರಾಟ ಮಳಿಗೆ ತೆರೆಯಲು ಅನುಕೂಲ ಮಾಡಿಕೊಡಲಾಗುತ್ತದೆ' ಎಂದು ಹೇಳಿದ್ದಾರೆ.
ಸತತವಾದ ಬರಗಾಲದಿಂದಾಗಿ ಹಾಸನ ಜಿಲ್ಲೆಯ ರೈತರು ಮೂರು ವರ್ಷಗಳಿದ ನಷ್ಟ ಅನುಭವಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ ನಡೆಸಿರುವ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಸುಮಾರು ಹದಿನಾಲ್ಕು ಲಕ್ಷ ತೆಂಗಿನ ಮರಗಳು ಸತ್ತು ಹೋಗಿವೆ. ಜಿಲ್ಲಾಡಳಿತದ ಈ ನಿರ್ಧಾರದಿಂದಾಗಿ ರೈತರಿಗೆ ನೆರವಾಗಲಿದೆ.