ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ
ಹಾಸನ, ಫೆಬ್ರವರಿ 22: ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಎಚ್ ಡಿ ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.
ಚುನಾವಣಾ ಆಯೋಗ ಅನುಮತಿ ನೀಡುತ್ತಿದ್ದಂತೆ ಕರ್ನಾಟಕ ಸರ್ಕಾರವು ಅಧಿಕೃತ ಆದೇಶ ಹೊರಡಿಸಲಿದೆ. ಚುನಾವಣೆ ಸಂದರ್ಭದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರೀಕ್ಷಿತ ಪ್ರಕ್ರಿಯೆಯಾಗಿರುತ್ತದೆ. ರೋಹಿಣಿ ಸಿಂಧೂರಿ ಅವರನ್ನು 2017ರ ಜುಲೈ 23 ರಂದು ಹಾಸನ ಡಿಸಿಯಾಗಿ ನೇಮಕ ಮಾಡಲಾಗಿತ್ತು. ಆದರೆ, 2018ರ ಫೆಬ್ರವರಿ ತಿಂಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ನೋಟಿಸ್
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯನ್ನು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕಿಯಾಗಿ ನೇಮಿಸಲಾಗಿದೆ. ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಶಾ ಅವರನ್ನು ನೇಮಿಸಲಾಗಿದೆ. ಆದೇಶ ಪ್ರತಿಯನ್ನು ಫ್ಯಾಕ್ಸ್ ಮೂಲಕ ಪಡೆದ ಅಕ್ರಂ ಪಾಶಾ ಅವರು ಹಾಸನಕ್ಕೆ ಆಗಮಿಸಿ ಶುಕ್ರವಾರದಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲೂ ರೋಹಿಣಿ ಸಿಂಧೂರಿ ಅವರನ್ನು ಅವಧಿಗೆ ಮುನ್ನ ವರ್ಗಾವಣೆ ಮಾಡಲಾಗಿತ್ತು. ಇದನ್ನು ರೋಹಿಣಿ ಪ್ರಶ್ನಿಸಿದ್ದರು. ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿತ್ತು.
ರೋಹಿಣಿ ಸೇರಿ ನಾಲ್ವರು ಜಿಲ್ಲಾಧಿಕಾರಿಗಳ ವರ್ಗಾವಣೆ
* ಎಂವಿ ವೆಂಕಟೇಶ್ ಅವರನ್ನು ಹಾವೇರಿ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಿ ತೋಟಗಾರಿಕಾ ಇಲಾಖೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
* ರೋಹಿಣಿ ಸಿಂಧೂರಿ ದಾಸರಿ ಅವರನ್ನು ಹಾಸನ ಡಿಸಿ ಸ್ಥಾನದಿಂದ ವರ್ಗಾವಣೆ ಮಾಡಿ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
* ಕೃಷ್ಣ ಬಾಜ್ಪಾಯಿ ಅವರನ್ನು ಕೆಪಿಎಸ್ ಸಿ ಕಂಟ್ರೋಲರ್ ಹುದ್ದೆಯಿಂದ ವರ್ಗಾವಣೆ ಮಾಡಿ ಹಾವೇರಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
* ಅಕ್ರಂ ಪಾಶಾ ಅವರನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಇನ್ಸ್ ಪೆಕ್ಟರ್ ಹಂತದಿಂದ ಐಜಿಪಿವರೆಗಿನ ಹುದ್ದೆಗಳ ವರ್ಗಾವಣೆ
ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಹಂತದಿಂದ ಐಜಿಪಿವರೆಗಿನ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಕೇಂದ್ರ ಚುನಾವಣೆ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ರವಾನೆಯಾಗುತ್ತದೆ. ಚುನಾವಣೆ ಅಧಿಸೂಚನೆ ಹೊರಡಿಸಿದ ವಾರದೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತಿಳಿಸಿದೆ.
ಚುನಾವಣೆ ವೇಳೆ ವರ್ಗಾವಣೆ ಮಾರ್ಗಸೂಚಿ
ಮಾರ್ಗಸೂಚಿ ಏನು? : ಎಸ್ಐ ಹುದ್ದೆಯಿಂದ ಐಜಿಪಿವರೆಗೆ ಎಲ್ಲ ಹಂತದ ಹುದ್ದೆಗಳಲ್ಲಿರುವವರೂ ಆಯೋಗದ ನಿಯಮಗಳಂತೆ ವರ್ಗಾವಣೆ ಆಗಲೇಬೇಕಾಗುತ್ತದೆ. ವರ್ಗ ಮಾಡಲು ಅನುಸರಿಸಬೇಕಾದ ಮಾರ್ಗ ಸೂಚಿ ಕೂಡ ಆಯೋಗ ನೀಡಿದೆ. ಯಾವುದೇ ಸಿಬ್ಬಂದಿ ಒಂದೇ ಸ್ಥಳದಲ್ಲಿ 3 ವರ್ಷಕ್ಕೂ ಅಧಿಕ ಸಮಯ ಒಂದೇ ಜಿಲ್ಲೆ, ಹುದ್ದೆ, ಇಲಾಖೆಯಲ್ಲಿರಬಾರದು. ಹುಟ್ಟೂರಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರಬಾರದು. ಕುಟುಂಬದಲ್ಲಿ ಯಾರೂ ಚುನಾವಣೆಗೆ ಸ್ಪರ್ಧಿಸಿರಬಾರದು.
ಆಯೋಗದ ನಿರ್ದೇಶನದಂತೆ ವರ್ಗಾವಣೆ
ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳೊಂದಿಗೆ ಸಂಬಂಧ ಹೊಂದಿರಬಾರದು. ಹಿಂದಿನ ಚುನಾವಣೆಗಳಲ್ಲಿ ಅಕ್ರಮದ ದೂರು ಹೊಂದಿರಬಾರದು ಎನ್ನುವ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಇದನ್ನು ಆಧರಿಸಿ ಆಯೋಗವು ವರ್ಗಾವಣೆಯಾಗಬೇಕಾದ ಅಧಿಕಾರಿಗಳ ಪಟ್ಟಿ ತಯಾರಿಸಲಿದೆ. ಈಗಾಗಲೇ ರಾಜ್ಯ ಸರ್ಕಾರವು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಒಂದು ಹಂತದ ವರ್ಗಾವಣೆ ಮಾಡಿದೆ ಎಂಬ ಆರೋಪವಿದೆ. ಹೀಗಾಗಿ ಈ ಬಾರಿ ಈ ವರ್ಗಾವಣೆಯು ದೊಡ್ಡ ಚರ್ಚೆಗೂ ಕಾರಣವಾಗಬಹುದು.