ಹಾಸನ ಡಿಸಿ ಎಷ್ಟು ದಿನ ಆಟ ಆಡುತ್ತಾರೆ ಎಂದು ನಾನೂ ನೋಡುತ್ತೇನೆ: ಎಚ್.ಡಿ. ರೇವಣ್ಣ
ಹಾಸನ, ಮೇ 5: ಚೆನ್ನಾಗಿದ್ದ ತಾಲೂಕು ಕಚೇರಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದಂತೆ ಡಿಸಿ ಕಚೇರಿಯನ್ನೂ ಒಡೆದರೆ ಪರಿಣಾಮ ಬೇರೆಯಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಮಾತಾನಾಡಿದ ಅವರು, ಅಧಿಕಾರ ಇದೆ ಎಂದು ದರ್ಪ ನಡೆಸೋದು ಸರಿಯಲ್ಲ. ಹಾಸನ ಜಿಲ್ಲಾಧಿಕಾರಿ ಅನ್ ಫಿಟ್ ಆಗಿದ್ದಾರೆ. ಅವರು ರಬ್ಬರ್ ಸ್ಟಾಂಪ್ ಇದ್ದಂತೆ. ರಾತ್ರೋರಾತ್ರಿ ಕಟ್ಟಡ ಹೊಡೆಯಲು ಅವರನ್ನು ಇಟ್ಟುಕೊಂಡಿದ್ದಾರೆ. ಡಿಸಿ ಎಷ್ಟು ದಿನ ಆಟ ಆಡುತ್ತಾರೆ ನಾನೂ ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದ 2 ಹೊಬಳಿ ಹಾಗೂ ಸಕಲೇಶಪುರ ಕ್ಷೇತ್ರದ ಒಂದು ಹೋಬಳಿ ಹಾಸನ ತಾಲೂಕಿಗೆ ಸೇರುತ್ತದೆ. ಶಾಸಕರ ಕೇಳದೆ ತಹಸೀಲ್ದಾರ್ ಕಟ್ಟಡ ಒಡೆದಿದ್ದಾರೆ. ಇದಕ್ಕೆ ಅವಕಾಶ ನೀಡಿದ ಡಿಸಿ ಅವರನ್ನು ಜಿಲ್ಲಾಧಿಕಾರಿ ಎಂದು ಕರೆಯಲು ನಾಚಿಕೆಯಾಗುತ್ತೆ. ಡಿಸಿ ವಿರುದ್ಧ ರಾಜ್ಯಪಾಲರಿಗೆ, ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಎಚ್.ಡಿ. ರೇವಣ್ಣ ಕಿಡಿಕಾರಿದರು.
ಡಿಸಿ ಕಚೇರಿ ಒಡೆಯದಂತೆ ದೇವೇಗೌಡರು ಸಿಎಂ ಜೊತೆ ಮಾತಾಡಿದ್ದಾರೆ. ಡಿಸಿ ಆಫೀಸ್ ಕಟ್ಟೋಕೆ ಎಷ್ಟು ಹಣ ಬೇಕು ಗೊತ್ತಾ? ಈಗಿರೊ ಕಟ್ಟಡ ಕೆಡವಿದರೆ ಕನಿಷ್ಠ 30 ಕೋಟಿ ಬೇಕು. ಇವರು ಕೊಟ್ಟಿರೋದು ಕೇವಲ 10 ಕೋಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಇರುವ ಹೆಣ್ಣು ಮಕ್ಕಳ ಹಾಸ್ಟೆಲ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣದ ಬಗ್ಗೆ ಕಂದಾಯ ಸಚಿವರು ಸ್ಥಳಕ್ಕೆ ಬಂದು ನೋಡಲಿ. ಅವರು ಮಾಡೋದು ಸರಿ ಎಂದರೆ ನನ್ನದೇನು ಅಭ್ಯಂತರವಿಲ್ಲ ಎಂದರು.
ಒತ್ತುವರಿಯಾಗಿದ್ದರೆ ತೆರವುಗೊಳಿಸಲಿ:
"ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದ ಬಳಿ ಯಾವುದೇ ಸಾರ್ವಜನಿಕ ರಸ್ತೆ ಇಲ್ಲ. ಒಂದು ವೇಳೆ ಸಾರ್ವಜನಿಕ ರಸ್ತೆ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಲಿ ನನ್ನ ಅಭ್ಯಂತರವಿಲ್ಲ. ಕೇವಲ ಕಲ್ಯಾಣ ಮಂಟಪವಷ್ಟೇ ಅಲ್ಲ ನಗರದ ಯಾವ ಕಟ್ಟಡಗಳು ಒತ್ತುವರಿಯಾಗಿವೆ ಎಲ್ಲವನ್ನು ತೆರವುಗೊಳಿಸಲು ನಮ್ಮದೇನು ಅಭ್ಯಂತರವಿಲ್ಲ. ಮೊದಲು ನಮ್ಮಿಂದಲೇ ತೆರವು ಕಾರ್ಯ ಆರಂಭಿಸಲಿ," ಎಂದು ರೇವಣ್ಣ ಹೇಳಿದರು.
ಇನ್ನೂ ಹಾಸನ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಶಾಸಕ ಪ್ರೀತಂಗೌಡ ಅವರ ಸವಾಲು ಹಾಕಿರುವ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, "ಪಾಪ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತನಾಡೋ ಶಕ್ತಿ ನನಗಿಲ್ಲ. ನಮ್ಮ ಪಕ್ಷದ ಹೇಳಿದ ಕೆಲಸ ಮಾಡುತ್ತೇನೆ. ಪಕ್ಷ ನಿಂತುಕೊಳ್ಳಲು ಸೂಚನೆ ಕೊಟ್ಟರೆ ನಿಲ್ಲುತ್ತೇನೆ. ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ನನಗಿಂತಲೂ ಜನಪ್ರಿಯ ನಾಯಕರಿದ್ದಾರೆ. ಅವರನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ನಾನು ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ," ಎಂಬುದನ್ನು ಸ್ಪಷ್ಟಪಡಿಸಿದರು.
ಆಲೂಗೆಡ್ಡೆ ಬಿತ್ತನೆ ಬೀಜ ವಿಚಾರವಾಗಿ ಡಿಸಿ ಸಭೆ ಕರೆದಿದ್ದಾರೆ. ನನ್ನ ಪಿಎಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಯಾವುದೇ ಲೆಟರ್ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಡಿಸಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು. ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಸಚಿವ ಅಶ್ವತ್ಥ ನಾರಾಯಣ ಸಹೋದರ ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದ ವಿಚಾರದ ಬಗ್ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ ಅವರು ದೊಡ್ಡವರಿದ್ದಾರೆ, ಎತ್ತರಕ್ಕೆ ಬೆಳೆದಿದ್ದಾರೆ.ಮುಂದೆ ಅವರು ಸಿಎಂ ಆಗುವ ಕ್ಯಾಂಡಿಡೇಟ್, ಅಂತಹವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.
Recommended Video