ಹಾಸನದ ಹಳ್ಳಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ! ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು
ಹಾಸನ, ನವೆಂಬರ್ 27: ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಶಶಿವಾಳ ಗ್ರಾಮದಲ್ಲಿ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪ ಇದೆ ಎಂದು ಅಲ್ಲಿ ಕೆಲವು ತಿಂಗಳಿಂದ ಸರ್ವೆ ನಡೆಸಿದ ಕೇಂದ್ರ ಜಿಯಾಲಜಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಆದರೆ ತಮ್ಮ ಜಮೀನಿನ ಅಡಿಯಲ್ಲಿ ಅಡಗಿರುವ ಚಿನ್ನ ರೈತರಿಗೆ ಆತಂಕ ತಂದಿದ್ದು, ತಮ್ಮ ಜೀವನಕ್ಕೆ ಆಧಾರವಾಗಿದ್ದ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಶಶಿವಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರನ್ನು ಕಾಡುತ್ತಿದೆ.
ಹಾಸನದ ಗ್ರಾಮದಲ್ಲಿ ಜಿಯಾಲಜಿ ಇಲಾಖೆ ಅಧಿಕಾರಿಗಳು: ಸಿಕ್ಕಿದೆ ಭಾರಿ ನಿಕ್ಷೇಪ?
ಶಶಿವಾಳ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಭೂಗರ್ಭ ಇಲಾಖೆ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದರು. ಇತ್ತೀಚೆಗೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಈ ಜಾಗದಲ್ಲಿ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪ ಇರುವುದಾಗಿ ಹೇಳಿದ್ದಾರೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಶಶಿವಾಳ, ಗೊಲ್ಲರಹಟ್ಟಿ, ರಾಮಪುರ ಗ್ರಾಮಸ್ಥರ ಭೀತಿ
ಶಶಿವಾಳ ಗ್ರಾಮಸ್ಥರು , ಗೊಲ್ಲರಹಟ್ಟಿ, ರಾಮಪುರ ಗ್ರಾಮಗಳ ಗ್ರಾಮಸ್ಥರು ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ನಿನ್ನೆಯಷ್ಟೆ ಸಭೆ ಸೇರಿ ಈ ಕುರಿತು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು ಚಿನ್ನದ ನಿಕ್ಷೇಪದ ಸರ್ವೆ ಕೈಬಿಡುವಂತೆ ಒತ್ತಾಯಿಸುವ ನಿರ್ಣಯ ಕೈಗೊಂಡಿದ್ದಾರೆ. ಈ ಸಭೆಗೆ ಸುಮಾರು 2000 ಜನರು ಸೇರಿದ್ದು ವಿಶೇಷ.
ದೇವೇಗೌಡರನ್ನು ಭೇಟಿ ಆಗಲಿರುವ ಗ್ರಾಮಸ್ಥರು
ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರು ರೈತರ ಹಾಗೂ ಗ್ರಾಮಸ್ಥರ ಪರವಾಗಿ ಧನಿ ಎತ್ತುವ ಭರವಸೆ ನೀಡಿದ್ದು, ನಿನ್ನೆ ನಡೆದ ಸಭೆಯಲ್ಲಿ ರೈತರಿಗೆ ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ಅಲ್ಲದೆ ದೇವೇಗೌಡರ ಬಳಿಗೆ ಗ್ರಾಮಸ್ಥರ ನಿಯೋಗ ಕರೆದುಕೊಂಡು ಹೋಗಿ ಮಾತನಾಡಿ ಕೇಂದ್ರದೊಂದಿಗೆ ಮಾತನಾಡಲು ಮನವಿ ಮಾಡುವುದಾಗಿಯೂ ಹೇಳಿದ್ದಾರೆ.
ಹಾಸನದಲ್ಲಿ ದೇವೇಗೌಡರ ವಿರುದ್ಧ ಬಿಜೆಪಿಯಿಂದ ಸಿ.ಟಿ.ರವಿ ಕಣಕ್ಕೆ?
ಎಷ್ಟು ಪ್ರಮಾಣದಲ್ಲಿ ನಿಕ್ಷೇಪ ಇದೆ ಪತ್ತೆಹಚ್ಚಬೇಕು
ಕೇಂದ್ರ ಜಿಯಾಲಜಿ ಅಧಿಕಾರಿಗಳ ಪ್ರಕಾರ ಶಶಿವಾಳ ಮತ್ತು ಸುತ್ತಮುತ್ತ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪ ಇದೆ. ಆದರೆ ಎಷ್ಟು ಪ್ರಮಾಣದಲ್ಲಿ ಇದೆ ಎಂಬುದನ್ನು ಪತ್ತೆ ಹಚ್ಚಲು ಸುಮಾರು 2000 ಅಡಿಗಳ ಆಳದ ಬೋರ್ವೆಲ್ ಗಳನ್ನು ಹಲವು ಕಡೆ ಕೊರೆಯಬೇಕು, ಹಲವು ಪದರಗಳಲ್ಲಿ ಮಣ್ಣು ಪರೀಕ್ಷೆ ಮಾಡಬೇಕಂತೆ. ಹೀಗೆಂದು ಅಧಿಕಾರಿಗಳು ಗ್ರಾಮಸ್ಥರ ಬಳಿ ಹೇಳಿದ್ದಾರೆ.
ಜಮೀನುಗಳಲ್ಲಿ ಕೆಂಪು ಬಾವುಟ
ತಮ್ಮ ಹೊಲ-ತೋಟಗಳಲ್ಲಿ ಅಧಿಕಾರಿಗಳು ಸರ್ವೆ ಮಾಡಿ ಕೆಂಪು ಬಾವುಟಗಳನ್ನು ನೆಟ್ಟಿದ್ದನ್ನು ಕಂಡು ಆತಂಕಗೊಂಡಿದ್ದ ಶಶಿವಾಳ ಗ್ರಾಮಸ್ಥರು ಅಧಿಕಾರಿಗಳನ್ನು ಸರ್ವೆ ಮಾಡುವುದನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ರೈತರು ಸರ್ವೆಗೆ ಅವಕಾಶ ನೀಡುತ್ತಿಲ್ಲ ಎಂದು ಇಲಾಖೆಗೆ ವರದಿ ನೀಡಿ ಎಂದು ರೈತರು, ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳು
ಪಕ್ಷಾತೀತವಾಗಿ ಬೆಂಬಲ ಘೋಷಿಸಿದ ಮುಖಂಡರು
ನಿನ್ನೆ ನಡೆದ ಬೃಹತ್ ಗ್ರಾಮಸಭೆಯಲ್ಲಿ ಶಾಸಕರು, ತಹಶೀಲ್ದಾರ್, ಜಿಲ್ಲೆಯ ಎಸ್ಪಿ ಎಲ್ಲರೂ ಸಹ ತಾವುಗಳು ಗ್ರಾಮಸ್ಥರ ಹಾಗೂ ರೈತರ ಪರ ನಿಲ್ಲುವುದಾಗಿ ಪ್ರಕಟಿಸಿದ್ದಾರೆ. ಗ್ರಾಮಸ್ಥರು ಸಹ ತಮ್ಮ ಮನವಿಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದಾರೆ. ಸಭೆಯಲ್ಲಿ ಪಕ್ಷಾತೀತವಾಗಿ ನಾಯಕರುಗಳು ಭಾಗವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗಂಗಾಧರ್, ಅನಿಲ್ ಕುಮಾರ್, ಶ್ರೀಧರ್, ಜಿ.ಪಂ ಸದಸ್ಯ ಸ್ವಾಮಿ, ಮಾಜಿ ತಾ.ಪಂ ಸದಸ್ಯ ಲೋಕೇಶ್ ಇನ್ನೂ ಹಲವು ಪ್ರಮುಖ ಮುಖಮಡರುಗಳು ಭಾಗವಹಿಸಿದ್ದರು.