4 ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ನೀಡಿದ ಹಾಸನ ನ್ಯಾಯಾಲಯ
ಹಾಸನ, ಅಕ್ಟೋಬರ್ 05: ಮನೆಯೊಳಗೆ ನುಗ್ಗಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದು ಚಿನ್ನಾಭರಣ ದೋಚಿದ ಕೃತ್ಯ ಸಾಕ್ಷ್ಯಾಧಾರಗಳಿಂದ ರುಜುವಾತು ಆದ ಹಿನ್ನಲೆಯಲ್ಲಿ ಮಹತ್ವದ ತೀರ್ಪು ನೀಡಲಾಗಿದೆ.
ಐಟಿ ಅಧಿಕಾರಿ ಪುತ್ರ ಶರತ್ ಹತ್ಯೆ ನಡೆದದ್ದು ಹೇಗೆ?
ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಹಂತಕರಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ತೀರ್ಪು ನೀಡಿದ್ದಾರೆ.
ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ನಿವಾಸಿಗಳಾದ ಮನು ಅಲಿಯಾಸ್ ಮನುಕುಮಾರ, ಮಂಜ ಅಲಿಯಾಸ್ ಮಂಜೇಗೌಡ, ಸುನಿಲ್ ಅಲಿಯಾಸ್ ಸುನಿಲ್ ಕುಮಾರ್ ಮತ್ತು ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿ ಮಂಜ ಅಲಿಯಾಸ್ ಪಾಪಣ್ಣಿ ಜೀವಾವಧಿ ಶಿಕ್ಷೆಗೊಳಗಾದವರು.
ಕೆಎಸ್ ಎಫ್ಸಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಎ.ಆರ್.ರಂಗ ಅವರು ಪತ್ನಿ ತೇಜಸ್ವಿನಿ ಹಾಗೂ ಮಕ್ಕಳಾದ ಮನೋಜ್ ಮತ್ತು ಧನುಷ್ ರವರೊಂದಿಗೆ ಚಿಕ್ಕಹೊನ್ನೇನಹಳ್ಳಿಯಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿದ್ದರು.
ಸೆ.30, 2013ರಂದು ಪತಿ ರಂಗ ಕೆಲಸಕ್ಕೆ ಹೋಗಿದ್ದರೆ ಮಕ್ಕಳು ಶಾಲೆಗೆ ತೆರಳಿದ್ದರು. ಈ ವೇಳೆ ಬೆಂಗಳೂರಿನಲ್ಲಿದ್ದ ನಾಲ್ವರು ಹಂತಕರಾದ ಮನು, ಮಂಜ, ಸುನಿಲ್, ಮತ್ತು ಮಂಜ ಅವರು ಇಂಡಿಕಾ ಕಾರಿನಲ್ಲಿ ಯಾವುದಾದರೂ ಮನೆಗೆ ನುಗ್ಗಿ ದರೋಡೆ ಮಾಡುವ ಸಲುವಾಗಿ ಕಾರಿನಲ್ಲಿ ಹಾಸನತ್ತ ಬಂದಿದ್ದು, ರಂಗ ಅವರ ಬಗ್ಗೆ ತಿಳಿದಿದ್ದ ಮನುಗೆ ಅವರ ಪತ್ನಿ ತೇಜಸ್ವಿನಿಯ ಪರಿಚಯವಿತ್ತಲ್ಲದೆ ಮನೆಯಲ್ಲಿ ಬೆಳಗ್ಗಿನ ಸಮಯ ಯಾರೂ ಇರಲ್ಲ ಎಂಬುದು ಗೊತ್ತಾಗಿ ಅವರ ಮನೆಯತ್ತ 10.30ರ ಸಮಯದಲ್ಲಿ ತೆರಳಿದ್ದರು.
ಸುನಿಲ್ ಎಂಬಾತ ಮನೆಗೆ ಅನತಿ ದೂರದಲ್ಲಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದರೆ, ಮನು ಇನ್ನಿಬ್ಬರೊಂದಿಗೆ ತೇಜಸ್ವಿನಿ ಮನೆಯತ್ತ ತೆರಳಿ ಕಾಲಿಂಗ್ ಬೆಲ್ ಒತ್ತಿದ್ದನು. ಬಾಗಿಲು ತೆರೆದ ತೇಜಸ್ವಿನಿ ಮನುವಿನ ಪರಿಚಯವಿದ್ದ ಕಾರಣದಿಂದ ಒಳಗೆ ಕರೆದು ಕಾಫಿ ಮಾಡಿಕೊಟ್ಟು ಅಡುಗೆ ಮನೆಯತ್ತ ತೆರಳಿದ ವೇಳೆ ಹಿಂಬಾಲಿಸಿ ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಮನೆಯಲ್ಲಿದ್ದ ಒಡವೆಗಳನ್ನು ಹೊತ್ತೊಯ್ದಿದ್ದರು.
ಮಧ್ಯಾಹ್ನ 12.30ರ ವೇಳೆಗೆ ಮಗ ವಿಜಯ ಶಾಲೆಯಿಂದ ಮನೆಗೆ ಬಂದಾಗ ಕೃತ್ಯ ನಡೆದಿರುವುದು ಗೊತ್ತಾಗಿತ್ತು.
ಈ ಸಂಬಂಧ ಹಾಸನದ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೊಲೆ ಹಾಗೂ ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಂದಿನ ಆರಕ್ಷಕ ವೃತ್ತ ನಿರೀಕ್ಷಕರಾದ ಸಂಜೀವೇಗೌಡರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆಯ ಬಗ್ಗೆ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳ ವಿರುದ್ಧ ದೋಷಾರೋಪಣಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ರವರು ಆರೋಪಿತರ ಮೇಲೆ ಆಪಾದಿಸಲಾದ ಕೊಲೆ ಮತ್ತು ದರೋಡೆ ಹಾಗೂ ಸಾಕ್ಷ್ಯ ನಾಶದ ಆಪಾದನೆಗಳು ರುಜುವಾತುಗೊಂಡಿರುವ ಹಿನ್ನಲೆಯಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ) ಕಲಂ 302ರಡಿಯಲ್ಲಿನ ಅಪರಾಧಕ್ಕಾಗಿ ಎಲ್ಲ 4 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.25ಸಾವಿರ ದಂಡ, ಐಪಿಸಿ ಕಲಂ 201 ರಡಿಯ ಅಪರಾಧಕ್ಕಾಗಿ 4 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ರೂ.10ಸಾವಿರ ದಂಡ ಮತ್ತು ಐಪಿಸಿ ಕಲಂ 397 ರಡಿಯ ಅಪರಾಧಕ್ಕಾಗಿ 7 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ, ತಲಾ ರೂ.20ಸಾವಿರ ದಂಡ, ಐಪಿಸಿ ಕಲಂ 392 ರಡಿಯ ಅಪರಾಧಕ್ಕಾಗಿ 7 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ ತಲಾ ರೂ.20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ (ಪಬ್ಲಿಕ್ ಪ್ರಾಸಿಕ್ಯೂಟರ್) ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ಅವರು ವಾದ ಮಂಡಿಸಿದ್ದರು.