ಯೆಮನ್ ಉಗ್ರರಿಂದ ಪಾರಾಗಿದ್ದ ಪಾದ್ರಿ ಹಾಸನಕ್ಕೆ ಭೇಟಿ
ಹಾಸನ, ನವೆಂಬರ್ 28 : ಹದಿನೆಂಟು ತಿಂಗಳು ಯೆಮನ್ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಪಾದ್ರಿ ಟಾಮ್ ಉಳುನ್ನಾಲಿಲ್ ಹಾಸನಕ್ಕೆ ಭೇಟಿ ನೀಡಿದ್ದರು.
ಈ ಸಮಯದಲ್ಲಿ ಅವರು ಯೆಮನ್ ಉಗ್ರರ ಕೈಲಿ ಬಂಧಿಯಾಗಿ ನರಳಿದ ದಿನಗಳನ್ನು ನೆನಪು ಮಾಡಿಕೊಂಡರು. ನಗರದ ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಯೆಮನ್ ಉಗ್ರರ ಕತೆಗಳನ್ನು ಬಿಚ್ಚಿಟ್ಟರು.
'ಆ ಉಗ್ರರ ಸಂಭಾಷಣೆ ಅರೆಬಿಕ್ ಭಾಷೆಯಲ್ಲಿತ್ತು. ನನ್ನ ಅಪಹರಣದ ಉದ್ದೇಶ ಏನೆಂದು ಕೊನೆವರೆಗೂ ತಿಳಿಯಲಿಲ್ಲ. ಅವರು ಏನು ಊಟ ಮಾಡ್ತಿದ್ದರೊ ಅದನ್ನೇ ನನಗೂ ಕೊಡುತ್ತಿದ್ದರು. ಅಪಹರಣಕಾರರನ್ನು ನೋಡಲು ಅವಕಾಶ ಒದಗಲಿಲ್ಲ. ಯಾರೂ ನನ್ನೊಂದಿಗೆ ಮಾತಾಡುತ್ತಲೇ ಇರಲಿಲ್ಲ. ಸಮಯ ಕಳೆಯುವುದೇ ದೊಡ್ಡ ಕಷ್ಟವಾಗಿತ್ತು' ಎಂದು ಟಾಮ್ ಹೇಳಿದರು.
2016ರ ಮಾರ್ಚ್ ತಿಂಗಳಿನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಪಾದ್ರಿ ಟಾಮ್ ಉಳುನ್ನಾಲಿಲ್ ಅವರ ಅಪಹರಣವಾಗಿತ್ತು. ಕ್ರೈಸ್ತ ಧರ್ಮ ಪ್ರಚಾರಕ ಸಮಿತಿಗೆ ಸೇರಿದ ಶಾಲೆ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಪಾದ್ರಿ ಟಾಮ್ ಉಜುನಾಲಿಲ್(56) ಅವರನ್ನು ಅಪಹರಿಸಿದ್ದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮವೊಂದರ ಮೇಲೆ ನಡೆಸಿ 16 ಮಂದಿಯನ್ನು ಕೊಂದಿದ್ದರು.
ಬಿಡುಗಡೆಗಾಗಿ ಪ್ರಾರ್ಥಿಸಿದ ದೇಶ ಬಾಂಧವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.