ಯುವ ಜನಾಂಗವನ್ನು ಆಕರ್ಷಿಸಿದ ಹಾಸನದ ಕೃಷಿ ಮೇಳ
ಹಾಸನ, ಫೆಬ್ರವರಿ 18: ಕೃಷಿ, ತೋಟಗಾರಿಕೆ ಇಲಾಖೆಗಳು ರೈತರಿಗೆ ಪೂರಕವಾಗಿ ನಿಂತು ಕೃಷಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಸಹಕಾರ ನೀಡಬೇಕು ಎಂದು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ ರೇವಣ್ಣ ಅವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಅರಣ್ಯ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತ ಸಂಬಂಧಿ ಇಲಾಖೆಗಳನ್ನು ಪುನಶ್ಚೇತನಗೊಳಿಸದೇ ಹೋದಲ್ಲಿ ಕೃಷಿ ಕ್ಷೇತ್ರದ ಪ್ರಗತಿ ಕಷ್ಟ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದರು.
ಹಿಂದಿನ ಕಾಲದ ಕೃಷಿ ಪದ್ದತಿಗಳು ಮರೆಯಾಗುತ್ತಿವೆ ಯುವ ಸಮುದಾಯಕ್ಕೂ ಬೇಸಾಯದ ಬಗ್ಗೆ ಆಸಕ್ತಿ ಮೂಡಿಸಬೇಕು.ರೈತರಿಗೆ ವ್ಯವಸ್ಥಿತವಾದ ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು ಹಾಗೂ ನಿಗದಿತ ಬೆಂಬಲ ಬೆಲೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವ ರೇವಣ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಡಾ.ಮಧುಸೂದನ್, ತೋಟಗಾರಿಕ ನಿರ್ದೇಶಕರಾದ ಸಂಜಯ್, ಮಂಗಳಾ ,ಕೃಷಿ ಉಪನಿರ್ದೇಶಕರಾದ ಕೋಕಿಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು, ಹಿರಿಯ ಸಹಾಯಕ ನಿರ್ದೇಶಕರಾದ ರವಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿ ಪರ ರೈತರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಪ್ರಗತಿ ಪರ ರೈತರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಕೃಷಿ ಇಲಾಖೆಯ ಮುಕಂದುರು ಹೊಸಹಳ್ಳಿಯ ತೋಟಪ್ಪ , ಬೆಕ್ಕ ಗ್ರಾಮದ ರಾಘವೇಂದ್ರ, ಬರಾಳು ಗ್ರಾಮದ ರಂಗಸ್ವಾಮಿ, ಬ್ಯಾವದಕೆರೆ ಮುನಿಸ್ವಾಮಿ, ಗೊರೂರಿನ ನಾಗರಾಜು, ರಂಗನಾಥಪುರದ ಪುಟ್ಟರಾಜು, ಚನ್ನರಾಯಪಟ್ಟಣ ತಾಲ್ಲೂಕಿನ ಸೋಮನಾಥನಹಳ್ಳಿ ರೈತರಾದ ದೊಡ್ಡೇಗೌಡ ರನ್ನು ಸಚಿವರಾದ ಎಚ್.ಡಿ ರೇವಣ್ಣ ಅವರು ಸನ್ಮಾನಿಸಿದರು.
ಕೃಷಿ ಮೇಳ ರೈತರ ಮೆಚ್ಚುಗೆ ಗಳಿಸಿತು
ಫೆ.17 ರಂದು ನಡೆದ ಜಿಲ್ಲಾ ಮಟ್ಟದ ಸಮಗ್ರ ಕೃಷಿ ಮೇಳ ರೈತರ ಮೆಚ್ಚುಗೆ ಗಳಿಸಿತು ಪ್ರಸ್ತುತ ದಿನಗಳಲ್ಲಿ ರೈತರಿಗೆ ಮುಂದಿನ ಹಂಗಾಮಿನಲ್ಲಿ ಬೆಳೆಯಬಹುದಾದ ಬೆಳೆಗಳು, ಕೃಷಿ, ತಾಂತ್ರಿಕತೆ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಅರಣ್ಯ ಗಿಡಗಳು, ಸಾಂಬಾರು ಹಾಗೂ ತೋಟಗಾರಿಕಾ ಬೆಳೆಗಳು, ಹೈನುಗಾರಿಕೆ, ಮೀನುಗಾರಿಕೆ ಪ್ರಾತ್ಯಕ್ಷಿಕ ಸಮಗ್ರ ತಾಂತ್ರಿಕತೆ ಮಾಹಿತಿ ಸಂವಾದ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ರೈತರು, ರೈತ ಮಹಿಳೆಯರು, ಸಮಗ್ರ ಕೃಷಿಕರು ಮುಂತಾದ ಪ್ರಗತಿಪರ ರೈತರುಗಳಿಗೆ ಕೃಷಿ ವಿಜ್ಞಾನಿಗಳು, ತಂತ್ರಜ್ಞಾನರು ಹಾಗೂ ವಿವಿಧ ಇಲಾಖೆಗಳ ಅದಿಕಾರಿಗಳಿಂದ ಆಧುನಿಕ ತಾಂತ್ರಿಕತೆಗಳು, ಬೇಸಾಯ ತಂತ್ರಜ್ಞಾನ, ಹೊಸ ಹೊಸ ತಳಿಗಳ ಪರಿಚಯ, ಜೈವಿಕ ಇಂಧನ ಬೆಳೆಗಳು, ಜೇನು ಸಾಕಾಣಿಕೆ, ಹೈನುಗಾರಿಕೆ ಇತ್ಯಾದಿಗಳ ಬಗ್ಗೆ ತಾಂತ್ರಿಕ ಚರ್ಚೆ, ರೈತ - ಕೃಷಿ ವಿಜ್ಞಾನಿಗಳ ಸಂವಾದ ಆಯೋಜನೆಗೊಂಡಿತ್ತು.
179 ದೇಶಗಳು ಸಾವಯವ ಕೃಷಿ ತೊಡಗಿಸಿಕೊಂಡಿವೆ
ತಾಂತ್ರಿಕ ಚರ್ಚೆಯಲ್ಲಿ ಭಾಗವಹಿಸಿ ತಾಂತ್ರಿಕತೆಯನ್ನು ನೀಡಿದ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎನ್ ದೇವಕುಮಾರ್ ಅವರು ಮಾತನಾಡುತ್ತಾ ಪ್ರಪಂಚದಲ್ಲಿ 179 ದೇಶಗಳು ಸಾವಯವ ಕೃಷಿಯಲ್ಲಿ ತೊಡಗಿಕೊಂಡು 2004 ನೇ ಇಸವಿಯಿಂದ ಸಾವಯವ ಯೋಜನೆಗೆ ಒತ್ತು ನೀಡಲಾಗಿದ್ದು ಇದಕ್ಕೆ ಪೂರಕವಾಗಿ ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳ ಲಾಭವನ್ನು ಪಡೆದು ರೈತರು ಹೆಚ್ಚಿನ ಆಧಾಯ ಗಳಿಸಿ ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡಲು ಸಲಹೆ ನೀಡಿದರು.
ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ
ಸಿರಿಧಾನ್ಯಗಳನ್ನು ಕಡಿಮೆ ಖರ್ಚು, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ರೋಗ ರುಜಿನಗಳಿಲ್ಲದೆ ಬೆಳೆಯಬಹುದಾಗಿದ್ದು ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು ಇಂತಹ ಬೆಳೆಗಳ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದರು. ತೋಟಗಾರಿಕ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಮುಖ್ಯಸ್ಥರಾದ ಅಮರನಂಜುಂಡೇಶ್ವರ ಅವರು ಮಾತನಾಡುತ್ತಾ ಆಲೂಗೆಡ್ಡೆ ಬೆಳೆಯ ಸಮಗ್ರ ಬೇಸಾಯ ಕ್ರಮಗಳು ಅವುಗಳಿಗೆ ಬರುವ ರೋಗ ಮತ್ತು ಕೀಟಗಳ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಿಸಿದರು.
ರೈತರಿಗೆ ಸಮಗ್ರವಾಗಿ ಮಾಹಿತಿ
ಈ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ ಅವನಿ ಆರ್ಗಾನಿಕ್ಸ್, ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಐ.ಸಿ.ಎ.ಆರ್-11ಹೆಚ್.ಆರ್ ಕಾಫಿ ಮಂಡಳಿ, ಸಾಂಬಾರ ಮಂಡಳಿ, ಕೆ.ವಿ.ಕೆ ಕಂದಲಿ, ಹಾಪ್ಕಾಮ್ಸ್ ಕೃಷಿ ಮಹಾವಿದ್ಯಾಲಯ ಹಾಸನ, ಜೈವಿಕ ಇಂಧನ ಉದ್ಯಾನ ಮಡೆನೂರು, ಕೃಷಿ ಯಂತ್ರೋಪಕರಣಗಳು, ರಸಗೊಬ್ಬರ, ಪೀಡೆನಾಶಕಗಳ ಮಳಿಗೆಗಳನ್ನು ತೆರೆದು ರೈತರಿಗೆ ಸಮಗ್ರವಾಗಿ ಮಾಹಿತಿಯನ್ನು ನೀಡಲಾಯಿತು.
ಈ ಸಮಗ್ರ ಕೃಷಿ ಮೇಳವು ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿದ್ದು ಸಾಂಬಾರು ಪದಾರ್ಥಗಳು, ಕಾಫಿ ಮಂಡಳಿ, ಹಾಪ್ಕಾಮ್ಸ್ ಸೇರಿದಂತೆ ವಿವಿಧ ಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು. ಮಡಿಕೇರಿ ಆಕಾಶವಾಣಿಯಿಂದ ಕೃಷಿರಾಗ ವಿಭಾಗದ ಡಾ.ವಿಜಯ ಅಂಗಡಿಅವರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.