ಬೇಸಿಗೆ ಬಂತು; ಹಾಸನದಲ್ಲಿ ನೀರಿನ ಬವಣೆ ನೀಗಿಸಲು ಏನೇನು ಕೆಲಸ ಆಗುತ್ತಿದೆ?
ಹಾಸನ, ಮಾರ್ಚ್ 4: ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆವುಂಟಾದಾಗ ಮಾತ್ರ ನಮಗೆಲ್ಲ ನೀರಿನ ಮಹತ್ವದ ಅರಿವಾಗುತ್ತದೆ. ಆಗ ನೀರಿಗಾಗಿ ಪರಿತಪಿಸುವ ನಾವು, ಮತ್ತೆ ಮಳೆಗಾಲ ಬರುತ್ತಿದ್ದಂತೆ ಎಲ್ಲವನ್ನೂ ಮರೆತು ನೀರು ಪೋಲು ಮಾಡಲು ಆರಂಭಿಸುತ್ತೇವೆ. ಆದರೆ ಒಂದು ವೇಳೆ ಮಳೆಗಾಲದಲ್ಲಿ ಪೋಲಾಗುವ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದೇ ಆದರೆ, ಬೇಸಿಗೆಯಲ್ಲಿ ಒಂದಷ್ಟು ಅಂತರ್ಜಲ ಕಾಪಾಡಲು ಸಾಧ್ಯವಾಗುತ್ತದೆ.
ಸಮಸ್ಯೆ ಎಂದರೆ, ಬಹಳಷ್ಟು ಮಂದಿಗೆ ಅಂತರ್ಜಲ ಕಾಪಾಡುವುದು ಹೇಗೆ ಎಂಬುದೇ ಗೊತ್ತಿಲ್ಲ. ಊರಲ್ಲಿದ್ದ ಕೆರೆ, ಕಲ್ಯಾಣಿ, ನೀರಿನ ಹೊಂಡಗಳನ್ನು ಸಂರಕ್ಷಿಸುವ ಕೆಲಸವಾಗುತ್ತಿಲ್ಲ. ಹಿಂದಿನ ಕಾಲದಲ್ಲಿದ್ದ ಕೆರೆ, ಕಟ್ಟೆ, ಬಾವಿಗಳು ಸದ್ದಿಲ್ಲದೆ ಮುಚ್ಚಿ ಹೋಗಿದ್ದು, ಅವುಗಳ ಮೇಲೆ ಬಡಾವಣೆಗಳು ತಲೆ ಎತ್ತಿವೆ. ಕೆರೆ ಕಟ್ಟೆಗಳಲ್ಲಿ ಹೂಳು ತುಂಬುವುದರಿಂದ ಅವುಗಳು ಕ್ರಮೇಣ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾ ಹೋಗುತ್ತವೆ. ಹೀಗೆ ನೀರಿನ ಸಂರಕ್ಷಣಾ ವಿಧಾನದ ಅರಿವೂ ಕರಗುತ್ತಾ ಸಾಗಿದೆ. ಈ ಸಂರಕ್ಷಣಾ ವಿಧಾನದ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದೇ ಸಂಸ್ಥೆಯೊಂದು ಕೆಲಸ ಮಾಡುತ್ತಿದೆ. ಹಾಸನದಲ್ಲಿ ಈ ಸಂಸ್ಥೆ ಮಾಡಿದ ಜಲಸಂರಕ್ಷಣಾ ಕಾರ್ಯದ ಮಾಹಿತಿ ಇಲ್ಲಿದೆ...
ಪರಿಸರ ಸಂರಕ್ಷಣೆಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ
ಕಲ್ಯಾಣಿ ಅಭಿವೃದ್ಧಿ ಕೈಗೆತ್ತಿಕೊಂಡ ಹಸಿರು ಭೂಮಿ
ಮಳೆಗಾಲದಲ್ಲಿ ಸುರಿಯುವ ಮಳೆಯ ನೀರು ಪೋಲಾಗದೆ ಕೆರೆಯಲ್ಲಿ ಸಂಗ್ರಹವಾಗಿ ಅದರಿಂದ ಊರಿನ ಜನ, ಜಾನುವಾರುಗಳಿಗೆ ಉಪಯೋಗವಾಗಲೆಂದು ಹಿಂದಿನ ಕಾಲದವರು ಆಯಕಟ್ಟಿನಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಹಳಷ್ಟು ಕೆರೆಗಳು ಇನ್ನಿಲ್ಲವಾಗಿವೆ. ಆದರೂ ಇರುವ ಕೆರೆ ಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಹಾಸನದ ಹಸಿರು ಭೂಮಿ ಪ್ರತಿಷ್ಠಾನ ಮುಂದಾಗಿದೆ. ಕಳೆದ ವರ್ಷ ಪಾಳುಬಿದ್ದಿದ್ದ ಹಲವು ಕೆರೆ, ಕಲ್ಯಾಣಿಗಳನ್ನು ಶ್ರಮದಾನಗಳ ಮೂಲಕ ಅಭಿವೃದ್ಧಿಗೊಳಿಸಿ ನೀರು ಸಂಗ್ರಹವಾಗುವಂತೆ ಮಾಡಿರುವುದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಹಾಸನ ಜಿಲ್ಲೆಯಲ್ಲಿ ನೀರಿಗೆ ತತ್ವಾರ
ಹಾಸನ ಜಿಲ್ಲೆಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುವ ಮೂಲಕ ಹಸಿರು ಭೂಮಿ ಪ್ರತಿಷ್ಠಾನವು ನೀರನ್ನು ಹಿಡಿದಿಡುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಹಾಸನ ಜಿಲ್ಲೆಯ ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ, ಟ್ಯಾಂಕರ್ ಗಳಿಂದ ನೀರು ಪೂರೈಸಲಾಗುತ್ತಿದೆ. ಬಹಳಷ್ಟು ಹಳ್ಳಿಗಳು ಶಾಶ್ವತ ನೀರಿನ ಸಂಕಷ್ಟಕ್ಕೀಡಾಗಿವೆ. ಕಳೆದ ಐದಾರು ವರ್ಷದಲ್ಲಿ ನೂರಾರು ರೈತರು, ಬರದ ಬೇಗೆ ತಾಳದೇ ಕೃಷಿಗಾಗಿ ಮಾಡಿದ ಸಾಲಬಾಧೆಯಿಂದ ಜೀವ ಕಳೆದುಕೊಂಡಿದ್ದಾರೆ. ಇದರ ತಡೆಗೆ ಹಂತ ಹಂತವಾಗಿ ಕಾರ್ಯ ಯೋಜನೆಗೆ ಪ್ರತಿಷ್ಠಾನ ಮುಂದಾಗಿದೆ.
ಹಾಸನ ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದ ಸಮಿತಿ
2017ರಲ್ಲಿ ಕೇಂದ್ರ ಬರ ಅಧ್ಯಯನ ಸಮಿತಿಯು ಹಾಸನ ಜಿಲ್ಲೆಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ವರದಿ ನೀಡಿದೆ. ಹೀಗಾಗಿ ಬರ ಮತ್ತು ಪ್ರವಾಹವನ್ನು ಏಕ ಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗಬೇಕಾದರೆ ಬಿದ್ದ ಮಳೆ ನೀರಿನ ಸಮರ್ಪಕ ಸಂರಕ್ಷಣೆಯಿಂದ ಮಾತ್ರ ಎಂಬುದನ್ನು ಅರಿತ ಪ್ರತಿಷ್ಠಾನ, ಪ್ರತಿ ಹಳ್ಳಿಯಲ್ಲಿ ಬೀಳುವ ಮಳೆ ನೀರನ್ನು ಸಮರ್ಪಕವಾಗಿ ಹಿಡಿದಿಡುವ ಪ್ರಯತ್ನಕ್ಕೆ ಕೈಹಾಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯರ್ನಿಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಬಾರಿ ವಿಶ್ವ ಜಲ ದಿನವಾದ ಮಾರ್ಚ್ 22ರಿಂದ ಏಪ್ರಿಲ್ 22ರ ವಿಶ್ವ ಭೂ ದಿನದವರೆಗೆ ಜನಸಮುದಾಯದ ಸಹಕಾರದೊಂದಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ಹಳ್ಳಿಯ ಕನಿಷ್ಠ ಯಾವುದಾದರೊಂದು ಪಾರಂಪರಿಕ ಜಲಮೂಲವಾದ ಕೆರೆ, ಕಲ್ಯಾಣಿ, ಕಟ್ಟೆ, ಕುಂಟೆಗಳಲ್ಲಿ ಸಂಗ್ರಹವಾದ ಹೂಳನ್ನು ತೆಗೆದು ಪುನಶ್ಚೇತನ ಮಾಡುವ ಬೃಹತ್ ಜಲಾಂದೋಲನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಎಲ್ಲರ ಸಹಾಯದೊಂದಿಗೆ ಪುನಶ್ಚೇತನ
ಇದರ ಸಮಗ್ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಸಿರುಭೂಮಿ ಪ್ರತಿಷ್ಠಾನ ಮತ್ತು ಕೆಲ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ಎಲ್ಲರ ಸಹಕಾರದೊಂದಿಗೆ ಪುನಶ್ಚೇತನ ಕೆಲಸಕ್ಕೆ ಪ್ರತಿಷ್ಠಾನವು ಮುಂದಾಗಿದೆ. ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಲೆಕ್ಕಿಗರು, ರೈತಸಂಘ, ಪರಿಸರ, ಜನಪರ ಸಂಘಟನೆಗಳು, ವ್ಯಾಪಾರಿಗಳು, ಎನ್ಎಸ್ಎಸ್ ಪದಾಧಿಕಾರಿಗಳು, ಗ್ರಾಮದ ಮಹಿಳಾ ಮತ್ತು ಯುವಕ ಸಂಘಗಳು, ಧಾರ್ಮಿಕ ಮುಖಂಡರು, ವ್ಯಾಪಾರಿಗಳು... ಹೀಗೆ ಎಲ್ಲರ ಸಹಕಾರದೊಂದಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಶ್ರಮದಾನ ಮತ್ತು ಸಾಧ್ಯವಿದ್ದ ಕಡೆ ಯಂತ್ರಗಳನ್ನು ಬಳಸಿಯೂ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು ಕೆಲವು ಗ್ರಾಮಗಳ ಗ್ರಾಮಸ್ಥರು ತಮ್ಮ ಊರಿನ ಜಲಮೂಲಗಳನ್ನು ಕಾಪಾಡಿಕೊಂಡು, ನೀರು ಹರಿದು ಬರುವ ದಾರಿಗಳನ್ನು ತೆರವುಗೊಳಿಸಿಟ್ಟುಕೊಂಡರೆ ಮಳೆಗಾಲದಲ್ಲಿ ಹರಿದು ಬರುವ ನೀರು ಕೆರೆ, ಕಟ್ಟೆಗಳಲ್ಲಿ ತುಂಬುವುದರಿಂದ ಅನುಕೂಲವಾಗಲಿದೆ. ಪ್ರತಿಷ್ಠಾನದ ಕಾರ್ಯಕ್ಕೆ ಕೈಜೋಡಿಸಲು ಇಚ್ಛಿಸುವ ಆಸಕ್ತರು 9141516430, 9448900181 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು.