ನವೆಂಬರ್ 1 ರಿಂದ ಹಾಸನಾಂಬೆಯ ದರ್ಶನ ಪಡೆಯಿರಿ
Recommended Video
ಹಾಸನ, ಅಕ್ಟೋಬರ್ 25 : ಇತಿಹಾಸ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ನವೆಂಬರ್ 1ರಿಂದ 9ರ ವರಗೆ ತೆರೆದಿರುತ್ತದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆಯಬಹುದಾಗಿದೆ.
ಹಾಸನಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು. ಜಾತ್ರೆಯ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು.
ಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣ
ಸಚಿವ ಎಚ್.ಡಿ.ರೇವಣ್ಣ ಅವರು, ಶಾಂತಿ ಸುವ್ಯವಸ್ಥೆ, ಮೂಲಭೂತ ಸೌಕರ್ಯ ಹಾಗೂ ಹಿಂದಿನ ಸಂಪ್ರದಾಯಗಳಿಗೆ ಯಾವುದೇ ಲೋಪ ಉಂಟಾಗದಂತೆ ಮಹೋತ್ಸವ ಆಚರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಭದ್ರತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವರ್ಷಕ್ಕೊಮ್ಮೆ ದೇಗುಲ ಬಾಗಿಲು ತೆರೆವ ಹಾಸನಾಂಬೆ ದರ್ಶನಕ್ಕೆ ಜನಸಾಗರ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಸಚಿವರು ಶಾಸಕರು ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಶೀಘ್ರ ದರ್ಶನದ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ನವೆಂಬರ್ 1ರಂದು ಬಾಗಿಲು ತೆರೆಯಲಿದೆ
ನವೆಂಬರ್ 1ರಿಂದ 9ರ ತನಕ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿರುತ್ತದೆ. ನವೆಂಬರ್ 1ರಂದು ಮಧ್ಯಾಹ್ನ ಬಾಗಿಲು ತೆರೆಯಲಾಗುತ್ತದೆ. ಸ್ವಚ್ಛತೆ, ಅಲಂಕಾರ, ಪೂಜಾ ವಿಧಿವಿಧಾನಗಳಿರುವುದರಿಂದ ಅಂದು ಸಾರ್ವಜನಿಕರಿಗೆ ದರ್ಶನದ ಅವಕಾಶ ಇರುವುದಿಲ್ಲ.
ನವೆಂಬರ್ 9ರಂದು ಮಧ್ಯಾಹ್ನ ದೇವಾಲಯದ ಬಾಗಿಲು ಹಾಕಲಾಗುತ್ತದೆ. ಅಂದೂ ಸಹ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ. ಉಳಿದ 7 ದಿನಗಳ ಕಾಲ ಭಕ್ತಾದಿಗಳು ದೇವಿಯ ದರ್ಶನ ಪಡೆಯಬಹುದಾಗಿದೆ.
ವರ್ಷಕ್ಕೊಮ್ಮೆ ದರ್ಶನ
ಹಾಸನಾಂಬೆ ಹಾಸನದ ಅಧಿದೇವತೆ. ವರ್ಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಆದ್ದರಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.
12ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ ಈ ದೇವಾಲಯ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಆಶ್ಲೇಷ ಪೌರ್ಣಿಮೆಯ ಪ್ರಥಮ ಗುರುವಾರದಂದು ಬಾಗಿಲು ತೆರಯಲಾಗುತ್ತದೆ. ಬಲಿಪಾಡ್ಯಮಿ ದಿನ ಬಾಗಿಲು ಹಾಕಲಾಗುತ್ತದೆ.
ಪ್ರತ್ಯೇಕ ಲೈನ್ ವ್ಯವಸ್ಥೆ
ಹಾಸನಾಂಬೆ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು. ಹಾಸನಾಂಬೆ ದೇವಾಲಯದ ಪೂಜೆ ಸಂಪ್ರದಾಯದಂತೆ ನಡೆಯಬೇಕು. ಭಕ್ತಾದಿಗಳ ದರ್ಶನಕ್ಕೆ ಹೆಚ್ಚಿನ ಅವಕಾಶ ದೊರೆಯಬೇಕು ಎಂದು ಸಚಿವ ಎಚ್.ಡಿ.ರೇವಣ್ಣ ಅವರು ಸೂಚಿಸಿದರು. ಹಿರಿಯರು, ಮಹಿಳೆಯರು, ವಿಕಲಚೇತನರಿಗೆ ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡುಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಭಕ್ತಾದಿಗಳಿಗೆ ಅಗತ್ಯ ವ್ಯವಸ್ಥೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ವತಿಯಿಂದ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತದೆ. ಹೂವಿನ ಅಲಂಕಾರ, ಪ್ರಚಾರ ವ್ಯವಸ್ಥೆ ಮಾಡಲು ಸೂಚಿಸಲಾಯಿತು.
ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತಾದಿಗಳಿಗೆ ಲಾಡು ಪ್ರಸಾದ ವಿತರಣೆ ಮಾಡಲಾಗುತ್ತದೆ. ಭಕ್ತರಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ವಿಶೇಷ ಬಸ್ ವ್ಯವಸ್ಥೆ
ಸಚಿವ ಎಚ್.ಡಿ.ರೇವಣ್ಣ ಅವರು, 'ಜಾತ್ರೆ ವೇಳೆ ನಗರ ವ್ಯಾಪ್ತಿಯಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಆಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು, ಹಾಸನ ಪ್ರವಾಸಿ ತಾಣಗಳ ದರ್ಶನ ಹಾಗೂ ಬೆಂಗಳೂರಿನಿಂದ ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ಹೇಳಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಹಿಂದಿನ ಪದ್ಧತಿ, ಈವರೆಗಿನ ಸಿದ್ಧತೆ, ವಿಶೇಷ ದರ್ಶನ ಪಾಸ್ ವ್ಯವಸ್ಥೆ, ಪ್ರವಾಸಿಗರ ವಾಹನ ಸಂಚಾರದ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದರು.