ಹಾಸನ ವಿಮಾನ ನಿಲ್ದಾಣಕ್ಕೆ ರೈತರಿಂದ ಹೆಚ್ಚುವರಿ 136 ಎಕರೆ ಜಮೀನು
ಹಾಸನ, ನವೆಂಬರ್ 14: ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ 136 ಎಕರೆ ಜಮೀನನ್ನು ರೈತರಿಂದ ಪಡೆಯುವ ವಿಷಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಎಚ್.ಡಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಸಿ.ಎನ್ ಬಾಲಕೃಷ್ಣ, ಮಾಜಿ ಶಾಸಕರಾದ ಬಿ.ವಿ ಕರೀಗೌಡ, ಪಟೇಲ್ಶಿವರಾಂ ಹಾಗೂ ವಿವಿಧ ರೈತ ಮುಖಂಡರು ಮತ್ತು ಭೂಮಾಲೀಕರ ಉಪಸ್ಥಿಯಲ್ಲಿ ಈ ಸಭೆ ನಡೆಯಿತು.
ಸಚಿವರಾದ ಎಚ್.ಡಿ ರೇವಣ್ಣ ಅವರು ಮಾತನಾಡಿ, ಹಾಸನ ಜಿಲ್ಲೆಯ ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಹಿಂದೆ ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮವಹಿಸಿದ್ದರು. ಈಗಾಗಲೇ 536 ಎಕರೆ ಭೂಸ್ವಾದೀನವಾಗಿದ್ದು, ಬಳಕೆಗೆ ಲಭ್ಯವಿದೆ. ಉಳಿಕೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಬಹುದಾಗಿದೆ.
ಆದರೆ, ಸ್ಥಳೀಯ ರೈತರ ಹಿತಕಾಯುವ ದೃಷ್ಟಿಯಿಂದ ಸಾಧ್ಯವಿರುವ ಗರಿಷ್ಟ ಭೂ ಪರಿಹಾರ ಒದಗಿಸುವ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ. ಅದಕ್ಕೆ ಎಲ್ಲರ ಒಪ್ಪಿಗೆ ಇದ್ದರೆ ಮಾತ್ರ ತಾವು ಸರ್ಕಾರದ ಮಟ್ಟದಲ್ಲಿ ಮಾತುಕರೆ ನಡೆಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ದರ ನಿಗದಿ ಹೊಣೆ
ಸ್ಥಳೀಯ ರೈತರ ಹಿತಕಾಯುವ ದೃಷ್ಟಿಯಿಂದ ಸಾಧ್ಯವಿರುವ ಗರಿಷ್ಟ ಭೂ ಪರಿಹಾರ ಒದಗಿಸುವ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪಟೇಲ್ ಶಿವರಾಂ, ಬಿ.ವಿ ಕರೀಗೌಡ, ಸ್ವಾಮಿಗೌಡ ಅವರು ಜಿಲ್ಲಾ ಉಸ್ತುವರಿ ಸಚಿವರು ಕೈಗೊಳ್ಳುವ ತೀರ್ಮಾನಕ್ಕೆ ತಾವೆಲ್ಲರೂ ಬದ್ದರಿರುವುದಾಗಿ ಹೇಳಿದರು. ಸಚಿವರು ನಿಗದಿಪಡಿಸುವ ದರಕ್ಕೆ ಸಾಮೂಹಿಕವಾಗಿ ಒಪ್ಪಿಗೆ ನೀಡಲು ಎಲ್ಲರೂ ಸಿದ್ಧರಿದ್ದು, ತಮ್ಮ ಪರವಾಗಿ ಭೂ ಪರಿಹಾರ ನಿಗಧಿಗೆ ಅಗತ್ಯ ಕ್ರಮವಹಿಸುವಂತೆ ಎಲ್ಲಾ ರೈತರು ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿರುವುದಾಗಿ ತಿಳಿಸಿದರು.
ಸಚಿವರಾದ ರೇವಣ್ಣ ಅವರು ಮಾತನಾಡಿ
ಸಚಿವರಾದ ರೇವಣ್ಣ ಅವರು ಮಾತನಾಡಿ ಜಿಲ್ಲೆಯ ಹಿತದೃಷ್ಟಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿದ್ದು, ಕೇಂದ್ರ ಮಟ್ಟದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶ್ರಮಿಸುತ್ತಿರುವುದರಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಉದ್ದೇಶಿತ ವಿಮಾನ ನಿಲ್ದಾಣದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ವಿಮಾನ ದುರಸ್ಥಿ ಮತ್ತು ಸರ್ವೀಸ್ ಕೇಂದ್ರ ಹಾಗೂ ಯುವ ಸಮುದಾಯದ ತರಬೇತಿ ಕೇಂದ್ರ ಪ್ರಾರಂಭಿಸುವ ಯೋಜನೆಗೆ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಮಾತನಾಡಿ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಮಾತನಾಡಿ, ಈಗಾಗಲೇ 536 ಎಕರೆ ಜಮೀನು ಸರ್ಕಾರದ ವಶದಲ್ಲಿದೆ. ಅಷ್ಟರಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಬಹುದಾಗಿದೆಯಾದರೂ ಸುಸಜ್ಜಿತವಾಗಿ ಮಾಡಿದರೆ ಸ್ಥಳೀಯರಿಗೆ ಅನುಕೂಲವೆಂಬ ಅಭಿಪ್ರಾಯದಿಂದ ಉಳಿದ 136 ಎಕರೆಯನ್ನು ನಿಯಮಾನುಸಾರ ಪಡೆಯಲು ಕ್ರಮವಹಿಸಲಾಗುತ್ತಿದೆ. ಎಲ್ಲಾ ಭೂಮಾಲೀಕರು ಒಮ್ಮತದ ತೀರ್ಮಾನ ಕೈಗೊಂಡರೆ ಸುಲಭವಾಗಿ ಹಾಗೂ ಶೀಘ್ರವಾಗಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಹೇಳಿದರು.
ದೇವೇಗೌಡರ ಬಹುದಿನಗಳ ಬಯಕೆ
ವಿಮಾನ ನಿಲ್ದಾಣ ಸ್ಥಾಪನೆಗೆ ಭೂಮಿ ಬಿಟ್ಟು ಕುಡುವ ಕುರಿತಂತೆ ನ.15 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಹಾಗೂ ಅಪರ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ರೈತರೊಂದಿಗೆ ಮತ್ತೊಂದು ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಇನ್ನೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.
ಹಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏರ್ಪೋರ್ಟ್ ನಿರ್ಮಾಣ. ಇಷ್ಟು ಕಾಲವಾದರೂ ನನ್ನ ಬಯಕೆ ತೀರದೆ ಇರುವುದು ನನಗೆ ಬೇಸರ ತಂದಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 2015ರಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.