ಹಾಸನ ವಿಮಾನ ನಿಲ್ದಾಣ ಯೋಜನೆಗೆ ಅನುದಾನ ಕೊಟ್ಟ ಸರ್ಕಾರ
ಹಾಸನ, ಜೂನ್ 23; ಹಾಸನ ಜಿಲ್ಲೆಯ ಜನರ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಕರ್ನಾಟಕ ಸರ್ಕಾರ ಹಾಸನ ವಿಮಾನ ನಿಲ್ದಾಣ ಯೋಜನೆಗೆ 193 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.
ಹಾಸನದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬುದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕಸಸು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಬಜೆಟ್ ಭಾಷಣದಲ್ಲಿ ವಿಮಾನ ನಿಲ್ದಾಣ ಯೋಜನೆಗೆ 175 ಕೋಟಿ ಅನುದಾನ ಘೋಷಣೆ ಮಾಡಿದ್ದರು.
ಹಾಸನ ನಗರದ ಹೊರವಲಯದ ಭುವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಯೋಜನೆ ಜಾರಿಗೊಳ್ಳುವ ಪ್ರದೇಶದ 9 ಕಿ.ಮೀ. ವ್ಯಾಪ್ತಿಯಲ್ಲಿರುವ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿಗಳನ್ನು, ಟವರ್ಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಹಾಸನ ವಿಮಾನ ನಿಲ್ದಾಣ; ತುರ್ತು ಕಾಮಗಾರಿಗೆ ಶೀಘ್ರ ಅನುದಾನ
193 ಕೋಟಿ ಅನುದಾನ; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನ ವಿಮಾನ ನಿಲ್ದಾಣ ಯೋಜನೆ ಕುರಿತು ಚರ್ಚೆ ನಡೆದಿದೆ.
ಸಭೆಯ ಬಳಿಕ ಮಾತನಾಡಿದ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ, "ಸಭೆಯಲ್ಲಿ ರನ್ ವೇ, ಪ್ಯಾಸೆಂಜರ್ ಟರ್ಮಿನಲ್ ಸೇರಿದಂತೆ ಯೋಜನೆಯ ಮೂಲ ಸೌರ್ಯಕ್ಕೆ ಅನುದಾನ ನೀಡಲು ಒಪ್ಪಿಗೆ ಕೊಡಲಾಗಿದೆ. ಯೋಜನೆಯ ವೆಚ್ಚವನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ" ಎಂದು ಹೇಳಿದರು.
ಹಾಸನ ವಿಮಾನ ನಿಲ್ದಾಣ ಜಾಗದ; ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಸೂಚನೆ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೂನ್ 11ರಂದು ಹಾಸನಕ್ಕೆ ಭೇಟಿ ಕೊಟ್ಟಿದ್ದರು. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ್ದ ಅವರು, "ಎಚ್. ಡಿ. ದೇವೇಗೌಡರ ಅಪೇಕ್ಷೆಯಂತೆ ಸದ್ಯದಲ್ಲೇ ಹಾಸನ ವಿಮಾನ ನಿಲ್ದಾಣ ಕೆಲಸ ಆರಂಭಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಜೊತೆ ಚರ್ಚೆ ಮಾಡುತ್ತೇನೆ" ಎಂದು ತಿಳಿಸಿದ್ದರು.
1996ರಲ್ಲಿ ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಸನ ವಿಮಾನ ನಿಲ್ದಾಣದ ಯೋಜನೆ ರೂಪಗೊಂಡಿತು. 2021ರಲ್ಲಿ ಯೋಜನೆಗೆ ವೇಗ ಸಿಕ್ಕಿದ್ದು, ಕಾಮಗಾರಿ ಆರಂಭಿಸಲು ಕರ್ನಾಟಕ ಸರ್ಕಾರ ಸಹ ಒಪ್ಪಿಗೆ ನೀಡಿದೆ.
ವಿಮಾನ ನಿಲ್ದಾಣ ಟರ್ಮಿನಲ್ ವಿನ್ಯಾಸಕ್ಕೆ ಕಾಂಗ್ರೆಸ್ ಕ್ಯಾತೆ!
ಕರ್ನಾಟಕದಲ್ಲಿ 2007ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಜಿಲ್ಲಾ ಪ್ರಾಧಿಕಾರ 536 ಎಕರೆ ಪ್ರದೇಶವನ್ನು ಏಳು ಗ್ರಾಮಗಳಿಂದ ವಿಮಾನ ನಿಲ್ದಾಣ ಯೋಜನೆಗಾಗಿ ಪಡೆದಿತ್ತು. ಶಂಕು ಸ್ಥಾಪನೆಯನ್ನು ಸಹ ಮಾಡಲಾಯಿತು. ಅದು ವಿಮಾನ ನಿಲ್ದಾಣ ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಬಳಿಕ ಯೋಜನೆಗೆ ವೇಗ ಸಿಗಲಿಲ್ಲ.
ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 200 ಎಕರೆ ಹೆಚ್ಚುವರಿ ಭೂಮಿಯನ್ನು ಪಡೆದುಕೊಳ್ಳಲು ಜಿಲ್ಲಾ ಪ್ರಾಧಿಕಾರ ರೈತರಿಗೆ ನೋಟಿಸ್ ನೀಡಿತ್ತು. ಭುವನಹಳ್ಳಿ, ಸಂಕೇನಹಳ್ಳಿ, ಲಕ್ಷ್ಮೀ ಸಾಗರ, ತೆಂಡಿಹಳ್ಳಿ, ದಾವಲಪುರ, ಜಿ. ಮಿಲನಹಳ್ಳಿಯಲ್ಲಿ ಈ ಭೂಮಿ ಇತ್ತು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಹಾಸನ ವಿಮಾನ ನಿಲ್ದಾಣ ಯೋಜನೆಗೆ ವೇಗ ನೀಡುವಂತೆ ಮನವಿಯನ್ನು ಸಹ ಮಾಡಿದ್ದರು.
ಯೋಜನೆ ಕುರಿತು ಮಾತನಾಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, "ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರದ ನೆರವು ಪಡೆಯಲು ಪ್ರಯತ್ನ ನಡೆಸಲಾಗುತ್ತದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವುದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕಸಸು. ಅದಕ್ಕಾಗಿ ದಶಕಗಳ ಹಿಂದೆಯೇ 600 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಆಧಾರದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಹಿಂದಿನ ಪ್ರಸ್ತಾವನೆಯಂತೆ ವಿಮಾನ ನಿಲ್ದಾಣದ ಜೊತೆ ವಾಯುನೆಲೆ ನಿರ್ಮಾಣಕ್ಕೂ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಈಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರ ನಿರ್ಮಾಣವಾಗಲಿದೆ.
ಹಾಸನ ಜಿಲ್ಲೆ ಕೃಷಿ, ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಚಿಕ್ಕಮಗಳೂರು ಜಿಲ್ಲೆಗೆ ಸಹ ಅನುಕೂಲವಾಗಲಿದೆ. ಯೋಜನೆ ಪೂರ್ಣಗೊಂಡರೆ ಜನರು ವಿಮಾನಕ್ಕಾಗಿ ಮಂಗಳೂರು, ಬೆಂಗಳೂರಿಗೆ ಪ್ರಯಾಣಿಸುವುದು ತಪ್ಪಲಿದೆ.
ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಸಿದ್ಧತೆಗಲು ನಡೆದಿವೆ. ಇಂಧನ ಮತ್ತು ಮೂಲ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.