ಹಣ ಹಂಚಿಕೆ ಮತ್ತು ಕಿತ್ತಾಟ: ಎಚ್.ಡಿ.ರೇವಣ್ಣ ಪುತ್ರನ ವಿರುದ್ಧ ಎಫ್ಐಆರ್ ದಾಖಲು
ಹಾಸನ, ಡಿಸೆಂಬರ್ 04: ಹಣ ಹಂಚಿಕೆ ಮತ್ತು ಗಲಾಟೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸೂರಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಹಾಸನದ ಚನ್ನರಾಯಪಟ್ಟಣ ತಾಲ್ಲೂಕು ನಂಬಿಗಾನಹಳ್ಳಿಯಲ್ಲಿ ಹಣ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಹಾಗೂ ಇತರ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಂಬಿಗಾನಹಳ್ಳಿಯ ತೋಟದ ಮನೆಯೊಂದಕ್ಕೆ ನುಗ್ಗಿ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದರು. ಹಲ್ಲೆ ನಡೆದ ಸಂದರ್ಭ ಸೂರಜ್ ರೇವಣ್ಣ ಹೊರಗೆ ಕಾರಿನಲ್ಲಿ ನಿಂತಿದ್ದರು, ಅವರ ಅಣತಿಯಂತೆಯೇ ಹಲ್ಲೆ ನಡೆದಿದೆ ಎಂದು ಹಲ್ಲೆಗೆ ಒಳಗಾದವರು ಹೇಳಿದ್ದಾರೆ.
ಮಂಗಳವಾರ ರಾತ್ರಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾರಾಮಾರಿ ನಡೆದಿದೆ ಎನ್ನಲಾಗುತ್ತಿದ್ದು, ಬಿಬಿಎಂಪಿ ಪಾಲಿಕೆ ಸದಸ್ಯ ಬಿಜೆಪಿಯ ಆನಂದ್ ಹೊಸೂರು, ಬೆಂಗಳೂರು ವಿಜಯನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್, ಕಾರು ಚಾಲಕ ಪ್ರವೀಣ್, ಸ್ಥಳೀಯರಾದ ಶಿವಾನಂದ್ ಅವರಿಗೆ ತೀವ್ರ ಗಾಯಗಳಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ್ ಅವರೇ ಮುಂದೆ ನಿಂತು ಹಣ ಹಂಚಿಕೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಣ ಹಂಚಿಕೆಗೆ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ನನ್ನ ಮಗ ಸ್ಥಳದಲ್ಲಿ ಇಲ್ಲದಿದ್ದರೂ ಅವನನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ' ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರಿದ್ದಾರೆ.
'ಪೊಲೀಸರ ವರ್ತನೆ ಖಂಡಿಸಿ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಮಾಡುತ್ತೇವೆ, ದಕ್ಷಿಣ ವಲಯ ಐಜಿಪಿ ಬರುವವರೆಗೆ ಧರಣಿ ನಡೆಸಲಾಗುವುದು' ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ.