ಕಾಂಗ್ರೆಸ್ ಪಾಲಿಗೆ ಎ.ಮಂಜು ಹಳಸಿದ ಅನ್ನ: ಹಾಸನ ಬಿಜೆಪಿ
Recommended Video
ಹಾಸನ, ಮಾರ್ಚ್ 12: ಹಾಸನದ ಕಾಂಗ್ರೆಸ್ನ ಪ್ರಮುಖ ಮುಖಂಡ, ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಅವರು ಬಿಜೆಪಿ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಆದರೆ ಇದು ಹಾಸನದ ಬಿಜೆಪಿ ಮುಖಂಡರಿಗೆ ಇಷ್ಟವಿಲ್ಲ.
ಹೌದು, ಹಾಸನದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ಅವರೇ ಎ.ಮಂಜು ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದಿದ್ದಾರೆ.
ಮಾಜಿ ಸಚಿವ ಎ.ಮಂಜು ಬಿಜೆಪಿಗೆ, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?
ಕಾಂಗ್ರೆಸ್ ಪಾಲಿಗೆ ಎ.ಮಂಜು ಅವರು ಹಳಸಿದ ಅನ್ನವಾಗಿದ್ದಾರೆ, ಅವರನ್ನು ಕಾಂಗ್ರೆಸ್ ಪಕ್ಷವೇ ಮೂಲೆಗುಂಪು ಮಾಡಿದೆ. ಅವರು ಬಿಜೆಪಿಗೆ ಸೇರ್ಪಡೆ ಆದರೂ ಸಹ ಅವರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
'ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ದುಡಿಯುತ್ತೇವೆ'
ಹಾಸನ ಜಿಲ್ಲೆಯ ಇಂದಿನ ಕೆಟ್ಟ ಪರಿಸ್ಥಿತಿಗೆ ಎ.ಮಂಜು ಅವರು ಕಾರಣ ಅವರು ಸಚಿವರಾಗಿದ್ದಾಗ ಜಿಲ್ಲೆಯನ್ನು ತಮ್ಮ ಸ್ವಂತ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂದು ಯೋಗ ರಮೇಶ್ ಹೇಳಿದ್ದಾರೆ. ಆದರೆ ಪಕ್ಷವು ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಸಹ ತಾವು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ.
ದೇವೇಗೌಡ ಕುಟುಂಬದ ಮೇಲೂ ವಾಗ್ದಾಳಿ
ದೇವೇಗೌಡ ಅವರ ಮೇಲೂ ವಾಗ್ದಾಳಿ ನಡೆಸಿದ ಯೋಗ ರಮೇಶ್, ಅವರ ಕುಟುಂಬ ರಾಜಕಾರಣಕ್ಕೆ ಹಾಸನದ ಜನ ಬೇಸತ್ತಿದ್ದಾರೆ. ರೇವಣ್ಣ ಅವರು ಹೊಳೆನರಸೀಪುರ ಅಭಿವೃದ್ಧಿ ಮಾಡಿದ್ದಾರೆಯೇ ಹೊರತು ಹಾಸನ ಅಭಿವೃದ್ಧಿ ಆಗಿಲ್ಲ ಎಂದರು.
ಬಿಜೆಪಿ ಸೇರುವ ಬಗ್ಗೆ ಮಾಜಿ ಸಚಿವ ಎ.ಮಂಜು ಹೇಳಿದ್ದೇನು?
ಯಡಿಯೂರಪ್ಪ ಜೊತೆ ಚರ್ಚಿಸಿರುವ ಎ.ಮಂಜು
ಎ.ಮಂಜು ಅವರು ಈಗಾಗಲೇ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ ಜೊತೆಗೆ ಆರ್.ಅಶೋಕ್ ಅವರೊಂದಿಗೆ ಚರ್ಚೆ ಮುಗಿದಿದೆ. ಮಂಜು ಅವರೇ ಹಾಸನದಿಂದ ಬಿಜೆಪಿ ಅಭ್ಯರ್ಥಿ ಆಗುವ ಸಕಲ ಸಾಧ್ಯತೆಯೂ ಇದೆ. ಮಂಜು ಅವರ ರಾಜಕೀಯ ವಿರೋಧಿಯಾದ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಅವರು ತೊಡೆತಟ್ಟಲಿದ್ದಾರೆ.
ಯಡಿಯೂರಪ್ಪ ಅವರಿಗೆ ಚಿಂತೆ
ಆದರೆ ಹಾಸನದ ಸ್ಥಳೀಯ ಬಿಜೆಪಿ ಮುಖಂಡರೇ ಎ.ಮಂಜು ಅವರ ಬಗ್ಗೆ ಅಸಮಾಧಾನ ಹೊಂದಿರುವುದು ಯಡಿಯೂರಪ್ಪ ಅವರ ಹಣೆಯ ಮೇಲೆ ಚಿಂತೆಯ ಗೆರೆಗಳನ್ನು ಮೂಡಿಸಿದೆ. ಸ್ಥಳೀಯ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮಂಜು ಅವರಿಗೆ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದ್ದು, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಕಾದು ನೋಡಬೇಕಿದೆ.