ನೀತಿ ಸಂಹಿತೆ ತೆಗೆದ ಮೂರೇ ದಿನಕ್ಕೆ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ವರ್ಗಾವಣೆ
ಹಾಸನ, ಮೇ 30: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಹಾಸನದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಲೋಕಸಭೆ ಚುನಾವಣೆ ಮುಕ್ತಾಯಗೊಂಡು ಚುನಾವಣಾ ಆಯೋಗ ನೀತಿಸಂಹಿತೆಯನ್ನು ತೆಗೆದುಹಾಕಿದ ಮೂರೇ ದಿನದಲ್ಲಿ ಈ ಬದಲಾವಣೆ ಮಾಡಲಾಗಿದೆ.
ಹಾಸನ ನೂತನ ಜಿಲ್ಲಾಧಿಕಾರಿ ಅಕ್ರಂ ಪಾಷ ಪರಿಚಯ
ಈ ಹಿಂದೆ ಕೆಲವೇ ಸಮಯ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷಾ ಅವರನ್ನು ಎರಡೇ ತಿಂಗಳಿನಲ್ಲಿ ಪ್ರಿಯಾಂಕಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ, ಪ್ರಿಯಾಂಕಾ ಅವರಿಗೆ ಇನ್ನೂ ಯಾವುದೇ ಜಿಲ್ಲೆ ಅಥವಾ ಇಲಾಖೆಯ ಸ್ಥಾನ ತೋರಿಸಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಅಕ್ರಂ ಪಾಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ಚುನಾವಣಾ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರಾಗಿದ್ದ ಅಕ್ರಂ ಪಾಷಾ ಅವರನ್ನು ಹಾಸನದ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರನ್ನು ವರ್ಗಾವಣೆ ಮಾಡಿತ್ತು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅವರು ವರ್ಗವಾಗಿದ್ದರು. ಬೆಂಗಳೂರು ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಹಾಸನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
SSLC ಫಲಿತಾಂಶ ಹೆಚ್ಚಳದ ಶ್ರೇಯಸ್ಸು ಯಾರಿಗೆ? ರೋಹಿಣಿ ಅಥವಾ ಭವಾನಿ ರೇವಣ್ಣ?
ಫೆಬ್ರವರಿ 22ರಂದು ಅಕ್ರಂ ಪಾಷಾ ಅವರನ್ನು ಹಾಸನದ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರು ರೋಹಿಣಿ ಸಿಂಧೂರಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಒಂದೇ ತಿಂಗಳಿನಲ್ಲಿ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು.
ಮಾರ್ಚ್ 30ರಂದು ಹಾಸನ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಅಧಿಕಾರ ವಹಿಸಿಕೊಂಡಿದ್ದರು. ಲೋಕಸಭೆ ಚುನಾವಣೆಯ ವೇಳೆ ಅವರು ಹಾಸನ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಒಂದೇ ವರ್ಷದಲ್ಲಿ ಹಲವು ವರ್ಗಾವಣೆ
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಾಸನ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಅನೇಕ ಬಾರಿ ಬದಲಾವಣೆಗಳನ್ನು ಮಾಡಲಾಗಿದೆ. ಕೇವಲ ಒಂದೇ ವರ್ಷದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಪಿ.ಸಿ. ಜಾಫರ್, ಡಿ. ರಣದೀಪ್, ಅಕ್ರಂ ಪಾಷಾ ಮತ್ತು ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಹಾಸನ ಜಿಲ್ಲಾಧಿಕಾರಿಗಳಾಗಿ ವರ್ಗಾಯಿಸಲಾಗಿದೆ.
ದೂರು ನೀಡಿದ್ದ ಪ್ರೀತಂ ಗೌಡ
ಚುನಾವಣೆಯ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿಯನ್ನು ಬದಲಾವಣೆ ಮಾಡುವಂತೆ ಬಿಜೆಪಿ ಶಾಸಕ ಪ್ರೀತಂ ಗೌಡ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಅವರ ದೂರನ್ನು ಪರಿಗಣಿಸಿದ ಆಯೋಗವು ವರ್ಗಾವಣೆ ಮಾಡಿ ಪ್ರಿಯಾಂಕಾ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿತ್ತು.
ಸುಳ್ಳು ಅಫಿಡವಿಟ್ ಆರೋಪ: ಡಿಸಿ ವರದಿಯಲ್ಲಿ ಪ್ರಜ್ವಲ್ ರೇವಣ್ಣ ಭವಿಷ್ಯ
ರೇವಣ್ಣ ವಿರುದ್ಧ ಕಿಡಿಕಾರಿದ್ದ ಪ್ರಿಯಾಂಕಾ
ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಅವರು ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಆರೋಪಿಸಿದ್ದರು. 'ರೋಹಿಣಿ ಅವರು ನನ್ನ ಬ್ಯಾಚ್ಮೇಟ್. ಅವರ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಅವರು ಎರಡು ದಿನ ತಮ್ಮ ಜತೆ ಇದ್ದರು ಎಂಬ ಆರೋಪ ಸುಳ್ಳು. ನಾನು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರಿಂದಲೂ ಸಲಹೆ ಪಡೆಯುವ ಅಗತ್ಯವಿಲ್ಲ' ಎಂದು ಪ್ರಿಯಾಂಕಾ ಅವರು ತಿರುಗೇಟು ನೀಡಿದ್ದರು.
ರೇವಣ್ಣ-ರೋಹಿಣಿ ಜಟಾಪಟಿ
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೋಹಿಣಿ ಸಿಂಧೂರಿ ಅವರನ್ನು ಹಾಸನದಿಂದ ವರ್ಗಾವಣೆ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿದ ಅವರು ಕೆಇಟಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ವರ್ಗಾವಣೆ ಆದೇಶಕ್ಕೆ ತಡೆ ನೀಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ರೇವಣ್ಣ ಮತ್ತು ರೋಹಿಣಿ ಅವರ ನಡುವೆ ಜಟಾಪಟಿ ನಡೆದಿತ್ತು ಎನ್ನಲಾಗಿದೆ. ಇದರಿಂದ ರೋಹಿಣಿ ಅವರ ವರ್ಗಾವಣೆಗೆ ರೇವಣ್ಣ ಪಟ್ಟು ಹಿಡಿದಿದ್ದರು.
ಚುನಾವಣಾ ಆಯೋಗಕ್ಕೆ ವರದಿ
ನೂತನ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರು ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರಗಳನ್ನು ಮರೆಮಾಚಿ, ಸುಳ್ಳು ಮಾಹಿತಿ ಒದಗಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಸೂಚಿಸಿತ್ತು. ಐದು ಪುಟಗಳ ವರದಿ ನೀಡಿದ್ದ ಪ್ರಿಯಾಂಕಾ ಅವರು, ಅವರು ಸಲ್ಲಿಸಿರುವ ಅಫಿಡವಿಡ್ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬಹುದು ಎಂದು ಸಲಹೆ ನೀಡಿದ್ದರು.