ಹಾಸನ ಕಾಂಗ್ರೆಸ್ ಮುಖಂಡರ ಬಂಡಾಯ, ಸಿದ್ದರಾಮಯ್ಯ ಸಂಧಾನ
ಬೆಂಗಳೂರು, ಮಾರ್ಚ್ 20: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡುವುದಿಲ್ಲವೆಂದು ಹಾಸನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಂಡಾಯ ಎದ್ದಿದ್ದು, ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ.
ಇಂದು ನೂರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಆಗಮಿಸಿದ್ದ ಹಾಸನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಯಾವುದೇ ಕಾರಣಕ್ಕೂ ನಾವು ಹಾಸನದ ಲೋಕಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದರು.
ರಂಗೇರಿತು ಹಾಸನ ಲೋಕಸಭೆ ಕಣ: ಎ. ಮಂಜು ಬಿಜೆಪಿ ಸೇರ್ಪಡೆ
ಸಿದ್ದರಾಮಯ್ಯ ಅವರು ಕೆಲವು ಮುಖಂಡರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ, ಸಿದ್ದರಾಮಯ್ಯ ಅವರ ಮಾತಿಗೆ ಬಹುತೇಕರು ಮಣಿಯಲಿಲ್ಲ.
ತಮ್ಮ ನಿವಾಸದ ಮುಂದೆಯೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಹೈಕಮಾಂಡ್ ಆದೇಶ, ಅದನ್ನು ನಾವು ಪಾಲಿಸಲೇಬೇಕು, ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಸಂಧಾನಕ್ಕೆ ಯತ್ನ
ಆದರೂ ಕಾರ್ಯಕರ್ತರು ಹಾಗೂ ಮುಖಂಡರು ಸಮಾಧಾನವಾಗಲಿಲ್ಲ, ನಂತರ ಕೆಲವು ಆಯ್ದ ಮುಖಂಡರನ್ನು ವೈಯಕ್ತಿಕವಾಗಿ ಮಾತನಾಡಿಸಿ ಸಿದ್ದರಾಮಯ್ಯ ಅವರು ಸಂಧಾನ ನಡೆಸಿ, ಕಾರ್ಯಕರ್ತರನ್ನು ಕ್ಷೇತ್ರಗಳಿಗೆ ತೆರಳುವಂತೆ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಸಂಧಾನ
ನಾಳೆ ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಸಭೆ ನಡೆಸಿ ಸಂಧಾನ ನಡೆಸಲು ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ಮುಖಂಡರು ನಿರ್ಧರಿಸಿದ್ದು, ಅಲ್ಲಿ ಎರಡೂ ಪಕ್ಷಗಳ ಸ್ಥಳೀಯ ಮುಖಂಡರ ನಡುವೆ ಸಂಧಾನ ನಡೆಯಲಿದೆ.
ಹಾಸನದಲ್ಲಿ ಮಗನ ಗೆಲುವಿಗಾಗಿ ಟೊಂಕಕಟ್ಟಿ ನಿಂತ ರೇವಣ್ಣ..!
ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ಹಾಸನದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಂಚಿನಿಂದಲೂ ಎದುರಾಳಿಯಾಗಿ ಚುನಾವಣೆ ಎದುರಿಸುತ್ತಾ ಬಂದಿದೆ. ಆದರೆ ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಇಷ್ಟು ವರ್ಷಗಳ ಎದುರಾಳಿಯ ಪರವಾಗಿ ನಿಲ್ಲಬೇಕಿದೆ, ಇದು ಹಲವರಲ್ಲಿ ಅಸಮಾಧಾನ ಹುಟ್ಟುಹಾಕಿದೆ.
ಕಾಂಗ್ರೆಸ್ ಮುಖಂಡ ಎ.ಮಂಜು ಬಿಜೆಪಿಗೆ
ಜೆಡಿಎಸ್ಗೆ ಬೆಂಬಲಿಸುವುದನ್ನು ನಿರಾಕರಿಸಿ ಹಾಸನ ಕಾಂಗ್ರೆಸ್ ಮುಖಂಡ ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ, ಅಲ್ಲದೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಾಸನ ಬಿಜೆಪಿಯ ಅಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿದ್ದಾರೆ.