ಸುಳ್ಳು ಅಫಿಡವಿಟ್ ಆರೋಪ: ಡಿಸಿ ವರದಿಯಲ್ಲಿ ಪ್ರಜ್ವಲ್ ರೇವಣ್ಣ ಭವಿಷ್ಯ
ಹಾಸನ, ಮೇ 18: ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರಗಳಲ್ಲಿ ಸರಿಯಾದ ಮಾಹಿತಿ ಒದಗಿಸದ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ದೂರಿನಂತೆ ಜಿಲ್ಲಾ ಚುನಾವಣಾಧಿಕಾರಿ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಜ್ವಲ್ ಅವರ ವಿರುದ್ಧ ದಾಖಲಾದ ದೂರಿನಂತೆ ತನಿಖೆ ನಡೆಸಿ ಮೇ 17ರ ಮಧ್ಯಾಹ್ನ 3 ಗಂಟೆಯ ಒಳಗೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಚುನಾವಣಾಧಿಕಾರಿಯಾಗಿರುವ ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ವರದಿಯಲ್ಲಿ ಪ್ರತಿ ಪ್ಯಾರಾಕ್ಕೆ ಅನುಗುಣವಾಗಿ ವಿವರಣೆ ನೀಡುವಂತೆ ನಿರ್ದೇಶಿಸಿತ್ತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅದರ ಅನ್ವಯ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಪ್ರಜ್ವಲ್ ರೇವಣ್ಣ ಅವರ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿಗಳನ್ನು ದಾಖಲಿಸಲಾಗಿದೆಯೇ ಅಥವಾ ಕೆಲವು ವಿವರಗಳನ್ನು ಮರೆಮಾಚಲಾಗಿದೆಯೇ ಎಂಬ ಬಗ್ಗೆ ಐದು ಪುಟಗಳ ವರದಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ಅವರ ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುವುದು ಸೂಕ್ತ ಎಂದು ಜಿಲ್ಲಾಧಿಕಾರ ಸಲಹೆ ನೀಡಿದ್ದಾರೆ. ಪ್ರಜ್ವಲ್ ಅವರ ಆಸ್ತಿ ವಿವರದ ಪ್ರತಿ ಮಾಹಿತಿಯ ಕುರಿತಾದ ಸಂದೇಹಗಳು ವ್ಯಕ್ತವಾದ ಕಡೆ ಐಟಿ ತನಿಖೆಗೆ ಅವರು ಸಲಹೆ ನೀಡಿದ್ದಾರೆ.
ಪ್ರಜ್ವಲ್ ಅವರ ಆಸ್ತಿ ವಿವರಗಳನ್ನು ಸಂಗ್ರಹಿಸಲು ಕೆಲವು ಮಾಹಿತಿಗಳನ್ನು ಲೋಕಾಯುಕ್ತ ಸಂಸ್ಥೆಯ ಮೂಲಕವೂ ಪಡೆದುಕೊಳ್ಳಬಹುದು ಎಂದು ಹಾಸನ ಚುನಾವಣಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.
ಆಸ್ತಿ ವಿವರ ಮುಚ್ಚಿಟ್ಟು ಸಂಕಷ್ಟ: ಪ್ರಜ್ವಲ್ ರೇವಣ್ಣ ಗೆದ್ದರೂ ಸೋಲುತ್ತಾರಾ?
ಪ್ರಜ್ವಲ್ ಅವರ ವಿರುದ್ಧ ದಾಖಲಾದ ದೂರಿನ ಅನ್ವಯ ವರದಿ ನೀಡಿರುವುದರ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರು ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವುದರಿಂದ ಏನನ್ನೂ ಹೇಳಲು ಆಗುವುದಿಲ್ಲ ಎಂದಿರುವ ಅವರು, ವರದಿ ಸಲ್ಲಿಕೆ ಮಾಡಿರುವುದರ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು
ಈ ಪ್ರಕರಣದ ಬಗ್ಗೆ ಚುನಾವಣಾಧಿಕಾರಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ದೂರುದಾರರು ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ದೇವರಾಜೇಗೌಡ ಅವರು ಪ್ರಜ್ವಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಆಸ್ತಿ ವಿವರ: ಪ್ರಜ್ವಲ್ ರೇವಣ್ಣ ವಿರುದ್ಧ ಆಯೋಗಕ್ಕೆ ಗಂಭೀರ ದೂರು
ಪ್ರಜ್ವಲ್ ವಿರುದ್ಧ ದೂರುಗಳೇನು?
ಹೊಳೆನರಸೀಪುರದಲ್ಲಿ ರೇವಣ್ಣ ಅವರಿಂದ ಬಳವಳಿಯಾಗಿ ಬಂದ ಜಾಗದಲ್ಲಿ ಕನ್ವೆನ್ಷನಲ್ ಹಾಲ್ ಕಟ್ಟಿಸಿರುವುದರ ಬಗ್ಗೆ ಪ್ರಜ್ವಲ್ ಅವರು ಅಫಿಡವಿಟ್ನಲ್ಲಿ ಮಾಹಿತಿ ನೀಡಿಲ್ಲ. ತಾತ ಎಚ್ ಡಿ ದೇವೇಗೌಡ ಅವರಿಂದ ಸಾಲ ಪಡೆದಿರುವುದರ ಕುರಿತು ಕೂಡ ದಾಖಲೆಯಲ್ಲಿ ಹೇಳಿಲ್ಲ. 2014-17ರವರೆಗಿನ ಆದಾಯ ಲಾಭ-ನಷ್ಟದ ಬಗ್ಗೆ ಕಲಂನಲ್ಲಿ ಮಾಹಿತಿ ಕೊಟ್ಟಿಲ್ಲ. 2018ರ ಪೂರ್ವ ವರ್ಷದ ಆದಾಯದ ಬಗ್ಗೆ ಮಾಹಿತಿ ಒದಗಿಸಿಲ್ಲ. ಆದಾಯ ಪ್ರಮಾಣ ಪತ್ರ ಇಲ್ಲದೆಯೇ ಬ್ಯಾಂಕ್ನಿಂದ ಸಾಲ ಹೇಗೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಲಾಗಿದೆ.
ಪ್ರಜ್ವಲ್ ರೇವಣ್ಣ ನಾಮಪತ್ರ ಮರುಪರಿಶೀಲನೆಗೆ ಚುನಾವಣಾ ಆಯೋಗ ನೋಟಿಸ್
ಸಂಪೂರ್ಣ ವಿವರ ಇಲ್ಲ
ಚುನಾವಣೆಗೆ ಸ್ಪರ್ಧಿಸುವವರು ಕಡ್ಡಾಯವಾಗಿ ತಮ್ಮ ಐದು ವರ್ಷದ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೂ ಸೂಚಿಸಿತ್ತು. ಆದರೆ ಪ್ರಜ್ವಲ್ 2018ರ ಆದಾಯದ ವಿವರಗಳನ್ನು ಮಾತ್ರ ಸಲ್ಲಿಸಿದ್ದಾರೆ. ಪ್ರಜ್ವಲ್ ಅವರು 3.70 ಕೋಟಿ ಸಾಲ ಪಡೆದ ಮಾಹಿತಿ ನೀಡಲಾಗಿದ್ದು, ಅದರ ಮೂಲದ ಬಗ್ಗೆ ನಮೂದಿಸಿಲ್ಲ. ಅದಕ್ಕೆ ಆದಾಯ ತೆರಿಗೆ ಕಟ್ಟಲಾಗಿದೆಯೇ ಎಂಬುದನ್ನೂ ವಿವರಿಸಿಲ್ಲ.
ಅನರ್ಹತೆ ಆಗುತ್ತದೆಯೇ?
ಹಾಸನ ಚುನಾವಣಾಧಿಕಾರಿಗಳು ಕಳುಹಿಸಿರುವ ವರದಿ ಆಧಾರದಲ್ಲಿ ಚುನಾವಣಾ ಆಯೋಗ ತೆಗೆದುಕೊಳ್ಳುವ ನಿಲುವು ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದೆ. ಪ್ರಜ್ವಲ್ ಅವರ ವಿರುದ್ಧ ತನಿಖೆಗೆ ಚುನಾವಣಾ ಆಯೋಗ ಆದೇಶಿಸಬಹುದು. ಅಥವಾ ಅವರನ್ನು ಆರೋಪ ಮುಕ್ತಗೊಳಿಸಬಹುದು. ಆಗ ದೂರುದಾರರು ನ್ಯಾಯಾಲಯದ ಮೆಟ್ಟಿಲೇರುವ ಅವಕಾಶವಿದೆ. ಒಂದು ವೇಳೆ ಪ್ರಜ್ವಲ್ ಅವರ ವಿರುದ್ಧದ ಆರೋಪ ಸಾಬೀತಾದರೆ ಅವರು ಗೆದ್ದರೂ ಸಂಸದ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.